

ಶಬರಿಮಲೆ ದೇವಸ್ಥಾನದಲ್ಲಿ ಚಿನ್ನ ಕಳವಾಗಿರುವ ಪ್ರಕರಣದಲ್ಲಿ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಇಂದು ಮಂಗಳವಾರ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಾದ್ಯಂತ 21 ಸ್ಥಳಗಳಲ್ಲಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ದಾಳಿ ನಡೆಸಲಾಗಿದ್ದು, ಪ್ರಮುಖ ಆರೋಪಿ ಬೆಂಗಳೂರಿನಲ್ಲಿರುವ ಉನ್ನಿಕೃಷ್ಣನ್ ಪೊಟ್ಟಿ, ಕೇರಳದಲ್ಲಿರುವ ತಿರುವಾಂಕೂರು ದೇವಸ್ವಂ ಮಂಡಳಿ (TDB) ಮಾಜಿ ಅಧ್ಯಕ್ಷ ಎ. ಪದ್ಮಕುಮಾರ್ ಮತ್ತು ಹಲವಾರು ಆಭರಣ ವ್ಯಾಪಾರಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ವ್ಯಾಪಕ ಶೋಧ ನಡೆಸಲಾಗಿದೆ.
ಕೇರಳ ಪೊಲೀಸರು ಸಲ್ಲಿಸಿದ ಬಹು ಎಫ್ಐಆರ್ಗಳನ್ನು ಗಮನದಲ್ಲಿಟ್ಟುಕೊಂಡು ಜಾರಿ ನಿರ್ದೇಶನಾಲಯ ಜನವರಿ 9 ರಂದು ಪಿಎಂಎಲ್ಎ ಪ್ರಕರಣವನ್ನು ದಾಖಲಿಸಿತ್ತು.
ಕೇರಳ ಹೈಕೋರ್ಟ್ನ ಮೇಲ್ವಿಚಾರಣೆಯಲ್ಲಿ ರಾಜ್ಯ ವಿಶೇಷ ತನಿಖಾ ತಂಡ (SIT) ಕೂಡ ಈ ಪ್ರಕರಣವನ್ನು ತನಿಖೆ ಮಾಡುತ್ತಿದೆ.
ಈ ಪ್ರಕರಣವು ದುಷ್ಕೃತ್ಯ, ಆಡಳಿತಾತ್ಮಕ ಲೋಪಗಳು ಮತ್ತು ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿನ ಪವಿತ್ರ ಕಲಾಕೃತಿಗಳಿಂದ ಚಿನ್ನವನ್ನು ದುರುಪಯೋಗಪಡಿಸಿಕೊಳ್ಳಲು ಕ್ರಿಮಿನಲ್ ಪಿತೂರಿಯಂತಹ ಅಕ್ರಮಗಳನ್ನು ಒಳಗೊಂಡಿದೆ.
ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹಗಳಲ್ಲಿ ಬಳಸಲಾದ ಚಿನ್ನದ ಹೊದಿಕೆಯ ತಾಮ್ರದ ತಟ್ಟೆಗಳು ಮತ್ತು ಶ್ರೀಕೋವಿಲ್ (ಗರ್ಭಗುಡಿ) ಬಾಗಿಲು ಚೌಕಟ್ಟುಗಳಿಂದ ಚಿನ್ನವನ್ನು ಕದ್ದುಹೋದ ಆರೋಪಗಳು ಕೇಳಿಬರುತ್ತಿವೆ.
2019 ಮತ್ತು 2025 ರ ನಡುವೆ ಅಧಿಕೃತ ದಾಖಲೆಗಳಲ್ಲಿ ಚಿನ್ನದ ಹೊದಿಕೆಯ ಕಲಾಕೃತಿಗಳನ್ನು ಉದ್ದೇಶಪೂರ್ವಕವಾಗಿ ತಾಮ್ರ ತಟ್ಟೆಗಳು ಎಂದು ದಾಖಲಿಸಲಾಗಿದೆ. ಇವುಗಳನ್ನು ದೇವಾಲಯದ ಆವರಣದಿಂದ ಅಕ್ರಮವಾಗಿ ತೆಗೆದುಹಾಕಲಾಗಿದೆ ಎಂದು ಪ್ರಾಥಮಿಕ ಶೋಧಗಳು ಹೇಳುತ್ತವೆ.
ಚೆನ್ನೈ ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ರಾಸಾಯನಿಕ ಪ್ರಕ್ರಿಯೆಗಳನ್ನು ಬಳಸಿಕೊಂಡು ಚಿನ್ನವನ್ನು ಹೊರತೆಗೆಯಲಾಗಿದೆ ಎಂದು ಹೇಳಲಾಗಿದ್ದು, ಇದರಿಂದ ಬಂದ ಹಣವನ್ನು ನಂತರ ಮರೆಮಾಚಿ ವರ್ಗಾಯಿಸಲಾಗಿದೆ.
ಅಕ್ರಮ ಹಣವನ್ನು ಪತ್ತೆಹಚ್ಚುವುದು, ಫಲಾನುಭವಿಗಳನ್ನು ಗುರುತಿಸುವುದು, ಅಪರಾಧ ದಾಖಲೆಗಳು ಮತ್ತು ಡಿಜಿಟಲ್ ಪುರಾವೆಗಳನ್ನು ವಶಪಡಿಸಿಕೊಳ್ಳುವುದು ಮತ್ತು ಆಪಾದಿತ ಹಣ ವರ್ಗಾವಣೆಯ ಪೂರ್ಣ ಪ್ರಮಾಣವನ್ನು ನಿರ್ಧರಿಸುವುದು ಶೋಧಗಳ ಗುರಿಯಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಶಬರಿಮಲೆಯಲ್ಲಿ ಶಂಕಿತ ಆರ್ಥಿಕ ಅಕ್ರಮಗಳನ್ನು ಸಹ ತನಿಖೆಯು ಗುರುತಿಸಿದೆ. ಇದರಲ್ಲಿ ದೇವಾಲಯದ ಕಾಣಿಕೆಗಳು ಮತ್ತು ಧಾರ್ಮಿಕ-ಸಂಬಂಧಿತ ವೆಚ್ಚಗಳಿಗೆ ಸಂಬಂಧಿಸಿದ ದುರುಪಯೋಗವೂ ಸೇರಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
Advertisement