

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ 100ಕ್ಕೂ ಹೆಚ್ಚು ಪ್ರಮುಖ ರಾಜಕಾರಣಿಗಳು, ಮಾಜಿ ರಾಜತಾಂತ್ರಿಕರು ಹಾಗೂ ನಾಗರಿಕ ಸಮಾಜದ ಸದಸ್ಯರು ಜಂಟಿಯಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಪತ್ರ ಬರೆದಿದ್ದು, ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧವನ್ನು ಪುನಃಸ್ಥಾಪಿಸಲು ಮತ್ತು ಎರಡು ನೆರೆಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಸಾಮಾನ್ಯಗೊಳಿಸಲು ಮನವಿ ಮಾಡಿದ್ದಾರೆ.
ದ್ವಿಪಕ್ಷೀಯ ಸಂಬಂಧಗಳಲ್ಲಿ ನಿರಂತರ ಬಿಕ್ಕಟ್ಟುಗಳ ಮಧ್ಯೆ ಈ ಮನವಿ ಬಂದಿದ್ದು, ಎರಡೂ ಸರ್ಕಾರಗಳು ಮಾತುಕತೆಯನ್ನು ಪುನರಾರಂಭಿಸಲು, ವ್ಯಾಪಾರ ಮತ್ತು ಸಾರಿಗೆ ಸಂಪರ್ಕಗಳನ್ನು ಪುನಃ ತೆರೆಯಲು ಹಾಗೂ ಜನರಿಂದ ಜನರಿಗೆ ವಿನಿಮಯ ವಿಸ್ತರಿಸಲು ಕರೆ ನೀಡಿದ್ದಾರೆ.
ಈ ಬಹಿರಂಗ ಪತ್ರಕ್ಕೆ ಒಟ್ಟು 116 ಜನ ಸಹಿ ಹಾಕಿದ್ದಾರೆ. ಭಾರತದ 61 ಮತ್ತು ಪಾಕಿಸ್ತಾನದ 55 ಮಂದಿ ಸಹಿ ಹಾಕಿದ್ದು, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ, ಮಾಜಿ ಸಂಶೋಧನಾ ಮತ್ತು ವಿಶ್ಲೇಷಣಾ ಘಟಕ(RAW)ದ ಮುಖ್ಯಸ್ಥ ಎ.ಎಸ್. ದುಲಾತ್, ರಾಜ್ಯಸಭಾ ಸಂಸದ ಮನೋಜ್ ಝಾ, ಪಾಕಿಸ್ತಾನದ ಮಾಜಿ ರಾಜತಾಂತ್ರಿಕ ಅಶ್ರಫ್ ಜೆಹಾಂಗೀರ್ ಖಾಜಿ, ಮಧ್ಯಮವಾದಿ ಪ್ರತ್ಯೇಕತಾವಾದಿ ನಾಯಕ ಮಿರ್ವೈಜ್ ಉಮರ್ ಫಾರೂಕ್, ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ಮತ್ತು ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮಹಮೂದ್ ಕಸೂರಿ ಸೇರಿದ್ದಾರೆ.
ಶಾಂತಿ ಮತ್ತು ಪ್ರಗತಿ ಕೇಂದ್ರದ ಅಧ್ಯಕ್ಷರಾದ ಓ.ಪಿ. ಷಾ ಅವರ ಸಮನ್ವಯದೊಂದಿಗೆ, ಜೂನ್ 30 ರಂದು ಬರೆದ ಈ ಪತ್ರವು, "ದಕ್ಷಿಣ ಏಷ್ಯಾದಲ್ಲಿ ಶಾಂತಿ, ಸಾಮಾನ್ಯತೆ, ಸಂವಾದ ಮತ್ತು ಸಹಕಾರವನ್ನು ಪುನಃಸ್ಥಾಪಿಸಲು ಅರ್ಥಪೂರ್ಣ ಹಾಗೂ ನಿರಂತರ ಕ್ರಮಗಳನ್ನು" ತೆಗೆದುಕೊಳ್ಳುವಂತೆ ಎರಡೂ ಸರ್ಕಾರಗಳನ್ನು ಒತ್ತಾಯಿಸಿದೆ. "ನಿರಂತರ ಮಾತುಕತೆ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವ ಏಕೈಕ ಮಾರ್ಗವಾಗಿದೆ" ಎಂದು ಅವರು ಹೇಳಿದ್ದಾರೆ.
ಹೈಕಮಿಷನರ್ಗಳ ಪುನಃಸ್ಥಾಪನೆ, ಸಾಮಾನ್ಯ ವೀಸಾ ಸೇವೆಗಳ ಪುನರಾರಂಭ ಮತ್ತು ಎಲ್ಲಾ ಬಾಕಿ ಇರುವ ಸಮಸ್ಯೆಗಳನ್ನು ಒಳಗೊಂಡ ಸಮಗ್ರ ದ್ವಿಪಕ್ಷೀಯ ಮಾತುಕತೆ ಪುನರಾರಂಭ ಸೇರಿದಂತೆ ರಾಜತಾಂತ್ರಿಕ ಸಂಬಂಧಗಳ ಪುನಃಸ್ಥಾಪನೆಗೆ ಸಹಿ ಹಾಕಿದವರು ಕರೆ ನೀಡಿದ್ದಾರೆ.