

ಕೋಲ್ಕತ್ತಾ: ದ್ವೇಷ ಭಾಷಣ ವಿಚಾರಕ್ಕೆ ಸಂಬಂಧಿಸಿದಂತೆ ಎಜೆಯುಪಿ ಮುಖ್ಯಸ್ಥ ಮತ್ತು ನೌಡಾ ಶಾಸಕ ಹುಮಾಯೂನ್ ಕಬೀರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ತಾನು ಮಾಜಿ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಂತೆ ದುರ್ಬಲ ಮತ್ತು ಹೇಡಿ ಸಿಎಂ ಅಲ್ಲ ಎಂದು ಶುಕ್ರವಾರ ಹೇಳಿದ್ದಾರೆ.
ಇಂದು ವಿಧಾನಸಭಾ ಉಪಚುನಾವಣೆಗೆ ಮುನ್ನ ಮುರ್ಷಿದಾಬಾದ್ನ ರೆಜಿನಗರದಲ್ಲಿ ನಡೆದ ಬಿಜೆಪಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಧಿಕಾರಿ, ರಾಜ್ಯದಲ್ಲಿ ಕೋಮು ಉದ್ವಿಗ್ನತೆಯನ್ನು ಹೆಚ್ಚಿಸುವ ಚುನಾಯಿತ ಪ್ರತಿನಿಧಿಗಳ "ಅಜಾಗರೂಕ" ಹೇಳಿಕೆಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಇತ್ತೀಚೆಗೆ ಪ್ರಚೋದನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ತೀವ್ರ ಟೀಕೆಗೆ ಗುರಿಯಾಗಿರುವ ನೌಡಾ ಶಾಸಕ ಹುಮಾಯೂನ್ ಕಬೀರ್ ಅವರನ್ನು ಉಲ್ಲೇಖಿಸಿ, ನಾನು ಮಮತಾ ಬ್ಯಾನರ್ಜಿಯವರಂತೆ ದುರ್ಬಲ ಮತ್ತು ಹೇಡಿ ಮುಖ್ಯಮಂತ್ರಿಯಲ್ಲ ಎಂದರು.
ತಪ್ಪು ಮಾಡಬೇಡಿ. ಚುನಾಯಿತ ಪ್ರತಿನಿಧಿಗಳಿಂದ ಬರುವ ಅಜಾಗರೂಕ ಹೇಳಿಕೆಗಳನ್ನು ನಾನು ಸಹಿಸುವುದಿಲ್ಲ. ದೇಶದ ಸಂವಿಧಾನವನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಶಾಸಕರು ತಮ್ಮ ಪದಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಮುಂದಿನ 30ರಿಂದ 45 ದಿನಗಳಲ್ಲಿ ರೆಜಿನಗರ ಉಪಚುನಾವಣೆ ನಡೆಯಲಿದೆ. ಈ ಪ್ರದೇಶದಲ್ಲಿ ಬಹಳ ದಿನಗಳಿಂದ ಆಚರಣೆಯಲ್ಲಿರುವ ಹಿಂದೂ-ಮುಸ್ಲಿಂ ರಾಜಕೀಯಕ್ಕೆ ವಿರುದ್ಧವಾಗಿ ಇಲ್ಲಿನ ಮತದಾರರು ಯಾವುದೇ ಬೇಡಿಕೆಗಳನ್ನು ಹೊಂದಿರಲಿ. ಬಿಜೆಪಿ ಕೋಮು ರಾಜಕೀಯಕ್ಕಿಂತ ಅಭಿವೃದ್ಧಿಯತ್ತ ಗಮನ ಹರಿಸುತ್ತದೆ ಎಂದು ತಿಳಿಸಿದ್ದಾರೆ.
ಹಿಂದಿನ ಟಿಎಂಸಿ ನೇತೃತ್ವದ ಸರ್ಕಾರದ ಅಡಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ಪ್ರಸ್ತಾವಿತ ರಾಷ್ಟ್ರೀಯ ನಾಗರಿಕರ ನೋಂದಣಿ(ಎನ್ಆರ್ಸಿ) ಮತ್ತು ವಕ್ಫ್ ಕಾಯ್ದೆಯಂತಹ ವಿಷಯಗಳ ವಿರುದ್ಧದ ಪ್ರತಿಭಟನೆಗಳ ಹೆಸರಿನಲ್ಲಿ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಅಶಾಂತಿ ಉಂಟಾಗಿ ನಿವಾಸಿಗಳು ತೊಂದರೆ ಅನುಭವಿಸಿದ್ದಾರೆ ಎಂದು ಹೇಳಿದ್ದಾರೆ.