

ನವದೆಹಲಿ: ಸುಪ್ರೀಂಕೋರ್ಟ್ ನಲ್ಲಿ ಶುಕ್ರವಾರ ಭಾರೀ ಹೈಡ್ರಾಮ ನಡೆದಿದೆ. ದೂರುದಾರರೊಬ್ಬರು ಕೋರ್ಟ್ ಹಾಲ್ ನಲ್ಲಿ ಕಾಗದ ಪತ್ರಗಳನ್ನು ಎಸೆದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ನಿಂದಿಸಿದ್ದಾರೆ.
ಕಲಾಪಕ್ಕೆ ಅಡ್ಡಿಪಡಿಸಿದ ನಂತರ ಭದ್ರತಾ ಸಿಬ್ಬಂದಿ ಅವರನ್ನು ಹೊರಗೆ ಕಳುಹಿಸಿದ್ದಾರೆ. ಬೆಳಗ್ಗೆ11 ಗಂಟೆ ಸುಮಾರಿನಲ್ಲಿ ನ್ಯಾಯಮೂರ್ತಿ ಕೆವಿ ವಿಶ್ವನಾಥನ್ ಮತ್ತು ಅಲೋಕ್ ಅರಾಧೆ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಈ ಘಟನೆ ನಡೆದಿದೆ.
ಪ್ರಬಲ್ ಪ್ರತಾಪ್ ಎಂದು ನ್ಯಾಯಪೀಠದ ಮುಂದೆ ವಿಚಾರಣೆಗೆ ಹಾಜರಾದ ದೂರುದಾರ, ಜಡ್ಜ್ ಗಳನ್ನು ನ್ಯಾಯಿಕ ಸೇವಕರು ಎಂದು ಹೇಳಿದರು. ಸೈಬರ್ ಕ್ರೈಮ್ ನಲ್ಲಿ ಸಿಂಡಿಕೇಟ್ ನಡೆಸುತ್ತಿರುವುದಕ್ಕಾಗಿ ಲಕ್ನೋದ ASP ವಿರುದ್ಧ ಎಫ್ ಐಆರ್ ದಾಖಲಿಸಲು ಆದೇಶ ನೀಡಬೇಕು ಎಂದು ಹೇಳಿದರು.
ಇದರಿಂದ ಅಚ್ಚರಿಗೊಂಡ ನ್ಯಾಯಮೂರ್ತಿ ಕೆವಿ ವಿಶ್ವನಾಥನ್, ನೀವು, ನಮಗೆ ಆರ್ಡರ್ ಮಾಡ್ತೀರಾ? ಎಂದು ಕೇಳಿದರು. ಆದರೆ ದೂರುದಾರ ಮುಖ್ಯ ನ್ಯಾಯಮೂರ್ತಿಯನ್ನು ನಿಂದಿಸುತ್ತಾ, ಕೋರ್ಟ್ ಹಾಲ್ ನಲ್ಲಿ ಕಾಗದ ಪತ್ರಗಳನ್ನು ಎಸೆದು ಕಲಾಪಕ್ಕೆ ಅಡ್ಡಿಪಡಿಸಿದರು.
ಕೂಡಲೇ ಮಧ್ಯ ಪ್ರವೇಶಿಸಿದ ಕೋರ್ಟ್ ನ ಭದ್ರತಾ ಸಿಬ್ಬಂದಿ, ದೂರುದಾರರನ್ನು ಕೋರ್ಟ್ ಹಾಲ್ ನಿಂದ ಹೊರಗೆ ಕಳುಹಿಸಿದರು. ಬಳಿಕ ಆತನನ್ನು ಕೆಲಕಾಲ ಬಂಧಿಸಲಾಗಿತ್ತು ಎನ್ನಲಾಗಿದೆ.
ಕಲಾಪಕ್ಕೆ ಅಡ್ಡಿಪಡಿಸಿದರೂ ದೂರುದಾರನ ವಿರುದ್ಧ ನ್ಯಾಯಪೀಠ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಆತನ ವಿರುದ್ಧ ಯಾವುದೇ ಕ್ರಮವನ್ನು ಆದೇಶಿಸಿಲ್ಲ. "ಅವರು ತುಂಬಾ ತೊಂದರೆಯಲ್ಲಿದ್ದಾರೆ. ಹತಾಶೆಯಿಂದ ಹೀಗೆ ಮಾಡಿದ್ದಾರೆ. ನಮಗೆ ಅವರ ಬಗ್ಗೆ ಸಹಾನುಭೂತಿ ಇದೆ ಎಂದು ನ್ಯಾಯಮೂರ್ತಿ ವಿಶ್ವನಾಥನ್ ಹೇಳಿದರು.
ಲಖನೌದ ವಿಶೇಷ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಕಸ್ಟಮ್ಸ್) ಅವರ ನಿರ್ಧಾರದ ವಿರುದ್ಧದ ರಿಟ್ ಅರ್ಜಿಯನ್ನು ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಅರ್ಜಿದಾರರು ಪ್ರಶ್ನಿಸಿದ್ದರು. ಹೈಕೋರ್ಟ್ನ ತೀರ್ಪಿನಲ್ಲಿ ಹಸ್ತಕ್ಷೇಪಕ್ಕೆ ಸೂಕ್ತ ಕಾರಣ ಇಲ್ಲ ಎಂಬುದನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ ವಿಶೇಷ ರಜೆ ಅರ್ಜಿಯನ್ನು ವಜಾಗೊಳಿಸಿ, ವಿಷಯವನ್ನು ಮುಕ್ತಾಯಗೊಳಿಸಿತು.