

ಪುಣೆ: ಪುಣೆ ಬಳಿಯ ಮೋಶಿ ತ್ಯಾಜ್ಯ ಸಂಸ್ಕರಣಾ ಘಟಕದ ಮೇಲೆ ತ್ಯಾಜ್ಯದ ಗುಡ್ಡ ಕುಸಿದು ಬಿದ್ದು ಅವಶೇಷಗಳಡಿ ಸಿಲುಕಿ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿದ್ದು, ಒಳಗೆ ಸಿಲುಕಿಕೊಂಡಿದ್ದ ಅಂದಾಜು 23 ಜನರಲ್ಲಿ 14 ಜನರನ್ನು ರಕ್ಷಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ಸಂಜೆ ತಿಳಿಸಿದ್ದಾರೆ.
ಘಟನೆ ನಡೆದು ಮೂರು ದಿನಗಳ ನಂತರವೂ ಇನ್ನೂ ಒಬ್ಬ ವ್ಯಕ್ತಿ ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪಿಂಪ್ರಿ ಚಿಂಚ್ವಾಡ್ ಪುರಸಭೆ ಆಯುಕ್ತ ವಿಜಯ್ ಸೂರ್ಯವಂಶಿ ಅವರು ಹೇಳಿದ್ದಾರೆ.
ಬುಧವಾರ, ಪಿಂಪ್ರಿ ಚಿಂಚ್ವಾಡ್ ಮಹಾನಗರ ಪಾಲಿಕೆಗೆ ಸೇರಿದ ತ್ಯಾಜ್ಯದಿಂದ ಇಂಧನ(ಡಬ್ಲ್ಯೂಟಿಇ) ಘಟಕದ ಮೂರು ಅಂತಸ್ತಿನ ಆಡಳಿತ ಕಟ್ಟಡದ ಮೇಲೆ ಪಕ್ಕದ ತ್ಯಾಜ್ಯದ ಗುಡ್ಡ ಕುಸಿದು ಬಿದ್ದು ದುರಂತ ಸಂಭವಿಸಿತ್ತು.
ವಿಶೇಷ ಯಂತ್ರಗಳು ಸೇರಿದಂತೆ ಸುಮಾರು 15 ಅಗೆಯುವ ಯಂತ್ರಗಳು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ(ಎನ್ಡಿಆರ್ಎಫ್) ಮತ್ತು ಸೇನೆ ಸೇರಿದಂತೆ ಇತರ ಸಂಸ್ಥೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದರು. ಭಾರೀ ಮಳೆ ಮತ್ತು ಕಸದ ರಾಶಿಯಿಂದ ಹೊರಹೊಮ್ಮುವ ವಿಷಕಾರಿ ಅನಿಲಗಳು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಹೇಳಿದ್ದಾರೆ.
"ದುರದೃಷ್ಟಕರ ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆಯ ನಂತರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.