

ಲಖನೌ: ರಸ್ತೆ ವಿಸ್ತರಣೆ ಕಾಮಗಾರಿ ವೇಳೆ ಕಾಳಿ ಮಾತೆ ದೇಗುಲ ಗೋಪುರ ಕುಸಿದು ಪಿಡಬ್ಲ್ಯುಡಿ ಸಿಬ್ಬಂದಿ ಸಾವನ್ನಪ್ಪಿರುವ ಭೀಕರ ಘಟನೆ ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಮುಘಲ್ಸರಾಯ್ ಕೋಟ್ವಾಲಿ ವ್ಯಾಪ್ತಿಯಲ್ಲಿ ನಡೆದಿದೆ.
ರಸ್ತೆ ವಿಸ್ತರಣೆ ಕಾಮಗಾರಿಯ ಅಂಗವಾಗಿ ಪುರಾತನ ಕಾಳಿ ದೇವಸ್ಥಾನವನ್ನು ತೆರವುಗೊಳಿಸುವ ವೇಳೆ ಭಾರೀ ಅವಘಡ ಸಂಭವಿಸಿದ್ದು, ಸಾರ್ವಜನಿಕ ಕಾಮಗಾರಿಗಳ ಇಲಾಖೆ (ಪಿಡಬ್ಲ್ಯುಡಿ) ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಶುಕ್ರವಾರ ತಡರಾತ್ರಿ ರಸ್ತೆ ವಿಸ್ತರಣೆ ಕಾಮಗಾರಿಗಾಗಿ ಬುಲ್ಡೋಜರ್ ಬಳಸಿ ದೇವಸ್ಥಾನವನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿತ್ತು.
ಈ ವೇಳೆ ಪದಾವ್ ಡಾಂಡಿ ನಿವಾಸಿ ಹಾಗೂ ಪಿಡಬ್ಲ್ಯುಡಿ ಸಿಬ್ಬಂದಿಯಾಗಿದ್ದ ಝುಮ್ರಿ ಅಲಿಯಾಸ್ ಬಲದೇವ್ (58) ಅವರು ಹಗ್ಗವನ್ನು ಹಿಡಿದು ನಿಂತಿದ್ದರು. ಅದೇ ವೇಳೆ ದೇವಸ್ಥಾನದ ಬೃಹತ್ ಗುಮ್ಮಟ ಏಕಾಏಕಿ ಕುಸಿದು ಬಿದ್ದಿದೆ.
ಕೆಳಗೆ ಬೀಳುವಾಗ ಗುಮ್ಮಟವು ಮೊದಲು ಬುಲ್ಡೋಜರ್ನ ಬಕೆಟ್ಗೆ ತಾಗಿ ದಿಕ್ಕು ಬದಲಿಸಿಕೊಂಡು ಬಲದೇವ್ ಹಾಗೂ ಮತ್ತೊಬ್ಬ ವ್ಯಕ್ತಿಯ ಮೇಲೆ ಬಿದ್ದ ಪರಿಣಾಮ ಇಬ್ಬರೂ ಅವಶೇಷಗಳಡಿ ಸಿಲುಕಿಕೊಂಡರು.
ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಗಾಯಗೊಂಡ ಇಬ್ಬರನ್ನೂ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಬಲದೇವ್ ಮೃತಪಟ್ಟರು. ಮತ್ತೊಬ್ಬ ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಬಳಿಕ ಆಡಳಿತಾಧಿಕಾರಿಗಳು, ಪೊಲೀಸರು ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಸುರಕ್ಷತಾ ಕ್ರಮವಾಗಿ ದೇವಸ್ಥಾನ ತೆರವು ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.
ಮಾಹಿತಿ ತಿಳಿಯುತ್ತಿದ್ದಂತೆ ಮುಘಲ್ಸರಾಯ್ ಉಪ ವಿಭಾಗಾಧಿಕಾರಿ (ಎಸ್ಡಿಎಂ) ರಾಜೀವ್ ಮೋಹನ್ ಸಕ್ಸೇನಾ ಹಾಗೂ ಕೋಟ್ವಾಲಿ ಠಾಣೆ ಪ್ರಭಾರಿ ವಿಜಯ್ ಪ್ರತಾಪ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಿಗಳು ಘಟನೆಯ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದು, ಅವಘಡಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ.
ತನಿಖೆಗೆ ಆದೇಶ
ರಸ್ತೆ ವಿಸ್ತರಣೆ ಯೋಜನೆಯ ಭಾಗವಾಗಿ ದೇವಸ್ಥಾನದ ತೆರವು ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಗುಮ್ಮಟ ಏಕಾಏಕಿ ಕುಸಿದ ಪರಿಣಾಮ ಪಿಡಬ್ಲ್ಯುಡಿ ಸಿಬ್ಬಂದಿ ಅವಶೇಷಗಳಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಮ್ಮಟ ಕುಸಿಯಲು ನಿಖರ ಕಾರಣವೇನು ಹಾಗೂ ಸುರಕ್ಷತಾ ಕ್ರಮಗಳಲ್ಲಿ ಯಾವುದೇ ಲೋಪವಾಗಿದೆಯೇ ಎಂಬುದನ್ನು ಪತ್ತೆಹಚ್ಚಲು ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ. ತನಿಖಾ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.