

ನವದೆಹಲಿ: ಬಾಲಿವುಡ್ನ ಬಹುಚರ್ಚಿತ 'ಧುರಂಧರ್' ಸಿನಿಮಾ ಬಿಡುಗಡೆಯಾದ ಬಳಿಕ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನೇತೃತ್ವದ ಡಿ-ಕಂಪನಿ ದೇಶದಲ್ಲಿ ಮತ್ತೆ ತನ್ನ ಚಟುವಟಿಕೆ ಆರಂಭಿಸಿರುವ ಶಂಕೆ ವ್ಯಕ್ತವಾಗಿದೆ.
ದುರಂಧರ್ ಚಿತ್ರದಲ್ಲಿನ ಪ್ರಮುಖ ಪಾತ್ರವೊಂದು ದಾವೂದ್ ಇಬ್ರಾಹಿಂನನ್ನು ನೆನಪಿಸುವ ರೀತಿಯಲ್ಲಿ ಚಿತ್ರಿಸಲಾಗಿದ್ದು, ಈ ಬೆಳವಣಿಗೆಯ ನಂತರ ಡಿ-ಕಂಪನಿ ತನ್ನ ನೆಲಮಟ್ಟದ ಜಾಲವನ್ನು ಮತ್ತೆ ಸಕ್ರಿಯಗೊಳಿಸಲು ಮುಂದಾಗಿದೆ ಎನ್ನಲಾಗಿದೆ.
ಮೂಲಗಳ ಮಾಹಿತಿ ಪ್ರಕಾರ, ಡಿ-ಕಂಪನಿಯ ಮೊದಲ ಗುರಿ ಹೊಸ ಸದಸ್ಯರನ್ನು ಸೇರಿಸಿಕೊಳ್ಳುವುದು. ಈ ಜವಾಬ್ದಾರಿಯನ್ನು ಛೋಟಾ ಶಕೀಲ್ ಗ್ಯಾಂಗ್ಗೆ ನೀಡಲಾಗಿದ್ದು, ನೇಮಕಗೊಂಡವರನ್ನು ಪಾಕಿಸ್ತಾನದ ಐಎಸ್ಐ ಮೂಲಕ ತರಬೇತಿ ನೀಡಿ, ಶಸ್ತ್ರಾಸ್ತ್ರ ಒದಗಿಸುವ ಯೋಜನೆಯೂ ರೂಪಿಸಲಾಗಿದೆ ಎನ್ನಲಾಗಿದೆ.
ಮುಂಬೈ ಯುವಕರನ್ನು ಗುರಿಯಾಗಿಸಿದ ಜಾಲ?
ಭದ್ರತಾ ಮೂಲಗಳ ಪ್ರಕಾರ, ಮುಂಬೈನ ವಿವಿಧ ಪ್ರದೇಶಗಳ ಯುವಕರನ್ನು ಗುರಿಯಾಗಿಸಿ ಅವರನ್ನು ಸಂಘಟನೆಯಲ್ಲಿ ಸೇರಿಸಿಕೊಳ್ಳುವ ಪ್ರಯತ್ನ ನಡೆದಿದೆ. ಆದರೆ ಅವರಿಗೆ ಕಾರ್ಯಾಚರಣೆಯ ನಿಜವಾದ ಉದ್ದೇಶವನ್ನು ತಿಳಿಸಲಾಗಿಲ್ಲ ಎನ್ನಲಾಗಿದೆ.
ಮುಂಬೈನ ಬಾಂದ್ರಾ ಗರೀಬ್ ನಗರದಲ್ಲಿನ ಅಕ್ರಮ ಮಸೀದಿ ತೆರವು ಕಾರ್ಯಾಚರಣೆಯಂತಹ ಸ್ಥಳೀಯ ವಿಷಯಗಳನ್ನು ಬಳಸಿಕೊಂಡು ಕೆಲವು ಯುವಕರನ್ನು ಪ್ರಚೋದಿಸುವ ಯತ್ನ ನಡೆದಿದೆ ಎಂಬ ಮಾಹಿತಿಯೂ ತನಿಖಾ ಸಂಸ್ಥೆಗಳಿಗೆ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.
ದೆಹಲಿ ಪೊಲೀಸರ ಕಾರ್ಯಾಚರಣೆಯಿಂದ ಬಯಲಾಯಿತೇ ಸಂಪರ್ಕ?
ಇತ್ತೀಚೆಗೆ ದೆಹಲಿ ಪೊಲೀಸರು ಭಯೋತ್ಪಾದಕ ಸಂಚನ್ನು ವಿಫಲಗೊಳಿಸಿದ ವೇಳೆ, ಪಾಕಿಸ್ತಾನದ ಐಎಸ್ಐ ಮತ್ತು ಮುಂಬೈ ಭೂಗತ ಜಾಲದ ನಡುವೆ ಸಂಪರ್ಕವಿರುವ ಸಾಧ್ಯತೆಗಳ ಕುರಿತೂ ತನಿಖೆ ನಡೆಸಲು ಆರಂಭಿಸಿದೆ ಎಂದು ಮೂಲಗಳು ಹೇಳಿವೆ.
ಭಾರತೀಯ ತನಿಖಾ ಸಂಸ್ಥೆಗಳು, ಡಿ-ಕಂಪನಿ ತನ್ನ ಕುಸಿಯುತ್ತಿರುವ ಪ್ರಭಾವವನ್ನು ಮತ್ತೆ ಸ್ಥಾಪಿಸಿಕೊಳ್ಳಲು ದೊಡ್ಡ ಮಟ್ಟದ ದಾಳಿ ಅಥವಾ ದೇಶದ ಪ್ರಮುಖ ವ್ಯಕ್ತಿಯನ್ನು ಗುರಿಯಾಗಿಸುವ ಸಂಚು ರೂಪಿಸುತ್ತಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿವೆ.
ದಾವೂದ್ ಬದುಕಿದ್ದಾನೆ ಎಂಬ ಸಂದೇಶ ನೀಡುವ ಯತ್ನ?
'ಧುರಂಧರ್' ಸಿನಿಮಾದಲ್ಲಿ ದಾವೂದ್ನ್ನು ಹೋಲುವ ಪಾತ್ರವನ್ನು ಮರಣಶಯ್ಯೆಯಲ್ಲಿರುವಂತೆ ತೋರಿಸಿರುವುದು ಡಿ-ಕಂಪನಿಯ ಕಣ್ಣು ಕೆಂಪಗಾಗುವಂತೆ ಮಾಡಿದೆ ಎಂದು ಮೂಲಗಳು ಹೇಳಿವೆ. ಇದರಿಂದ, "ದಾವೂದ್ ಇನ್ನೂ ಜೀವಂತವಾಗಿದ್ದಾನೆ" ಎಂಬ ಸಂದೇಶವನ್ನು ತನ್ನ ಬೆಂಬಲಿಗರಿಗೆ ಮತ್ತು ಜಾಲದಲ್ಲಿರುವ ಸದಸ್ಯರಿಗೆ ತಲುಪಿಸಲು ಡಿ-ಕಂಪನಿ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.
ಭಾರತದ ಭದ್ರತಾ ಸಂಸ್ಥೆಗಳ ಕಟ್ಟೆಚ್ಚರ
ಕೇಂದ್ರ ಹಾಗೂ ರಾಜ್ಯ ಭದ್ರತಾ ಸಂಸ್ಥೆಗಳು ಈ ಬೆಳವಣಿಗೆಗಳ ಬಗ್ಗೆ ನಿಗಾವಹಿಸಿದ್ದು, ಸಮಯೋಚಿತ ಕಾರ್ಯಾಚರಣೆಗಳ ಮೂಲಕ ಹಲವು ಸಂಚುಗಳನ್ನು ಈಗಾಗಲೇ ವಿಫಲಗೊಳಿಸಿದೆ. ಅಲ್ಲದೆ, ದೇಶದ ಪ್ರಮುಖ ನಗರಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿವೆ ಎಂದು ಮೂಲಗಳು ತಿಳಿಸಿವೆ.