

ಅಹಮದಾಬಾದ್: ಗುಜರಾತ್ನ ಆರ್ಥಿಕ ರಾಜಧಾನಿ ಸೂರತ್ನಲ್ಲಿನ ಪ್ರವಾಹ ಸ್ಥಳೀಯರಿಗೆ ತೀವ್ರ ನಷ್ಟವನ್ನುಟ್ಟು ಮಾಡಿದೆ. ಸ್ಥಳೀಯರು ಸಂಕಷ್ಟ ಎದುರಿಸಿದ್ದು ಅವರ ಆಕ್ರೋಶ ಇದೀಗ ರಾಜಕೀಯ ಉದ್ವಿಗ್ನತೆಯಾಗಿ ರೂಪಾಂತರಗೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ನಗರದ ಅತ್ಯಂತ ಕೆಟ್ಟ ನಾಗರಿಕ ತುರ್ತು ಪರಿಸ್ಥಿತಿಗಳಲ್ಲಿ ಒಂದಾದ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳು ತಮ್ಮನ್ನು ಕೈಬಿಟ್ಟಿದ್ದಾರೆ ಎಂದು ಸಾವಿರಾರು ಪ್ರವಾಹ ಪೀಡಿತ ನಿವಾಸಿಗಳು ಆರೋಪಿಸಿದರು.
ಸತತ ಮೂರು ದಿನಗಳ ಕಾಲ ಉಕ್ಕಿ ಹರಿಯುತ್ತಿದ್ದ ಹೊಳೆ ನೀರು ಮತ್ತು ನಿರಂತರ ಮಳೆಯಿಂದಾಗಿ ಹಲವಾರು ವಸತಿ ಕಟ್ಟಡಗಳು ಮುಳುಗಿಹೋಗಿತ್ತು. ಕುಡಿಯುವ ನೀರು, ಆಹಾರ ಮತ್ತು ಆಶ್ರಯ ಕುರಿತಂತೆ ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಆಡಳಿತಾರೂಢ ಬಿಜೆಪಿ ಎಡವಿದ್ದು ಸ್ಥಳೀಯ ನಾಯಕತ್ವದ ವಿರುದ್ಧ ಹೆಚ್ಚುತ್ತಿರುವ ಆಕ್ರೋಶಕ್ಕೆ ಕಾರಣವಾಗಿದೆ. ಕಪೋದ್ರಾ, ಪಾಂಡೇಸಾರ ಮತ್ತು ಪರ್ವತ್ ಪಾಟಿಯಾದಲ್ಲಿ ನಿವಾಸಿಗಳು ಕಾರ್ಪೊರೇಟರ್ಗಳು, ಶಾಸಕರು ಮತ್ತು ಅಧಿಕಾರಿಗಳ ವಿರುದ್ಧ ಜನಾಕ್ರೋಶ ವ್ಯಕ್ತವಾದ ನಂತರ ಜನಪ್ರತಿನಿಧಿಗಳು ಆಗಮಿಸಿದರು ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಸೂರತ್ನ ಕಪೋದ್ರಾ ಪ್ರದೇಶದಲ್ಲಿ ಶನಿವಾರ ರಾತ್ರಿ ನಾಟಕೀಯ ಘರ್ಷಣೆ ನಡೆಯಿತು. ಅಲ್ಲಿ ಬಿಜೆಪಿ ವಾರ್ಡ್ ಸಂಖ್ಯೆ 4 ಕಾರ್ಪೊರೇಟರ್ ಹಂಸಾ ಗಜೇರಾ ಪರಿಸ್ಥಿತಿಯನ್ನು ನಿರ್ಣಯಿಸಲು ಮತ್ತು ನಿವಾಸಿಗಳ ಕುಂದುಕೊರತೆಗಳನ್ನು ಆಲಿಸಲು ಬಂದರು. ಆ ವೇಳೆ ಅವರನ್ನು ಸ್ಥಳೀಯರು ಸುತ್ತುವರೆದರು. ಜನರ ಆಕ್ರೋಶವನ್ನು ಗಮನಿಸಿದ ಕಾರ್ಪೋರೇಟರ್ ಅಲ್ಲಿಂದ ಕಾಲ್ಕಿತ್ತಿದ್ದರು. ನಮ್ಮ ಮತಗಳು ಬೇಕೆಂದಾಗ ನಮ್ಮ ಸಂಘಗಳಿಗೆ ಪದೇ ಪದೇ ಭೇಟಿ ನೀಡಿದ್ದೀರಿ. ಇಂದು ನಮ್ಮ ಮನೆಗಳು ನೀರಿನಲ್ಲಿ ಮುಳುಗಿವೆ. ನಮಗೆ ಕುಡಿಯಲು ನೀರಿಲ್ಲ ಇಂತ ದುಸ್ಥಿತಿಯಲ್ಲಿದ್ದಾಗ ನೀವೆಲ್ಲರೂ ಎಲ್ಲಿ ಹೋಗಿದ್ದೀರಿ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದರು.