CJP Protest: ಸೋನಂ ವಾಂಗ್ಚುಕ್‌ಗೆ ಹೈಕೋರ್ಟ್ ಬಿಗ್ ರಿಲೀಫ್: ಸಫ್ದರ್‌ಜಂಗ್‌ನಿಂದ ಮೆದಾಂತ ಆಸ್ಪತ್ರೆಗೆ ಸ್ಥಳಾಂತರ

ಉಪವಾಸ ನಡೆಸುತ್ತಿರುವ ವಾಂಗ್ಚುಕ್ ಅವರನ್ನು ತಕ್ಷಣವೇ ತಮ್ಮ ಆಯ್ಕೆಯ ಆಸ್ಪತ್ರೆಯಾದ ಮೆದಾಂತಗೆ ಸ್ಥಳಾಂತರಿಸಬೇಕು ಎಂದು ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿತ್ತು.
Wangchuk shifted to Medanta Hospital after High Court order
ಸೋನಂ ವಾಂಗ್ಚುಕ್
Updated on

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ದೆಹಲಿ ಹೈಕೋರ್ಟ್ ಆದೇಶದಂತೆ, ಖ್ಯಾತ ಶಿಕ್ಷಣ ತಕ್ಷ ಹಾಗೂ ಹೋರಾಟಗಾರ ಸೋನಂ ವಾಂಗ್ಚುಕ್ ಅವರನ್ನು ಮಂಗಳವಾರ ಸಂಜೆ ಸಫ್ದರ್‌ಜಂಗ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ, ಗುರುಗ್ರಾಮದ ಮೆದಾಂತ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಸ್ಥಳಾಂತರಿಸಲಾಗಿದೆ.

ಜೂನ್ 28ರಿಂದ ಪರೀಕ್ಷಾ ಅಕ್ರಮಗಳ ವಿರುದ್ಧ ಅನಿರ್ದಿಷ್ಟಾವಧಿ ಉಪವಾಸ ನಡೆಸುತ್ತಿರುವ ವಾಂಗ್ಚುಕ್ ಅವರನ್ನು ತಕ್ಷಣವೇ ತಮ್ಮ ಆಯ್ಕೆಯ ಆಸ್ಪತ್ರೆಯಾದ ಮೆದಾಂತಗೆ ಸ್ಥಳಾಂತರಿಸಬೇಕು ಎಂದು ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿತ್ತು.

ಸಫ್ದರ್‌ಜಂಗ್ ಆಸ್ಪತ್ರೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, "ಸೋನಂ ವಾಂಗ್ಚುಕ್ ಅವರನ್ನು ಇಂದು ಸಂಜೆ 6.40ಕ್ಕೆ ವಿಎಂಎಂಸಿ ಮತ್ತು ಸಫ್ದರ್‌ಜಂಗ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ದೆಹಲಿ ಹೈಕೋರ್ಟ್ 2026ರ ಜುಲೈ 21ರ ಆದೇಶದಂತೆ ಅವರನ್ನು ಮೆದಾಂತ ಆಸ್ಪತ್ರೆಯ ವೈದ್ಯರ ತಂಡದ ವಶಕ್ಕೆ ಒಪ್ಪಿಸಲಾಗಿದೆ" ಎಂದು ತಿಳಿಸಿದೆ.

ಆಸ್ಪತ್ರೆಯ ಪ್ರಕಾರ, ಬಿಡುಗಡೆ ವೇಳೆ ವಾಂಗ್ಚುಕ್ ಅವರ ಜೀವರಕ್ಷಕ ದೈಹಿಕ ಸೂಚ್ಯಂಕಗಳು (Vital Parameters) ಸ್ಥಿರವಾಗಿದ್ದವು. ಆದರೆ ಪ್ಯಾಂಸೈಟೋಪೀನಿಯಾ (Pancytopenia) ಸಮಸ್ಯೆ ಮುಂದುವರಿದಿದ್ದು, ರಕ್ತದಲ್ಲಿನ ಸೀರಂ ಪೊಟ್ಯಾಸಿಯಂ ಮಟ್ಟ 3.4 mEq/L ಆಗಿದೆ.

ವೈದ್ಯಕೀಯ ಚಿಕಿತ್ಸೆ ನಿರಂತರವಾಗಿ ಮುಂದುವರಿಯುವಂತೆ ಎಲ್ಲ ವೈದ್ಯಕೀಯ ದಾಖಲೆಗಳು, ಪರೀಕ್ಷಾ ವರದಿಗಳು ಹಾಗೂ ಚಿಕಿತ್ಸೆಗೆ ಸಂಬಂಧಿಸಿದ ದಾಖಲೆಗಳನ್ನು ಮೆದಾಂತ ಆಸ್ಪತ್ರೆಯ ವೈದ್ಯಕೀಯ ತಂಡಕ್ಕೆ ಹಸ್ತಾಂತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Wangchuk shifted to Medanta Hospital after High Court order
ಮೆರವಣಿಗೆ ವೇಳೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ CJP ಪ್ರತಿಭಟನಾಕಾರರು; ಇಂಟರ್ನೆಟ್ ಸ್ಥಗಿತಗೊಂಡರೂ ಗುಂಪುಗಳಿಗೆ ಸಂಪರ್ಕ ಸಾಧನೆ!

ಪತ್ನಿಯ ಮೇಲ್ಮನವಿಗೆ ಹೈಕೋರ್ಟ್ ಮನ್ನಣೆ

ಇದಕ್ಕೂ ಮೊದಲು, ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರಿದ್ದ ವಿಭಾಗೀಯ ಪೀಠವು, ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಅಂಗ್ಮೋ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿತು.

ಭಾನುವಾರ ಏಕಸದಸ್ಯ ಪೀಠವು ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿನ ಚಿಕಿತ್ಸೆಯಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಗೀತಾಂಜಲಿ ಅಂಗ್ಮೋ ಮೇಲ್ಮನವಿ ಸಲ್ಲಿಸಿದ್ದರು.

ತೀರ್ಪಿನಲ್ಲಿ ನ್ಯಾಯಾಲಯ, ಭಾರತ ಸಂವಿಧಾನದ 19 ಮತ್ತು 21ನೇ ವಿಧಿಗಳ ಅಡಿಯಲ್ಲಿ ವ್ಯಕ್ತಿಗೆ ತನ್ನ ಆಯ್ಕೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಹಕ್ಕು ಮೂಲಭೂತ ಹಕ್ಕಿನ ಭಾಗವಾಗಿದೆ ಎಂದು ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಸೋನಂ ವಾಂಗ್ಚುಕ್ ಅವರನ್ನು ಅವರ ಆಯ್ಕೆಯಾದ ಮೆಡಾಂತಾ ಆಸ್ಪತ್ರೆಗೆ ಸ್ಥಳಾಂತರಿಸಲು ಆದೇಶ ನೀಡಿದೆ.

ಮೆದಾಂತದಲ್ಲಿ ವಿಶೇಷ ವೈದ್ಯರ ತಂಡ ರಚಿಸಲು ಸೂಚನೆ

ಹೈಕೋರ್ಟ್, ಮೆಡಾಂತಾ ಆಸ್ಪತ್ರೆಯ ನಿರ್ದೇಶಕರಿಗೆ ವಾಂಗ್ಚುಕ್ ಅವರ ಆರೋಗ್ಯದ ಮೇಲೆ ನಿರಂತರ ನಿಗಾ ಇಡಲು ಅಗತ್ಯ ಪರಿಣತಿ ಹೊಂದಿದ ವೈದ್ಯರ ತಂಡವನ್ನು ರಚಿಸುವಂತೆ ಸೂಚಿಸಿದೆ. ವೈದ್ಯರು ಮಾನ್ಯ ವೈದ್ಯಕೀಯ ನಿಯಮಗಳು ಮತ್ತು ಚಿಕಿತ್ಸಾ ಪ್ರೋಟೋಕಾಲ್‌ಗೆ ಅನುಗುಣವಾಗಿ ಚಿಕಿತ್ಸೆ ನೀಡಬೇಕು. ಅದಕ್ಕೆ ವಾಂಗ್ಚುಕ್ ಸಹಕರಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com