ನವದೆಹಲಿ: ಸಂಸತ್ತಿನತ್ತ 'ಕಾಕ್ರೋಚ್ ಜನತಾ ಪಾರ್ಟಿ' (CJP) ನಡೆಸಿದ ಮೆರವಣಿಗೆ ವೇಳೆ ಮಹಿಳಾ ಪ್ರತಿಭಟನಾಕಾರರೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದ ದೆಹಲಿ ಪೊಲೀಸ್ನ ಹಿರಿಯ ಅಧಿಕಾರಿಯೊಬ್ಬರನ್ನು ಜಂತರ್ ಮಂತರ್ನ ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಲಾಗಿದೆ.
ಪರೀಕ್ಷಾ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ 'ಸಂಸದ್ ಚಲೋ' ರ್ಯಾಲಿಗಾಗಿ ಸಿಜೆಪಿಯ ಸಾವಿರಾರು ಬೆಂಬಲಿಗರು ಜಂತರ್ ಮಂತರ್ನಲ್ಲಿ ಜಮಾಯಿಸಿದ್ದಾಗ, ಜುಲೈ 20 ರಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ (DCP- ಈಶಾನ್ಯ ಜಿಲ್ಲೆ) ಸಂದೀಪ್ ಲಂಬಾ ಅವರು ಮಹಿಳಾ ಪ್ರತಿಭಟನಾಕಾರರೊಬ್ಬರಿಗೆ ಕಪಾಳಮೋಕ್ಷ ಮಾಡುವುದು ಕಂಡುಬಂದಿತು.
ತೃಣಮೂಲ ಕಾಂಗ್ರೆಸ್ನ ಮಾಜಿ ಸಂಸದ ಸಾಕೇತ್ ಗೋಖಲೆ ಅವರು ಲಂಬಾ ವಿರುದ್ಧ ಪೊಲೀಸರಿಗೆ ದೂರು ಕೂಡ ದಾಖಲಿಸಿರುವುದಾಗಿ ಹೇಳಿದ್ದಾರೆ.
'ನಿನ್ನೆ, ದೆಹಲಿ ಹೈಕೋರ್ಟ್ನಲ್ಲಿ, ಪೊಲೀಸ್ ದೌರ್ಜನ್ಯದ ಕುರಿತ ಅರ್ಜಿಗಳಿಗೆ ಸರ್ಕಾರ ನೀಡಿದ ಉತ್ತರ ಏನೆಂದರೆ, ಯಾರೂ ಎಫ್ಐಆರ್ ದಾಖಲಿಸುವಂತೆ ಪೊಲೀಸರನ್ನು ಸಂಪರ್ಕಿಸಿಲ್ಲ ಎಂಬುದಾಗಿತ್ತು. ಹಾಗಾಗಿಯೇ ನಾನು ಇಂದು ಪೊಲೀಸರಿಗೆ ಈ ಬಗ್ಗೆ ದೂರು ದಾಖಲಿಸಿದ್ದೇನೆ' ಎಂದು ಅವರು ಇಂದು ಬೆಳಿಗ್ಗೆ ಎಕ್ಸ್ನಲ್ಲಿ ಹೇಳಿದರು.
ಸಿಜೆಪಿ ಪ್ರತಿಭಟನಾಕಾರರ ವಿರುದ್ಧ ಅತಿಯಾದ ಬಲಪ್ರಯೋಗ ನಡೆದಿದೆ ಎಂದು ಆರೋಪಿಸುವ ಅರ್ಜಿ ಮೇಲಿನ ವಿಚಾರಣೆಯ ಸಂದರ್ಭದಲ್ಲಿ, ಬುಧವಾರ ದೆಹಲಿ ಹೈಕೋರ್ಟ್ನಲ್ಲಿ ಲಂಬಾ ಅವರ ಹೆಸರನ್ನು ಪ್ರಸ್ತಾಪಿಸಲಾಯಿತು.
'ಯಾವುದೇ ಪ್ರಚೋದನೆಯಿಲ್ಲದೆ ಸುಮ್ಮನೆ ನಿಂತಿದ್ದ ಮಹಿಳೆಯೊಬ್ಬರಿಗೆ ಹೆಚ್ಚುವರಿ ಡಿಸಿಪಿ ಸಂದೀಪ್ ಲಂಬಾ ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು; ಆ ಮಹಿಳೆ ಅಲ್ಲಿಂದ ಕದಲುತ್ತಿರಲಿಲ್ಲ. ನಾನು ಈಗಲೇ ಆ ವಿಡಿಯೋವನ್ನು ತೋರಿಸಬಲ್ಲೆ. ಸಮವಸ್ತ್ರ ಧರಿಸಿದ ದುಷ್ಕರ್ಮಿಗಳನ್ನು ಹೆಸರಿಸುವುದು ಅಗತ್ಯವಿದ್ದಾಗ, ಅವರನ್ನು ಹೆಸರಿಸಲು ನಾವು ಹಿಂಜರಿಯಬಾರದು. ಅವರನ್ನು ಇಲ್ಲಿಗೆ ಕರೆಸಬೇಕು ಮತ್ತು ಅವರ ಕೃತ್ಯಕ್ಕೆ ಅವರನ್ನು ಹೊಣೆಗಾರರನ್ನಾಗಿಸಬೇಕು' ಎಂದು ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು ಮುಖ್ಯ ನ್ಯಾಯಮೂರ್ತಿ ಡಿಕೆ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರಿದ್ದ ಪೀಠದ ಮುಂದೆ ಹೇಳಿದರು.