

"ಗಡಿಯಾಚೆಗಿನ ಭಯೋತ್ಪಾದನೆ"ಯನ್ನು "ಸರ್ಕಾರದ ಸಾಧನ"ವಾಗಿ ಬಳಸಿದಾಗ ಸಿಂಧೂ ನದಿ ನೀರು ಒಪ್ಪಂದ(IWT)ದ ಅಡಿಯಲ್ಲಿ ಸಹಕಾರ ಮುಂದುವರಿಯಲು ಸಾಧ್ಯವೇ ಇಲ್ಲ ಎಂದು ಭಾರತ ಬುಧವಾರ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಪ್ರಸ್ತಾವನೆಯನ್ನು ಬಲವಾಗಿ ತಿರಸ್ಕರಿಸಿದೆ.
ಜಮ್ಮು ಮತ್ತು ಕಾಶ್ಮೀರವು "ಯಾವಾಗಲೂ ಭಾರತದ ಅವಿಭಾಜ್ಯ ಅಂಗ ಮತ್ತು ಅದನ್ನು ಬೇರ್ಪಡಿಸಲಾಗದು" ಎಂದು ಭಾರತ ಪುನರುಚ್ಚರಿಸಿದೆ.
ಪಾಕಿಸ್ತಾನ ತನ್ನ ನೆಲದಿಂದ ಭಾರತದ ವಿರುದ್ಧ ನಡೆಯುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯನ್ನು ಶಾಶ್ವತವಾಗಿ ನಿಲ್ಲಿಸದಿದ್ದರೆ, ಸಿಂಧೂ ನದಿಯ ಒಂದು ಹನಿ ನೀರೂ ಸಹ ಹಳೆಯ ಒಪ್ಪಂದದಂತೆ ಅವರಿಗೆ ಸಿಗುವುದಿಲ್ಲ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.
ಶಾಂತಿ, ಭದ್ರತೆ ಮತ್ತು ಸಮೃದ್ಧಿಯ ಅಡಿಪಾಯದ ಕುರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಉನ್ನತ ಮಟ್ಟದ ಮುಕ್ತ ಚರ್ಚೆಯ ಸಂದರ್ಭದಲ್ಲಿ ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ, ರಾಯಭಾರಿ ಪರ್ವತನೇನಿ ಹರೀಶ್ ಈ ಹೇಳಿಕೆಗಳನ್ನು ನೀಡಿದ್ದಾರೆ.
ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನ ಸುಳ್ಳು ಕಥೆಗಳನ್ನು ಸೃಷ್ಟಿಸುತ್ತ ಚರ್ಚೆಯನ್ನು "ದುರುಪಯೋಗಪಡಿಸಿಕೊಂಡ" ನಂತರ ನವದೆಹಲಿ ಈ ರೀತಿ ಪ್ರತಿಕ್ರಿಯಿಸುತ್ತಿದೆ ಎಂದು ಪರ್ವತನೇನಿ ಹೇಳಿದ್ದಾರೆ.
"ಸಿಂಧೂ ಜಲ ಒಪ್ಪಂದದ ಕುರಿತು ನಮ್ಮ ನಿಲುವು ಸ್ಪಷ್ಟ ಮತ್ತು ಸ್ಥಿರವಾಗಿದೆ. ಗಡಿಯಾಚೆಗಿನ ಭಯೋತ್ಪಾದನೆಯನ್ನು ರಾಜ್ಯ ನೀತಿಯ ಸಾಧನವಾಗಿ ನಿಯಮಿತವಾಗಿ ನಿಯೋಜಿಸಿದಾಗ ಪರಸ್ಪರ ನಂಬಿಕೆ ಮತ್ತು ಸದ್ಭಾವನೆಯ ಆಧಾರದ ಮೇಲೆ ಸಹಕಾರವನ್ನು ನಿರೀಕ್ಷಿಸಲಾಗುವುದಿಲ್ಲ" ಎಂದು ಪರ್ವತನೇನಿ ತಿಳಿಸಿದ್ದಾರೆ.
ವಿಶ್ವಸಂಸ್ಥೆಗೆ ಪಾಕಿಸ್ತಾನದ ಖಾಯಂ ಪ್ರತಿನಿಧಿ ಅಸಿಮ್ ಇಫ್ತಿಕರ್ ಅಹ್ಮದ್, ಭಾರತವು ಐಡಬ್ಲ್ಯೂಟಿಯನ್ನು ಸ್ಥಗಿತಗೊಳಿಸುವ ಮೂಲಕ "ನೀರನ್ನು ಶಸ್ತ್ರಸಜ್ಜಿತಗೊಳಿಸುತ್ತಿದೆ" ಎಂದು ಆರೋಪಿಸಿದರು ಮತ್ತು ಭಾರತದ ಈ ನಿರ್ಧಾರವನ್ನು "ಕಾನೂನುಬಾಹಿರ" ಎಂದು ಟೀಕಿಸಿದರು.
ಕಳೆದ ವರ್ಷ ಪಹಲ್ಗಾಮ್ ಭೀಕರ ಭಯೋತ್ಪಾದಕ ದಾಳಿಯ ನಂತರ ಭಾರತವು ಈ ಒಪ್ಪಂದದ ಕಾರ್ಯಾಚರಣೆಯನ್ನು ಅಮಾನತು ಮಾಡಿದೆ. ಆದರೆ ಈಗ ಭಾರತದ ನಿಲುವು ಮತ್ತಷ್ಟು ಬಿಗಿಯಾಗಿದೆ. ಆರು ದಶಕಗಳ ಕಾಲ ನಡೆದ ಈ ಸಿಂಧೂ ಒಪ್ಪಂದ ಇನ್ನು ಮುಂದೆ ತನ್ನ ಪ್ರಸ್ತುತ ಸ್ವರೂಪದಲ್ಲಿ ಚಾಲನೆಯಲ್ಲಿರಲು ಸಾಧ್ಯವೇ ಇಲ್ಲ ಎಂಬ ಸಂದೇಶವನ್ನು ಭಾರತ ಜಗತ್ತಿಗೆ ರವಾನಿಸಿದೆ. ನೀರು ಹಂಚಿಕೆಯ ನಿಯಮಗಳು ಮತ್ತೆ ಜಾರಿಯಾಗಬೇಕಾದರೆ, ಒಪ್ಪಂದವನ್ನು ಸಂಪೂರ್ಣವಾಗಿ ಮರುಪರಿಶೀಲಿಸಿ, ಇಂದಿನ ಪರಿಸ್ಥಿತಿಗೆ ತಕ್ಕಂತೆ ತಿದ್ದುಪಡಿ ಮಾಡಲೇಬೇಕು ಎಂದು ಭಾರತ ಸ್ಪಷ್ಟಪಡಿಸಿದೆ.