

ಚೆನ್ನೈ: ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸುವ ಪ್ರಸ್ತಾವನೆ ಮತ್ತಿತರ ನದಿ ನೀರು ಹಂಚಿಕೆ ವಿಷಯಗಳ ಕುರಿತು ದ್ವಿಪಕ್ಷೀಯ ಮಾತುಕತೆಗಾಗಿ ಕರ್ನಾಟಕ ಸರ್ಕಾರ ನೀಡಿದ ಆಹ್ವಾನವನ್ನು ತಿರಸ್ಕರಿಸುವಂತೆ, ತಮಿಳುನಾಡಿನ ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರನ್ನು ಭಾನುವಾರ ಆಗ್ರಹಿಸಿವೆ.
ಈ ಮಧ್ಯೆ ಮುಖ್ಯಮಂತ್ರಿ ವಿಜಯ್ ಅವರ ಬೆಂಗಳೂರು ಪ್ರವಾಸದ ಕುರಿತು ಈ ಹಿಂದೆ ನೀಡಿದ ಹೇಳಿಕೆಯಿಂದ ತಮಿಳುನಾಡು ಕೃಷಿ ಸಚಿವ ವಿನೋತ್ ಹಿಂದೆ ಸರಿದಿದ್ದು, ಅಧಿಕೃತ ಘೋಷಣೆಗಾಗಿ ಕಾಯುವಂತೆ ಪತ್ರಕರ್ತರಿಗೆ ಮನವಿ ಮಾಡಿದ್ದಾರೆ.
ಇದಕ್ಕೂ ಮುನ್ನ, ಆಗಸ್ಟ್ 3 ರಂದು ವಿಜಯ್ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ ಎಂದು ಅವರು ಹೇಳಿದ್ದರು.
ಮೈಲಾಡುತುರೈನಲ್ಲಿ ನಡೆದ ರೈತ ಸಮನ್ವಯ ಸಮಿತಿಯ ಜಿಲ್ಲಾ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡ ಪಿ.ಆರ್. ಪಾಂಡಿಯನ್, "ತಮಿಳುನಾಡಿನ ಮುಖ್ಯಮಂತ್ರಿಗಳು ಕರ್ನಾಟಕದ ಮುಖ್ಯಮಂತ್ರಿಯ ಆಹ್ವಾನವನ್ನು ತಿರಸ್ಕರಿಸಲೇಬೇಕು ಎಂದು ಹೇಳಿದರು.
ನೇರ ಮಾತುಕತೆಗಳು ಅಶಾಂತಿಗೆ ಕಾರಣವಾಗಬಹುದು ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ. "ಹಿಂದೆ ಇಂತಹ ಮಾತುಕತೆಗಳನ್ನು ನಡೆಸಿದಾಗ ಭಿನ್ನಾಭಿಪ್ರಾಯಗಳು ಮತ್ತು ಸಂಘರ್ಷಗಳು ಉಂಟಾಗಿದ್ದವು. ನೀರು ಹಂಚಿಕೆಗೆ ಸಂಬಂಧಿಸಿದ ಎಲ್ಲಾ ಚರ್ಚೆಗಳು ಕಡ್ಡಾಯವಾಗಿ 'ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ'ದ (CWMA) ಮೂಲಕವೇ ನಡೆಯಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
"ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಯೋಜನೆ ಮತ್ತು ನೀರು ಬಿಡುಗಡೆಯ ಕುರಿತು ಚರ್ಚಿಸಲು ತಮಿಳುನಾಡು ಮುಖ್ಯಮಂತ್ರಿಗಳು ಕರ್ನಾಟಕಕ್ಕೆ ತೆರಳುವುದು ಕಾನೂನುಬಾಹಿರವಾಗಿದೆ. ಇದು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರವೂ ಅಮಾನ್ಯವಾಗಿದೆ ಮತ್ತು ಸಂವಿಧಾನದ ಪ್ರಕಾರವೂ ಅಮಾನ್ಯವಾಗಿದೆ ಎಂದು ಪಾಂಡಿಯನ್ ಹೇಳಿದರು.