

ಕೋಲ್ಕತ್ತಾ: TMC ಬಂಡಾಯ ಬಣವು ಉಚ್ಚಾಟಿತ ನಾಯಕ ಋತಬ್ರತ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಬೇಕೆಂಬ ಪ್ರಸ್ತಾಪವನ್ನು ಪಶ್ಚಿಮ ಬಂಗಾಳ ವಿಧಾನಸಭಾ ಸ್ಪೀಕರ್ ಒಪ್ಪಿಕೊಂಡಿದ್ದಾರೆ. ಇದು ಪಕ್ಷದ ಮುಖ್ಯಸ್ಥೆ ಮತ್ತು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ದೊಡ್ಡ ಹಿನ್ನಡೆಯಾಗಿದೆ. ಘೋಷಣೆಯ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಋತಬ್ರತ ಬ್ಯಾನರ್ಜಿ, ಟಿಎಂಸಿಯ ಇಬ್ಬರು ಶಾಸಕರು ತಮ್ಮ ಬಣಕ್ಕೆ ಸೇರುವ ನಿರೀಕ್ಷೆಯಿತ್ತು. ಅದರಂತೆ ಇದೀಗ ನಮ್ಮ ಬೆಂಬಲಿತ ಶಾಸಕರ ಸಂಖ್ಯೆ 60ಕ್ಕೆ ಏರಿದೆ ಎಂದು ಹೇಳಿದರು.
ನಾವು ವಿಧಾನಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಅನ್ನು ಪ್ರತಿನಿಧಿಸುತ್ತಿದ್ದೇವೆ. ನಮ್ಮದು 60 ಶಾಸಕರ ಕೂಟ. ನಮಗೆ ಸಲಹೆಗಾರರಾಗಲು ಮತ್ತು ನಮಗೆ ಮಾರ್ಗದರ್ಶನ ನೀಡಲು ನಾವು ಮಮತಾ ಬ್ಯಾನರ್ಜಿ ಅವರನ್ನು ವಿನಂತಿಸುತ್ತೇವೆ. ನಾವು ರಚನಾತ್ಮಕ ವಿರೋಧ ಪಕ್ಷದ ಪಾತ್ರವನ್ನು ನಿರ್ವಹಿಸುತ್ತೇವೆ ಎಂದು ಬ್ಯಾನರ್ಜಿ ಹೇಳಿದರು. ಜಾವೇದ್ ಖಾನ್, ಸಂದೀಪನ್ ಸಹಾ, ಸಬೀನಾ ಯಾಸ್ಮಿನ್ ಮತ್ತು ಶಿಯುಲಿ ಸಹಾ ಅವರನ್ನು ಟಿಎಂಸಿ ಶಾಸಕಾಂಗ ಪಕ್ಷದ ಉಪ ನಾಯಕರನ್ನಾಗಿ ಹೆಸರಿಸಲಾಗಿದೆ ಎಂದು ಅವರು ಹೇಳಿದರು.
ಇದಕ್ಕೂ ಮೊದಲು ಟಿಎಂಸಿ ಬಂಡಾಯ ಶಾಸಕರಾದ ಸಂದೀಪನ್ ಸಹಾ ಸೇರಿದಂತೆ 58 ಶಾಸಕರು ವಿಧಾನಸಭಾ ಸ್ಪೀಕರ್ ರತೀಂದ್ರ ಬೋಸ್ ಅವರನ್ನು ಭೇಟಿ ಮಾಡಿ ಉಚ್ಚಾಟಿತ ತೃಣಮೂಲ ಕಾಂಗ್ರೆಸ್ (TMC) ಶಾಸಕರಾದ ಋತಬ್ರತ ಬ್ಯಾನರ್ಜಿ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಮಾಡುವಂತೆ ಪತ್ರ ನೀಡಿದ್ದರು.
Advertisement