

ಕೋಲ್ಕತ್ತಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಅಧ್ಯಕ್ಷ ಮಮತಾ ಬ್ಯಾನರ್ಜಿಗೆ ಒಂದಾದ ನಂತರ ಒಂದರಂತೆ ಹೊಡೆತ ಬೀಳುತ್ತಿದೆ. ಪಕ್ಷದಲ್ಲಿನ ಭಿನ್ನಮತ ಈಗಸಂಸತ್ತಿನೊಳಗೆ ವ್ಯಾಪಿಸುತ್ತಿರುವಂತೆ ಕಂಡುಬರುತ್ತಿದೆ. 23 ಸಂಸದರು ಬಂಡಾಯ ಶಾಸಕರ ಗುಂಪಿನೊಂದಿಗೆ ಸಂಪರ್ಕದಲ್ಲಿದ್ದು, ಮುಂಬರುವ ದಿನಗಳಲ್ಲಿ ಪಕ್ಷ ವಿಭಜನೆ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷದಲ್ಲಿ ಆಂತರಿಕ ಸಂಘರ್ಷ ಹೆಚ್ಚಾಗುತ್ತಿರುವಂತೆ ಈ ಹೊಸ ಬಿಕ್ಕಟ್ಟು ಸೃಷ್ಟಿಯಾಗಿದೆ. ಇತ್ತೀಚಿಗೆ ಪಕ್ಷದ ಶಾಸಕಾಂಗ ಸಭೆಯಿಂದ ಹೊರ ನಡೆದಿದ್ದ ಋತಬ್ರತಾ ಬ್ಯಾನರ್ಜಿ ನೇತೃತ್ವದಲ್ಲಿನ ಕೆಲ ಭಿನ್ನಮತೀಯ ಶಾಸಕರು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಹಕ್ಕ ಮಂಡಿಸಿದ್ದರು.
ಟಿಎಂಸಿ ಸಂಸದರಲ್ಲಿಯೂ ಈಗ ಅಸಮಾಧಾನ ಹೆಚ್ಚಾಗುತ್ತಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಬಗ್ಗೆ ಹಲವಾರು ಸಂಸದರು ಅತೃಪ್ತರಾಗಿದ್ದಾರೆ ಎಂದು ವರದಿಯಾಗಿದೆ. ಇದರಿಂದಾಗಿ ಸಂಸತ್ತಿನಲ್ಲಿ ಪ್ರತ್ಯೇಕ ಬಣ ರಚಿಸುವ ಬಗ್ಗೆ ಚರ್ಚೆ ಆರಂಭವಾಗಿದೆ ಎನ್ನಲಾಗುತ್ತಿದೆ.
ಲೋಕಸಭಾ ಸಂಸದರ ಒಂದು ಬಣ ಪಕ್ಷದಿಂದ ಬೇರ್ಪಟ್ಟು, ಪ್ರತ್ಯೇಕ ಬಣ ರಚಿಸುವ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಒಂದು ಡಜನ್ಗೂ ಹೆಚ್ಚು ಸಂಸದರು ಈಗಾಗಲೇ ಅಂತಹ ಕ್ರಮದ ಪರವಾಗಿದ್ದಾರೆ ಎಂದು ಹೇಳಲಾಗಿದೆ. ಹಿರಿಯ ಸಂಸದರೊಬ್ಬರು ಈ ಗುಂಪಿನ ನಾಯಕರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಸಂಖ್ಯೆಗಳು ಸಂಭಾವ್ಯ ವಿಭಜನೆಯ ಬಗ್ಗೆಗಿನ ಊಹಾಪೋಹಗಳಿಗೆ ಮತ್ತಷ್ಟು ಇಂಬು ನೀಡಿವೆ. ಟಿಎಂಸಿ ಪ್ರಸ್ತುತ ಲೋಕಸಭೆಯಲ್ಲಿ 29 ಸಂಸದರನ್ನು ಹೊಂದಿದೆ. ಆದರೆ ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಸದನದಲ್ಲಿ ಪ್ರತ್ಯೇಕ ಗುಂಪಾಗಿ ಗುರುತಿಸಲು ಕನಿಷ್ಠ 22 ಸಂಸದರು ಅಗತ್ಯವಿದೆ. ರಾಜ್ಯಸಭೆಯಲ್ಲಿ ಪಕ್ಷವು 13 ಸದಸ್ಯರನ್ನು ಹೊಂದಿದ್ದು, ಅಲ್ಲಿ ಮಾನ್ಯತೆ ಪಡೆಯಲು 9 ಸಂಸದರು ಇರಬೇಕಾಗುತ್ತದೆ.
ಆದಾಗ್ಯೂ, ಬಂಡಾಯ ನಾಯಕಿ ರಿತಬ್ರತಾ ಬ್ಯಾನರ್ಜಿ, ಸಂಸದರು ಭಿನ್ನಮತೀಯರ ಗುಂಪು ಸೇರುತ್ತಿದ್ದಾರೆಯೇ ಎಂದು ದೃಢಪಡಿಸಲಿಲ್ಲ. ಬದಲಾಗಿ ತಾಳ್ಮೆಯಿಂದಿರಿ, ಮುಂದಿನ ದಿನಗಳಲ್ಲಿ ಮತ್ತಷ್ಟು ನಡೆಯಬಹುದು ಎಂದು ಹೇಳಿದ್ದಾರೆ.
Advertisement