

ಹಥರಾಸ್: ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಮಹಿಳಾ ಡ್ಯಾನ್ಸರ್ ನೃತ್ಯ ಮಾಡುತ್ತಿದ್ದ ವೇಳೆ ವ್ಯಕ್ತಿಯೋರ್ವ ಆಕೆಯ ಸೊಂಟಕ್ಕೆ ಕೈಹಾಕಿ ಕಪಾಳಮೋಕ್ಷ ಮಾಡಿಸಿಕೊಂಡಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಹಥರಾಸ್ ನ ಸಾಸ್ನಿ ಪ್ರದೇಶದ ನಾಗ್ಲಾ ನೈ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಜನ್ಮದಿನೋತ್ಸವದ ಕಾರ್ಯಕ್ರಮವೊಂದರಲ್ಲಿ ಹರ್ಯಾಣ ಮೂಲದ ನೃತ್ಯ ಕಲಾವಿದೆಗೆ ಅಪಮಾನ ಮಾಡಲಾಗಿದೆ.
ಈ ವೇಳೆ ಆಕ್ರೋಶಗೊಂಡ ಮಹಿಳಾ ಡ್ಯಾನ್ಸರ್ ಆ ವ್ಯಕ್ತಿಗೆ ಕಪಾಳ ಮೋಕ್ಷ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಹಿಳಾ ಕಲಾವಿದರ ಸುರಕ್ಷತೆ ಮತ್ತು ಘನತೆಯ ಬಗ್ಗೆ ತೀವ್ರ ಚರ್ಚೆ ಹುಟ್ಟುಹಾಕಿದೆ.
ಆಗಿದ್ದೇನು?
ಗ್ರಾಮದಲ್ಲಿ ನಡೆದ ಜನ್ಮದಿನೋತ್ಸವದ ಕಾರ್ಯಕ್ರಮವೊಂದರಲ್ಲಿ ಹೆಸರಾಂತ ಹರಿಯಾಣಿ ನೃತ್ಯಗಾರ್ತಿ ಡಿಂಪಲ್ ಚೌಧರಿ ಪಾಲ್ಗೊಂಡಿದ್ದರು. ರಾತ್ರಿ 8:00 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಿತ್ತು ಮತ್ತು ಅವರು ಸುಮಾರು 10:00 ಗಂಟೆಗೆ ಇತರ ಪ್ರಾದೇಶಿಕ ಗಾಯಕರು ಹಾಗೂ ನೃತ್ಯಗಾರರೊಂದಿಗೆ ವೇದಿಕೆ ಏರಿದ್ದರು.
ರಾತ್ರಿ ಸುಮಾರು 2:30 ರ ಸುಮಾರಿಗೆ, ಹರಿಯಾಣಿ ಹಾಡಾದ "ಗಂದಾಸ್" ಗೆ ಅವರು ನೃತ್ಯ ಮಾಡುತ್ತಿದ್ದಾಗ, ಕಾರ್ಯಕ್ರಮದ ಸಂಘಟಕರ ಸಂಬಂಧಿ ಎನ್ನಲಾದ ಯುವಕನೊಬ್ಬ ವೇದಿಕೆಗೆ ನುಗ್ಗಿದ್ದಾನೆ. ನೃತ್ಯಗಾರ್ತಿ ಪ್ರದರ್ಶನ ನೀಡುತ್ತಿದ್ದಾಗ ಆತ ವೇದಿಕೆಯ ನಿಯಮಗಳನ್ನು ಮೀರಿ, ಆಕೆಯ ಸೊಂಟವನ್ನು ಮುಟ್ಟುವ ಮೂಲಕ ಅಸಭ್ಯವಾಗಿ ವರ್ತಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ದುರ್ವರ್ತನೆ ವಿರುದ್ಧ ಆಕ್ರೋಶ, ಕಪಾಳ ಮೋಕ್ಷ
ಯುವಕನ ದುರ್ವರ್ತನೆಯನ್ನು ಸಹಿಸದ ಚೌಧರಿ, ತಕ್ಷಣವೇ ನೃತ್ಯವನ್ನು ನಿಲ್ಲಿಸಿ, ತಿರುಗಿ ವೇದಿಕೆಯ ಮೇಲೆಯೇ ಆತನ ಕೆನ್ನೆಗೆ ಬಾರಿಸಿದ್ದಾರೆ. ಮಾತ್ರವಲ್ಲದೇ ದೈಹಿಕವಾಗಿ ಪ್ರತಿಕ್ರಿಯಿಸಿದ ನಂತರ, ಅವರು ವೇದಿಕೆಯ ಮೈಕ್ರೊಫೋನ್ ತೆಗೆದುಕೊಂಡು ಇಡೀ ಸಭೆಯ ಸಮ್ಮುಖದಲ್ಲೇ ಆ ವ್ಯಕ್ತಿಯನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡರು ಮತ್ತು ಕಠಿಣ ಎಚ್ಚರಿಕೆ ನೀಡಿದರು.
ನೃತ್ಯಗಾರ್ತಿ ಎಂದ ಮಾತ್ರಕ್ಕೇ ಎಲ್ಲೆಂದರಲ್ಲಿ ಅಲ್ಲಿ ಮುಟ್ಟುವಂತಿಲ್ಲ
ವಿಡಿಯೋದಲ್ಲಿ ದಾಖಲಾಗಿರುವ ಆಡಿಯೋ ಪ್ರಕಾರ, "ಇಲ್ಲಿ ನೃತ್ಯ ಪ್ರದರ್ಶನ ನಡೆಯುತ್ತಿದೆ ಎಂದ ಮಾತ್ರಕ್ಕೆ ನೀವು ನನ್ನನ್ನು ಎಲ್ಲೆಂದರಲ್ಲಿ ಮುಟ್ಟಬಹುದು ಎಂದರ್ಥವಲ್ಲ. ನಿಮ್ಮ ಮಿತಿಯಲ್ಲಿ ನೀವಿರಿ." ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯಿಂದಾಗಿ ನೆರೆದಿದ್ದ ಸಾರ್ವಜನಿಕರಲ್ಲಿ ಭಾರೀ ಗದ್ದಲ ಮತ್ತು ಗೊಂದಲ ಉಂಟಾಯಿತು. ಡಿಂಪಲ್ ಚೌಧರಿ ಅವರು ತಮ್ಮ ವಸ್ತುಗಳನ್ನು ಸಂಗ್ರಹಿಸಿ ವೇದಿಕೆಯಿಂದ ಕೆಳಗಿಳಿಯಲು ಯತ್ನಿಸಿದಾಗ, ಕಾರ್ಯಕ್ರಮದ ಸಂಘಟಕರು ಆ ಯುವಕನ ಪರವಾಗಿ ಕ್ಷಮೆಯಾಚಿಸಿದರು ಮತ್ತು ಆತನನ್ನು ತಕ್ಷಣವೇ ಸ್ಥಳದಿಂದ ಹೊರಗಟ್ಟಿದರು.
ಆಘಾತಗೊಂಡಿದ್ದೆ
ಬುಲಂದ್ಶಹರ್ ಮೂಲದ ಡಿಂಪಲ್ ಚೌಧರಿ ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಾದ್ಯಂತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುತ್ತಾರೆ. ಈ ಘಟನೆ ಕುರಿತು ಮಾತನಾಡಿರುವ ಆಕೆ, ಈ ಘಟನೆ ಬಳಿಕ ಆಘಾತಗೊಂಡಿದ್ದೆ. ಕುಟುಂಬದವರಿಂದ ತೀವ್ರ ವಿರೋಧ ಎದುರಿಸಬೇಕಾಗಿ ಬಂದಿದ್ದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ತಾತ್ಕಾಲಿಕವಾಗಿ ತಮ್ಮ ಫೋನ್ ಆಫ್ ಮಾಡಿದ್ದಾಗಿ ತಿಳಿಸಿದ್ದಾರೆ.
"ಕಲಾವಿದರು ಪ್ರೇಕ್ಷಕರನ್ನು ರಂಜಿಸಲು ಮತ್ತು ತಮ್ಮ ಜೀವನೋಪಾಯಕ್ಕಾಗಿ ವೇದಿಕೆಯ ಮೇಲೆ ಕೆಲಸ ಮಾಡುತ್ತಾರೆ. ಇದು ನಮ್ಮ ಘನತೆಗೆ ಧಕ್ಕೆ ತರಲು ಯಾರಿಗೂ ಹಕ್ಕನ್ನು ನೀಡುವುದಿಲ್ಲ. ತಾವು ಸ್ಥಳದಲ್ಲೇ ವಿಷಯವನ್ನು ಬಗೆಹರಿಸಿಕೊಂಡಿರುವುದರಿಂದ ಈ ಬಗ್ಗೆ ಯಾವುದೇ ಅಧಿಕೃತ ಪೊಲೀಸ್ ದೂರನ್ನು ದಾಖಲಿಸಿಲ್ಲ ಎಂದು ಹೇಳಿದ್ದಾರೆ.
Advertisement