

ಬೆಂಗಳೂರು: ಹಿಟ್ಲರ್ನಿಂದ ಸ್ಫೂರ್ತಿ ಪಡೆದು ಒತ್ತುವರಿ ವಿರೋಧಿ ಪಡೆಗೆ ಹೈಡ್ರಾ ಎಂದು ಹೆಸರಿಟ್ಟಿದ್ದೇವೆ ಎಂಬ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರ ವಿವಾದಾತ್ಮಕ ಹೇಳಿಕೆ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಶನಿವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಹೈಡ್ರಾ ಎಂಬ ಪದವು ಹಿಟ್ಲರ್ನ ನೆಚ್ಚಿನ ಪದವಾಗಿತ್ತು. ಹಿಟ್ಲರ್ನ ಪ್ರಮುಖ ಪಡೆಯನ್ನು ಹೈಡ್ರಾ ಎಂದು ಕರೆಯಲಾಗುತ್ತಿತ್ತು. ಅದು ಯಾರನ್ನು ಬೇಕಾದರೂ ಹತ್ಯೆ ಮಾಡುವ ಸಾಮರ್ಥ್ಯ ಹೊಂದಿತ್ತು. ನಾವು ಕೂಡ ಹಿಟ್ಲರ್ನಿಂದಲೇ ಸ್ಫೂರ್ತಿ ಪಡೆದು ಈ ಸಂಸ್ಥೆಗೆ ಹೈಡ್ರಾ ಎಂದು ಹೆಸರಿಟ್ಟಿದ್ದೇವೆ ಎಂದು ಹೇಳಿದರು.
ಹೈದರಾಬಾದ್ನಲ್ಲಿ ಕೆರೆಗಳು, ಜಲಮೂಲಗಳು ಮತ್ತಿತರ ಸರ್ಕಾರಿ ಕಟ್ಟಡಗಳ ಮೇಲಿನ ಅತಿಕ್ರಮಣ ತೆರವಿಗಾಗಿ ಹೈಡ್ರಾ ಪಡೆ ಸ್ಥಾಪಿಸಲಾಗಿದೆ.
ಈ ಕುರಿತು ತೆಲಂಗಾಣ ಮುಖ್ಯಮಂತ್ರಿ ನೀಡಿರುವ ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಗಿದೆ. ಕೇಂದ್ರ ಕಲ್ಲಿದ್ದಲು ಮತ್ತು ಗಣಿಗಾರಿಕೆ ಸಚಿವ ಜಿ ಕಿಶನ್ ರೆಡ್ಡಿ ತೆಲಂಗಾಣ ಮುಖ್ಯಮಂತ್ರಿ ಅವರ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ್ದಾರೆ ಕಾಂಗ್ರೆಸ್ ನ ಹಿಟ್ಲರ್ ಮನಸ್ಥಿತಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, ಹಿಟ್ಲರ್ ಅವರಿಂದ ಸ್ಫೂರ್ತಿ ಪಡೆದಿರುವುದಾಗಿ ರೇವಂತ್ ರೆಡ್ಡಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ತೆಲಂಗಾಣ ಜನರ ಪರವಾಗಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬಿಆರ್ ಎಸ್ ಕೂಡ ತೀವ್ರ ವಾಗ್ದಾಳಿ ನಡೆಸಿದ್ದು, ರೇವಂತ್ ರೆಡ್ಡಿ ಅವರನ್ನು ಹೊಸ ಹಿಟ್ಲರ್ ಎಂದು ಕರೆದಿದೆ. ಹೈಡ್ರಾದಿಂದ ನೂರಾರು ಜನರು ಮನೆ ಕಳೆದುಕೊಂಡಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದೆ.
Advertisement