

ಹರಿದ್ವಾರ: ವಿಲಕ್ಷಣ ಘಟನೆಯೊಂದರಲ್ಲಿ ವೆಜ್ ಬಿರಿಯಾನಿ ವಿರುದ್ಧ ಹರಿದ್ವಾರದಲ್ಲಿ ಸಾಧು-ಸಂತರ ಗುಂಪೊಂದು ಬೀದಿಗಿಳಿದು ಹೋರಾಟ ಮಾಡುತ್ತಿವೆ.
ಅಚ್ಚರಿಯಾದರೂ ಸತ್ಯ.. ಉತ್ತರಾಖಂಡದ ಹರಿದ್ವಾರದಲ್ಲಿ ಅಖಂಡ ಪರಶುರಾಮ ಅಖಾಡದ ನೇತೃತ್ವದಲ್ಲಿ ಸಾಧು-ಸಂತರ ಒಂದು ಗುಂಪು, "ವೆಜ್ ಬಿರಿಯಾನಿ" ಎಂಬ ಹೆಸರಿನಲ್ಲಿ ಆಹಾರ ಮಾರಾಟ ಮಾಡುವುದನ್ನು ವಿರೋಧಿಸಿ ಅಭಿಯಾನ ಆರಂಭಿಸಿದೆ.
ಅಂಗಡಿ, ಹೊಟೆಲ್ ಮಾಲೀಕರು ಮತ್ತು ಬೀದಿ ಬದಿ ಆಹಾರ ಮಾರಾಟಗಾರರು ತಮ್ಮ ಫಲಕಗಳು ಹಾಗೂ ಮೆನುಗಳಲ್ಲಿ ಇರುವ "ವೆಜ್ ಬಿರಿಯಾನಿ" ಎಂಬ ಪದವನ್ನು ತೆಗೆದು ಅದರ ಬದಲಿಗೆ "ವೆಜ್ ಪುಲಾವ್" ಎಂದು ಬಳಸಬೇಕು ಎಂದು ಈ ಗುಂಪು ಒತ್ತಾಯಿಸಿದೆ.
ಅಭಿಯಾನದ ಭಾಗವಾಗಿ ಸ್ವಯಂಸೇವಕರು ಪಟ್ಟಣದ ವಿವಿಧ ಭಾಗಗಳಲ್ಲಿರುವ ಅಂಗಡಿಗಳ ಫಲಕಗಳು ಹಾಗೂ ತಳ್ಳುಗಾಡಿಗಳ ಮೇಲಿನ "ವೆಜ್ ಬಿರಿಯಾನಿ" ಪದದ ಮೇಲೆ "ವೆಜ್ ಪುಲಾವ್" ಎಂಬ ಸ್ಟಿಕ್ಕರ್ಗಳನ್ನು ಅಂಟಿಸುತ್ತಿದ್ದಾರೆ.
ವೆಜ್ ಬಿರಿಯಾನಿಗೆ ವಿರೋಧವೇಕೆ?
"ಬಿರಿಯಾನಿ" ಎಂಬ ಪದವು ಮಾಂಸಾಹಾರಿ ಆಹಾರದೊಂದಿಗೆ ಸಂಬಂಧ ಹೊಂದಿದ್ದು, ಅದು ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತದೆ ಎಂದು ಅವರು ವಾದಿಸುತ್ತಿದ್ದಾರೆ.
ಅಖಂಡ ಪರಶುರಾಮ ಅಖಾಡದ ಅಧ್ಯಕ್ಷ ಪಂಡಿತ್ ಅಧೀರ್ ಕೌಶಿಕ್ ಮಾತನಾಡಿ, ಸ್ಥಳೀಯ ನಗರಸಭೆಯ ನಿಯಮಾವಳಿಗಳ ಪ್ರಕಾರ ಹರಿದ್ವಾರದ ಕೆಲವು ಪ್ರದೇಶಗಳಲ್ಲಿ ಮಾಂಸ, ಮದ್ಯ ಹಾಗೂ ಮೊಟ್ಟೆಗಳ ಮಾರಾಟ ಮತ್ತು ಸೇವನೆ ನಿಷೇಧಿಸಲಾಗಿದೆ ಎಂದು ಹೇಳಿದರು.
"ಬಿರಿಯಾನಿ ಮೂಲತಃ ಮಾಂಸಾಹಾರಿ ಖಾದ್ಯ. ಸ್ಥಳೀಯ ವ್ಯಾಪಾರಿಗಳು ಅದರಲ್ಲಿ ಮಾಂಸ ಬಳಸದೇ ಇದ್ದರೂ, 'ಬಿರಿಯಾನಿ' ಎಂಬ ಪದವೇ ಸಸ್ಯಾಹಾರಿಗಳ ಭಾವನೆಗಳಿಗೆ ನೋವುಂಟು ಮಾಡುತ್ತದೆ" ಎಂದು ಕೌಶಿಕ್ ಹೇಳಿದರು.
ಅವರು ಮುಂದುವರೆದು, 'ಕಬಾಬ್' ಮತ್ತು 'ಚಾಪ್' ಎಂಬ ಪದಗಳೂ ಮಾಂಸಾಹಾರಿ ಆಹಾರ ಪದ್ಧತಿಯೊಂದಿಗೆ ಸಂಬಂಧ ಹೊಂದಿವೆ. ಹೀಗಾಗಿ ತಮ್ಮ ಅಭಿಯಾನದ ಮುಂದಿನ ಹಂತದಲ್ಲಿ ಈ ಹೆಸರುಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂಬಂಧ ಅಖಂಡ ಪರಶುರಾಮ ಅಖಾಡವು ನಗರಸಭೆ ಆಯುಕ್ತರಿಗೆ ಪತ್ರ ಬರೆದು, ಹೋಟೆಲ್ಗಳು ಮತ್ತು ಉಪಹಾರ ಗೃಹಗಳು ತಮ್ಮ ಮೆನು ಕಾರ್ಡ್ಗಳಿಂದ "ಬಿರಿಯಾನಿ", "ಕಬಾಬ್" ಮತ್ತು "ಚಾಪ್" ಎಂಬ ಪದಗಳನ್ನು ತೆಗೆದುಹಾಕುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.
Advertisement