

ಕೋಲ್ಕತ್ತಾ: 15 ವರ್ಷಗಳ ಕಾಲ ಮಮತಾ ಬ್ಯಾನರ್ಜಿ ಮತ್ತು ಅವರ ತೃಣಮೂಲ ಕಾಂಗ್ರೆಸ್ ನ್ನು ಯಾರೂ ಕೂಡಾ ಮುಟ್ಟಲು ಸಾಧ್ಯವಿರಲಿಲ್ಲ. ಸತತ ಮೂರು ವಿಧಾನಸಭಾ ಚುನಾವಣೆಯ ಗೆಲುವು ಆಕೆಗೆ ಪಕ್ಷದ ಅನಭಿಷಕ್ತ ರಾಣಿಯ ಪಟ್ಟ ನೀಡಿತ್ತು. ಅಲ್ಲದೇ ನಾಲ್ಕು ಸತತ ಲೋಕಸಭಾ ಚುನಾವಣೆಗಳಲ್ಲಿ ಟಿಎಂಸಿ ದೊಡ್ಡ ಪಕ್ಷವಾಗಿ ಗೆಲುವು ಸಾಧಿಸುವ ಮೂಲಕ ಮಮತಾ ಬ್ಯಾನರ್ಜಿ ಹಿಡಿತವನ್ನು ಮತ್ತಷ್ಟು ಬಲಪಡಿಸಿತ್ತು.
ಆದರೆ, ಗುರುವಾರ ಪಕ್ಷದ ಹಿರಿಯ ಕಲ್ಯಾಣ್ ಬ್ಯಾನರ್ಜಿ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಸಿಡಿದೆದ್ದ ನಂತರ TMC ಅಸ್ತಿತ್ವದ ಬಿಕ್ಕಟ್ಟು ಬಿಗಡಾಯಿಸಿತು. ಇದು ನನಗೆ ದೊಡ್ಡ ಅವಮಾನ. ಆತನ ದುರಹಂಕಾರದ ವರ್ತನೆ ಪಕ್ಷವನ್ನು ನಾಶಮಾಡಿದೆ. ಅದನ್ನು ಆತ ಅರ್ಥ ಮಾಡಿಕೊಳ್ಳಬೇಕು ಎಂದು ಮಮತಾ ಬ್ಯಾನರ್ಜಿ ಆಪ್ತ ಆಕ್ರೋಶ ವ್ಯಕ್ತಪಡಿಸಿದರು.
ಆತ ಪ್ರತಿದಿನ ನಾನೇ ರಾಜ ಅಂದುಕೊಂಡಿದ್ದಾನೆ. ಕೆಟ್ಟ ದಿನಗಳಲ್ಲಿಯೂ ಅದೇ ತರಹದ ವರ್ತನೆ ತೋರಿಸುತ್ತಿದ್ದಾನೆ. ನಾನು ಪಕ್ಷ ಹಾಗೂ ಮಮತಾ ಬ್ಯಾನರ್ಜಿ ಹಿಂದೆ ನಿಂತಾಗ ಕೆಲಸ ಮಾಡುವುದಕ್ಕೆ ಆಗುತ್ತಿಲ್ಲ. ಅಭಿಷೇಕ್ ಬ್ಯಾನರ್ಜಿ ವರ್ತನೆಯಿಂದ ಇದು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ನಾನಾ ಅಥವಾ ಅಭಿಷೇಕ್ ಬ್ಯಾನರ್ಜಿನಾ ಎಂಬುದನ್ನು ಮಮತಾ ಬ್ಯಾನರ್ಜಿ ಮೊದಲು ನಿರ್ಧರಿಸಬೇಕು. ಅಭಿಷೇಕ್ ಇಲ್ಲದೆ ಪಕ್ಷ ಮುನ್ನಡೆಸಲು ಸಾಧ್ಯವಾಗದಿದ್ದರೆ, ನಾನು ಇಲ್ಲಿ ಇರುವುದಿಲ್ಲ ಎಂದು ಅಂತಿಮ ಎಚ್ಚರಿಕೆ ನೀಡಿದ್ದಾರೆ.
ನಕಲಿ ಸಹಿ ಸಂಗ್ರಹ ಪ್ರಕರಣದಲ್ಲಿ ಕ್ರಿಮಿನಲ್ ತನಿಖೆ ಎದುರಿಸುತ್ತಿರುವ ಅಭಿಷೇಕ್ ಬ್ಯಾನರ್ಜಿಯ ವಕೀಲ ಸ್ಥಾನದಿಂದ ತನ್ನನ್ನು ಕೈಬಿಟ್ಟಿದ್ದಾರೆ ಎಂಬ ವರದಿಗಳ ನಂತರ ಕಲ್ಯಾಣ್ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎರಡನೇ ಅರ್ಜಿ ಸಲ್ಲಿಸಿದಾಗ ತನ್ನನ್ನು ಬದಲಾಯಿಸಲಾಗಿದೆ ಎಂಬುದು ಗೊತ್ತಾಯಿತು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಇದಕ್ಕೂ ಮುನ್ನ ಕಲ್ಕತ್ತಾ ಹೈಕೋರ್ಟ್ ಅಭಿಷೇಕ್ ಬ್ಯಾನರ್ಜಿಗೆ ಮೂರು ವಾರಗಳ ಕಾಲ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿತು. ಜೊತೆಗೆ ಗುರುವಾರ ಸಂಜೆ 6 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಿಸಿದೆ.
Advertisement