

ಹನುಮಕೊಂಡ: ಅಪರೂಪದ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿರುವ ಪುಟ್ಟ ಅಭಿಮಾನಿಯ ನೋಡಲು ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಹಾಗೂ ಪವರ್ ಸ್ಟಾರ್ ಪವನ್ ಕಲ್ಯಾಣ್ ಆತನ ಮನೆಗೆ ತೆರಳಿ ಅಚ್ಚರಿ ಮೂಡಿಸಿದ್ದಾರೆ.
ಹೌದು.. ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಅಪರೂಪದ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿರುವ ತಮ್ಮ ಪುಟ್ಟ ಅಭಿಮಾನಿ ನಿರಂಜನ್ ಎಂಬ ಪುಟ್ಟ ಬಾಲಕನ ಆಸೆಯನ್ನು ಈಡೇರಿಸಿದ್ದಾರೆ.
ಆಂಧ್ರ ಪ್ರದೇಶದ ಹನುಮಕೊಂಡದಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿದ ಪವನ್ ಕಲ್ಯಾಣ್ ಅಭಿಮಾನಿಯ ಖುದ್ಧು ಭೇಟಿ ಮಾಡಿದ್ದಲ್ಲದೇ ಅವರಿಗೆ ಆರ್ಥಿಕ ಸಹಾಯ ಕೂಡ ನೀಡಿ ಮಾನವೀಯತೆ ಮೆರೆದಿದ್ದಾರೆ.
ದೀರ್ಘಕಾಲದಿಂದ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡುವ ಕನಸು ಕಂಡಿದ್ದ ನಿರಂಜನ್ ಅವರನ್ನು ಭೇಟಿಯಾದ ಉಪ ಮುಖ್ಯಮಂತ್ರಿ ಅವರು, ಬಾಲಕನ ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಿಸಿ ಕುಟುಂಬಕ್ಕೆ ಧೈರ್ಯ ತುಂಬಿದರು. ಅಲ್ಲದೆ, ಚಿಕಿತ್ಸಾ ವೆಚ್ಚಕ್ಕಾಗಿ 1 ಲಕ್ಷ ಆರ್ಥಿಕ ನೆರವು ನೀಡಿ ಕುಟುಂಬಕ್ಕೆ ಬೆಂಬಲ ವ್ಯಕ್ತಪಡಿಸಿದರು.
ವೆಂಕಟೇಶ್ವರ ಸ್ವಾಮಿ ಪ್ರಸಾದ ನೀಡಿದ ಪವನ್
ಈ ಸಂದರ್ಭದಲ್ಲಿ ಪವನ್ ಕಲ್ಯಾಣ್ ಅವರು ನಿರಂಜನ್ಗೆ ಶ್ರೀ ವೆಂಕಟೇಶ್ವರ ಸ್ವಾಮಿಯ ತೀರ್ಥ ಪ್ರಸಾದವನ್ನು ನೀಡಿ ಆಶೀರ್ವದಿಸಿದರು. ಬಾಲಕನ ಶೀಘ್ರ ಚೇತರಿಕೆ ಹಾಗೂ ಉತ್ತಮ ಆರೋಗ್ಯಕ್ಕಾಗಿ ಭದ್ರಕಾಳಿ ಅಮ್ಮನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಉಪ ಮುಖ್ಯಮಂತ್ರಿಗಳ ಈ ಭೇಟಿ ನಿರಂಜನ್ ಹಾಗೂ ಅವರ ಕುಟುಂಬದವರಿಗೆ ಅಪಾರ ಸಂತೋಷ ಮತ್ತು ಆತ್ಮಸ್ಥೈರ್ಯವನ್ನು ನೀಡಿತು. ಪವನ್ ಕಲ್ಯಾಣ್ ಅವರ ಮಾನವೀಯ ಕಾಳಜಿ ಮತ್ತು ಸಹಾನುಭೂತಿಯ ನಡೆಗೆ ಸ್ಥಳೀಯರು ಹಾಗೂ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಹೃದಯಸ್ಪರ್ಶಿ ಘಟನೆ ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದು, ಗಂಭೀರ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವ ಬಾಲ ಅಭಿಮಾನಿಯೊಂದಿಗೆ ವೈಯಕ್ತಿಕವಾಗಿ ಸಮಯ ಕಳೆಯುವ ಮೂಲಕ ಪವನ್ ಕಲ್ಯಾಣ್ ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿದ್ದಾರೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
Advertisement