

ಇಂದು ಶುಕ್ರವಾರ ತಮಿಳು ನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್, ಕರ್ನಾಟಕ ಸರ್ಕಾರವು ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟು ನಿರ್ಮಿಸಲು ಕೈಗೊಂಡಿರುವ ಕ್ರಮದ ವಿರುದ್ಧ ನಿರ್ಣಯವನ್ನು ಮಂಡಿಸಿದರು.
ಈ ನಿರ್ಣಯದಲ್ಲಿ, ಕೇಂದ್ರ ಸರ್ಕಾರವು ಯೋಜನೆಗೆ ತಾಂತ್ರಿಕ ಹಾಗೂ ಪರಿಸರ ಅನುಮೋದನೆ ನೀಡಬಾರದು ಎಂದು ಒತ್ತಾಯಿಸಿದರು. ಕರ್ನಾಟಕ ಸರ್ಕಾರವು ಈ ಯೋಜನೆಯನ್ನು ಏಕಪಕ್ಷೀಯವಾಗಿ ಜಾರಿಗೊಳಿಸಲು ಪ್ರಯತ್ನಿಸುತ್ತಿದ್ದು, ಯೋಜನೆಗೆ ಸಂಬಂಧಿಸಿದ ಇತರ ಹಿತಾಸಕ್ತಿ ರಾಜ್ಯಗಳ ಒಪ್ಪಿಗೆ ಪಡೆಯಬೇಕು ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
ತಮಿಳು ನಾಡು ಸರ್ಕಾರವು ಬಹುಕಾಲದಿಂದಲೇ ಮೇಕೆದಾಟುವಿನಲ್ಲಿ ಸಮತೋಲನ ಜಲಾಶಯ (Balancing Reservoir) ನಿರ್ಮಿಸುವ ಕರ್ನಾಟಕದ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸುತ್ತಿದೆ. ಈ ಯೋಜನೆಯಿಂದ ತನ್ನ ನೀರಿನ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ, ತಮಿಳು ನಾಡಿನ ಕಾವೇರಿ ಜಲಾನಯನ ಪ್ರದೇಶದ ರೈತರ ಕೃಷಿಗೆ ತೊಂದರೆಯಾಗುತ್ತದೆ ಎಂಬುದು ತಮಿಳುನಾಡಿನ ವಾದವಾಗಿದೆ.
ಇನ್ನೊಂದೆಡೆ, ಕರ್ನಾಟಕ ಸರ್ಕಾರವು ಈ ಜಲಾಶಯ ಯೋಜನೆಯು ಬೆಂಗಳೂರು ನಗರದ ಕುಡಿಯುವ ನೀರಿನ ಅಗತ್ಯತೆ ಪೂರೈಸುವುದು ಹಾಗೂ ವಿದ್ಯುತ್ ಉತ್ಪಾದನೆ ಎರಡು ಪ್ರಮುಖ ಉದ್ದೇಶಗಳನ್ನು ಹೊಂದಿದ್ದು, ಇದರಿಂದ ತಮಿಳುನಾಡಿನ ಹಿತಾಸಕ್ತಿಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ನಿರಂತರವಾಗಿ ಪ್ರತಿಪಾದಿಸುತ್ತಿದೆ.
Congress, VCK ಬೆಂಬಲ
ಈ ನಿರ್ಣಯಕ್ಕೆ ಕಾಂಗ್ರೆಸ್ ಹಾಗೂ ವಿದುತಲೈ ಚಿರುತೈಗಲ್ ಕಟ್ಚಿ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ತಮಿಳುನಾಡು ವಿಧಾನಸಭೆಯ ಕಾಂಗ್ರೆಸ್ ನಾಯಕ ರಾಕೇಶ್ ಕುಮಾರ್ ಹಾಗೂ ವಿಸಿಕೆ ನಾಯಕ ಮತ್ತು ಸಚಿವ ವನ್ನಿಯರಸು ಸಂಪೂರ್ಣ ಬೆಂಬಲ ಸೂಚಿಸಿ, ಅಂತಾರಾಜ್ಯ ನದಿ ನೀರಿನ ವಿವಾದದ ವಿಚಾರದಲ್ಲಿ ಎಲ್ಲ ಪಕ್ಷಗಳು ಒಗ್ಗಟ್ಟಿನ ನಿಲುವು ತಾಳಬೇಕೆಂದು ಒತ್ತಾಯಿಸಿದರು.
ನಿರ್ಣಯ ಮಂಡಿಸಿದ ಮುಖ್ಯಮಂತ್ರಿ ಸಿ ಜೋಸೆಫ್, ಮೆಕೆದಾಟು ಯೋಜನೆಯು ಅಸ್ತಿತ್ವದಲ್ಲಿರುವ ಕಾನೂನು ನಿಯಮಗಳನ್ನು ಉಲ್ಲಂಘಿಸುವುದರ ಜೊತೆಗೆ, ಕಾವೇರಿ ನೀರಿನ ಮೇಲಿನ ತಮಿಳುನಾಡಿನ ಹಕ್ಕುಗಳಿಗೆ ಧಕ್ಕೆಯಾಗಲಿದೆ ಎಂದು ವಾದಿಸಿದರು.
ಸಿಎಂ ಮಂಡಿಸಿದ ನಿರ್ಣಯದಲ್ಲಿ ಏನಿದೆ?
"2007ರ ಫೆಬ್ರವರಿ 5ರಂದು ನೀಡಲಾದ ಕಾವೇರಿ ಜಲ ವಿವಾದ ನ್ಯಾಯಾಧೀಕರಣ ಅಂತಿಮ ತೀರ್ಪು ಹಾಗೂ 2018ರ ಫೆಬ್ರವರಿ 16ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಗೌರವಿಸದೆ, ಸಂಬಂಧಿತ ಜಲಾನಯನ ರಾಜ್ಯಗಳ ಒಪ್ಪಿಗೆ ಪಡೆಯದೆ ಮತ್ತು ಕೇಂದ್ರ ಸರ್ಕಾರದ ಅನುಮೋದನೆ ಇಲ್ಲದೆ ಕರ್ನಾಟಕ ಸರ್ಕಾರವು ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲು ಮುಂದಾಗಿರುವ ಏಕಪಕ್ಷೀಯ ಪ್ರಯತ್ನವನ್ನು ಈ ಸದನ ತೀವ್ರವಾಗಿ ವಿರೋಧಿಸುತ್ತದೆ. ಇಂತಹ ಕ್ರಮವನ್ನು ಯಾವುದೇ ಕಾರಣಕ್ಕೂ ಒಪ್ಪಲಾಗುವುದಿಲ್ಲ".
ಮೇಕೆದಾಟು ಯೋಜನೆಗೆ ಅಗತ್ಯವಿರುವ ಯಾವುದೇ ರೀತಿಯ ತಾಂತ್ರಿಕ ಹಾಗೂ ಪರಿಸರ ಅನುಮೋದನೆಗಳನ್ನು ನೀಡಬಾರದು ಎಂದು ಕೇಂದ್ರ ಸರ್ಕಾರವನ್ನು ಸದನ ಒತ್ತಾಯಿಸಿದೆ.
ನಿರ್ಣಯದಲ್ಲಿ, "ಕಾವೇರಿ ಜಲಾನಯನ ಪ್ರದೇಶವು ನೀರಿನ ಕೊರತೆ ಹೊಂದಿರುವ ಪ್ರದೇಶವಾಗಿದೆ ಎಂದು ಕಾವೇರಿ ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್ ಎರಡೂ ಅಭಿಪ್ರಾಯಪಟ್ಟಿವೆ. ಲಭ್ಯವಿರುವ ನೀರನ್ನು ಈಗಾಗಲೇ ಎಲ್ಲಾ ಪಾಲುದಾರ ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ. ಆದ್ದರಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಯಾವುದೇ ಹೊಸ ಯೋಜನೆ ಕೈಗೊಳ್ಳಲು ಅಥವಾ ಹೆಚ್ಚುವರಿ ನೀರನ್ನು ಬಳಸಲು ಅವಕಾಶವಿಲ್ಲ" ಎಂದು ಉಲ್ಲೇಖಿಸಲಾಗಿದೆ.
ಕಾವೇರಿ ವಿವಾದವು ತಮಿಳು ನಾಡು ಮತ್ತು ಕರ್ನಾಟಕ ನಡುವಿನ ಅತ್ಯಂತ ಸೂಕ್ಷ್ಮ ವಿಷಯವಾಗಿದೆ. ಹೀಗಾಗಿ, ಇತರ ಜಲಾನಯನ ರಾಜ್ಯಗಳ ಒಪ್ಪಿಗೆ ಹಾಗೂ ಕೇಂದ್ರ ಸರ್ಕಾರದ ಅನುಮೋದನೆ ಇಲ್ಲದೆ ಮೇಕೆದಾಟು ಅಥವಾ ಕಾವೇರಿ ಜಲಾನಯನ ಪ್ರದೇಶದ ಬೇರೆ ಯಾವುದೇ ಸ್ಥಳದಲ್ಲಿ ಅಣೆಕಟ್ಟು ಅಥವಾ ಹೊಸ ನೀರು ಸಂಗ್ರಹ ಯೋಜನೆ ಕೈಗೊಳ್ಳದಂತೆ ಕರ್ನಾಟಕ ಸರ್ಕಾರಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಬೇಕು ಎಂದು ಸದನ ಮನವಿ ಮಾಡಿದೆ.
ಇದೇ ವೇಳೆ, ಕೇಂದ್ರ ಜಲ ಆಯೋಗ ಕೂಡ ಕರ್ನಾಟಕ ಸಲ್ಲಿಸಿರುವ ವಿವರವಾದ ಯೋಜನಾ ವರದಿ (DPR)ಯನ್ನು ಪರಿಶೀಲಿಸಬಾರದು, ಪ್ರಕ್ರಿಯೆಗೊಳಿಸಬಾರದು ಹಾಗೂ ಅನುಮೋದಿಸಬಾರದು ಎಂದು ತಮಿಳುನಾಡು ಸರ್ಕಾರ ಆಗ್ರಹಿಸಿದೆ.
ನಿರ್ಣಯದ ಕೊನೆಯಲ್ಲಿ, ತಮಿಳುನಾಡಿನ ರೈತರ ಹಿತಾಸಕ್ತಿಯನ್ನು ರಕ್ಷಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಈ ಪ್ರಯತ್ನವನ್ನು ತಡೆಯಲು ತಮಿಳುನಾಡು ಸರ್ಕಾರ ಕೈಗೊಳ್ಳುತ್ತಿರುವ ಎಲ್ಲ ಕ್ರಮಗಳಿಗೆ ಈ ಸದನ ಸರ್ವಾನುಮತದಿಂದ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಹೇಳಲಾಗಿದೆ.
Advertisement