

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನಿನ್ನೆ ಶನಿವಾರ ಮುಂಬೈಯಲ್ಲಿ ಶಿವಸೇನೆ ಯುಬಿಟಿ ಬಣದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಅವರ ಮಾತೋಶ್ರೀ ನಿವಾಸದಲ್ಲಿ ಭೇಟಿ ಮಾಡಿದರು.
ಇತ್ತೀಚೆಗೆ ಶಿವಸೇನೆ (UBT) ಪಕ್ಷದ ಒಳಗಿನ ಭಿನ್ನಾಭಿಪ್ರಾಯಗಳು ತೀವ್ರಗೊಂಡಿರುವ ಸಂದರ್ಭದಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಪಕ್ಷದ ಸಂಸದೀಯ ಸಭೆಗೆ ಆರು ಲೋಕಸಭಾ ಸದಸ್ಯರು ಗೈರಾಗಿದ್ದರಿಂದ ಪಕ್ಷದೊಳಗೆ ಉದ್ವಿಗ್ನತೆ ಉಂಟಾಗಿತ್ತು.
ಈ ಭೇಟಿಯಲ್ಲಿ ಉದ್ಧವ್ ಠಾಕ್ರೆ ಅವರ ಪತ್ನಿ ರಶ್ಮಿ ಠಾಕ್ರೆ, ಯುವಸೇನೆ ಮುಖ್ಯಸ್ಥ ಆದಿತ್ಯ ಠಾಕ್ರೆ ಹಾಗೂ ಸಂಸದ ಸಂಜಯ್ ರಾವತ್ ಉಪಸ್ಥಿತರಿದ್ದರು.
ಡಿಕೆ ಶಿವಕುಮಾರ್ ಅವರು ಸೋಷಿಯಲ್ ಮೀಡಿಯಾದಲ್ಲಿ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಅವರ ಕುಟುಂಬದವರನ್ನು ಮತ್ತು ಸಂಸದ ಸಂಜಯ್ ರಾವತ್ ಅವರನ್ನು ಮುಂಬೈಯಲ್ಲಿ ಭೇಟಿ ಮಾಡಿದ್ದು ಸಂತೋಷ ಉಂಟುಮಾಡಿತು. ಸಾರ್ವಜನಿಕ ಹಿತಾಸಕ್ತಿಯ ಹಲವು ವಿಷಯಗಳ ಕುರಿತು ಆತ್ಮೀಯವಾಗಿ ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಶಿವಸೇನೆ (ಯುಬಿಟಿ) ಮತ್ತು ಕಾಂಗ್ರೆಸ್ ನಡುವಿನ ವಿಲೀನದ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದ್ದರೂ, ಉದ್ಧವ್ ಠಾಕ್ರೆ ಅವರು ಪಕ್ಷದ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಶಿವಸೇನೆ ಕಾಂಗ್ರೆಸ್ಗೆ ವಿಲೀನವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೊಂದೆಡೆ, ಲೋಕಸಭೆಯಲ್ಲಿನ ಪಕ್ಷದ ಮುಖ್ಯ ವಿಪ್ ಅನಿಲ್ ದೇಸಾಯಿ ಗೈರಾಗಿದ್ದ ಆರು ಸಂಸದರಿಗೆ ಕಾರಣ ಕೇಳಿ ನೊಟೀಸ್ ಜಾರಿ ಮಾಡಿದ್ದಾರೆ. 24 ಗಂಟೆಗಳೊಳಗೆ ಲಿಖಿತ ಉತ್ತರ ನೀಡುವಂತೆ ಸೂಚಿಸಲಾಗಿದ್ದು, ಉತ್ತರಿಸದಿದ್ದರೆ ಅವರು ಸ್ವಯಂ ಪಕ್ಷದ ಸದಸ್ಯತ್ವ ತ್ಯಜಿಸಿದ್ದಾರೆ ಎಂದು ಪರಿಗಣಿಸಿ ಸಂವಿಧಾನದ 10ನೇ ಅನುಸೂಚಿ (ಪಕ್ಷಾಂತರ ನಿಷೇಧ ಕಾಯ್ದೆ) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳಲ್ಲಿನ ರಾಜಕೀಯ ಸ್ಥಿತ್ಯಂತರಗಳು ಹಾಗೂ ಪ್ರಾದೇಶಿಕ ಪಕ್ಷಗಳ ಪಾತ್ರದ ಹಿನ್ನೆಲೆಯಲ್ಲಿ ಡಿ ಕೆ ಶಿವಕುಮಾರ್ ಅವರ ಭೇಟಿಯು ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ.
ಲೋಕಸಭೆಯಲ್ಲಿನ ಒಂಬತ್ತು ಸಂಸದರಲ್ಲಿ ಆರು ಮಂದಿ ಎರಡು-ಮೂರರಷ್ಟು ಸಂಖ್ಯೆಯನ್ನು ಹೊಂದಿರುವುದರಿಂದ, ಅವರು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ವಿಲೀನವಾದರೆ ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ ಅನರ್ಹತೆಯಿಂದ ರಕ್ಷಣೆ ಸಿಗುವ ಸಾಧ್ಯತೆ ಇದೆ ಎಂಬ ರಾಜಕೀಯ ಚರ್ಚೆಯೂ ನಡೆಯುತ್ತಿದೆ.
ಈ ಮಧ್ಯೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೊಲ್ಹಾಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ, ಈಗ ಒಂದೇ ಶಿವಸೇನೆ ಇದೆ, ಅದು ಏಕನಾಥ್ ಶಿಂಧೆ ಅವರ ನೇತೃತ್ವದಲ್ಲಿದೆ ಎಂದು ಹೇಳಿದ್ದಾರೆ.
ಡಿಕೆ ಶಿವಕುಮಾರ್ ಅವರು ಮುಂಬೈಗೆ ಭೇಟಿ ನೀಡಿದ್ದದ್ದು ಸುಪ್ರಿಯಾ ಸುಳೆ ಅವರ ಪುತ್ರಿ ರೇವತಿ ಸುಳೆ ಮತ್ತು ಸಾರಂಗ್ ಲಖಾನಿ ಅವರ ವಿವಾಹ ಸಮಾರಂಭದಲ್ಲಿ ನಿನ್ನೆ ಸಾಯಂಕಾಲ ಭಾಗವಹಿಸಿದ್ದಾರೆ.
Advertisement