

ಚೆನ್ನೈ: ತಮಿಳುನಾಡು ಸಿಎಂ ವಿಜಯ್ ಅವರ ಖಾಸಗಿ ಜೀವನವನ್ನು ಗುರಿಯಾಗಿಸಿ ಪ್ರತಿಪಕ್ಷ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭೆಯಲ್ಲಿ ವಿಜಯ್ ಅವರ ಹೇಳಿಕೆಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಉದಯ ನಿಧಿ ಸ್ಟಾಲಿನ್, ಚರ್ಚೆಯನ್ನು ರಾಜಕೀಯದಿಂದ ಸಿಎಂ ಖಾಸಗಿ ಜೀವನದತ್ತ ಬದಲಾಯಿಸಿದರು. ಚೆಂಗಲ್ಪಟ್ಟು ನ್ಯಾಯಾಲಯದಲ್ಲಿ ತನ್ನ ಪತಿಯನ್ನು ಹುಡುಕುತ್ತಿರುವ ಹೆಂಡತಿಯ ಕಥೆ" ಎಂದು ವಿಪಕ್ಷ ನಾಯಕ ಸ್ಟಾಲಿನ್ ಚುಚ್ಚಿದರು.
ಇದು ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಸೊರ್ನಲಿಂಗಂ ನಡುವೆ ನಡೆಯುತ್ತಿರುವ ವಿಚ್ಛೇದನ ಪ್ರಕ್ರಿಯೆ ಕುರಿತ ಹೇಳಿಕೆಯಾಗಿದೆ. ಸಂಗೀತಾ ತಮ್ಮ 27 ವರ್ಷಗಳ ದಾಂಪತ್ಯವನ್ನು ವಿಸರ್ಜಿಸುವಂತೆ ಕೋರಿ ಡಿಸೆಂಬರ್ 2025 ರಲ್ಲಿ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಕರಣ ಬಾಕಿ ಉಳಿದಿದ್ದು, ಮುಂದಿನ ವಿಚಾರಣೆ ಆಗಸ್ಟ್ 7 ಕ್ಕೆ ನಿಗದಿಯಾಗಿದೆ.
ರೈತರ ಪ್ರತಿಭಟನೆಗಳ ಕುರಿತು ವಿಜಯ್ ಅವರ ಹೇಳಿಕೆಗಳನ್ನು ಖಂಡಿಸಿದ ಉದಯನಿಧಿ, ವಿಪಕ್ಷಗಳ ಸೂಚನೆಯಂತೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳುವುದು ಸೂಕ್ತವಲ್ಲ. ಸಣ್ಣ ಕಥೆ ಎಂಬ ಮುಖ್ಯಮಂತ್ರಿಗಳ ಹೇಳಿಕೆಯನ್ನು ಟೀಕಿಸಿದರು. ಇದು ವಿಧಾನಸಭೆಯ ಘನತೆಗೆ ತಕ್ಕುದಲ್ಲ ಎಂದರು. "ಚೆಂಗಲ್ಪಟ್ಟು ನ್ಯಾಯಾಲಯದಲ್ಲಿ ತನ್ನ ಗಂಡನನ್ನು ಹುಡುಕುತ್ತಿರುವ ಹೆಂಡತಿಯ ಕಥೆ ತಮಿಳುನಾಡಿನ ಎಲ್ಲರಿಗೂ ತಿಳಿದಿದೆ. ಆದ್ದರಿಂದ ವಿಜಯ್ ಒಬ್ಬ ನಟನಂತೆ ಯೋಚಿಸುವುದನ್ನು ಬಿಟ್ಟು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಬೇಕು ಎಂದು ಸ್ಟಾಲಿನ್ ಟೀಕಿಸಿದರು.
ಇದಕ್ಕೂ ಮುನ್ನ ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ವಿಜಯ್, ಪಕ್ಷದ ಹೆಸರಿನಲ್ಲಿ ಸಂಗ್ರಹಿಸಿದ ಸಾರ್ವಜನಿಕ ಹಣವನ್ನು ತಮ್ಮ ಆಡಳಿತದಲ್ಲಿ ಮರುಪಡೆಯಲಾಗುವುದು ಎಂದು ಹೇಳಿದರು. ಈ ಹೇಳಿಕೆಗೆ ಡಿಎಂಕೆ ಶಾಸಕರು ತಕ್ಷಣ ಪ್ರತಿಭಟನೆ ನಡೆಸಿದರು. ಸಿಎಂ ಆರೋಪಕ್ಕೆ ಸಾಕ್ಷಿ ತೋರಿಸುವಂತೆ ಉದಯನಿಧಿ ಒತ್ತಾಯಿಸಿದರು.
ರಾಜ್ಯಪಾಲರ ಭಾಷಣಕ್ಕೆ ಮುಖ್ಯಮಂತ್ರಿ ಉತ್ತರಿಸುವ ಸಮಯದಲ್ಲಿ ಅಡ್ಡಿಪಡಿಸದಂತೆ ವಿಪಕ್ಷ ಶಾಸಕರು ಸ್ಪೀಕರ್ ಸೂಚಿಸಿದರು. ಆದಾಗ್ಯೂ, ಡಿಎಂಕೆ ಸದಸ್ಯರು ತಮ್ಮ ಪ್ರತಿಭಟನೆಗಳನ್ನು ಮುಂದುವರೆಸಿದರು.
ಆದಾಗ್ಯೂ ಭಾಷಣ ಮುಂದುವರೆಸಿದ ವಿಜಯ್, ಹಿಂದಿನ ಡಿಎಂಕೆ ಸರ್ಕಾರಗಳಿಗಿಂತ ಭಿನ್ನವಾಗಿ, ಟಿವಿಕೆ ಆಡಳಿತ ಭ್ರಷ್ಟಾಚಾರದಲ್ಲಿ ತೊಡಗುವುದಿಲ್ಲ ಅಥವಾ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಳ್ಳಲು ಬಿಡುವುದಿಲ್ಲ ಎಂದು ಪ್ರತಿಪಾದಿಸಿದರು.
Advertisement