

ಕಳೆದ ಹಲವಾರು ತಿಂಗಳುಗಳಿಂದ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಸೊರ್ನಲಿಂಗಂ ಅವರು ವಿಚ್ಛೇದನ ವಿಚಾರವಾಗಿ ಸಾಕಷ್ಟು ಸುದ್ದಿಯಾಗಿದ್ದಾರೆ. ವಿಚ್ಛೇದನಕ್ಕೆ ಸಂಬಂಧಿಸಿದಂತೆ ಜೂನ್ 15 ರಂದು ನಿರ್ಣಾಯಕ ವಿಚಾರಣೆ ನಡೆಯಲಿದ್ದು, ದಂಪತಿ ಇದೀಗ ಒಂದಾಗಲಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ, ವಿಷಯವನ್ನು ಸೌಹಾರ್ದಯುತವಾಗಿ ಪರಿಹರಿಸುವ ಸಲುವಾಗಿ ದಂಪತಿ ನಡುವೆ ಸದ್ಯ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ. ವಿಜಯ್ ಅಥವಾ ಸಂಗೀತಾ ಅವರಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲವಾದರೂ, ಸಂಭವನೀಯ ಇತ್ಯರ್ಥದ ಸುತ್ತಲಿನ ಊಹಾಪೋಹಗಳು ಹೆಚ್ಚಾಗಿವೆ.
ಶುಕ್ರವಾರ ವಿಜಯ್ ಉಡುಪಿಯ ಕೊಲ್ಲೂರು ಮೂಕಾಂಬಿಕ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಾಲಯದಲ್ಲಿ ಕೆಲಕಾಲ ಕಳೆದ ಅವರು ದೇವಿಗೆ 1.6 ಕೆಜಿಯ ಬೆಳ್ಳಿ ಖಡ್ಗವನ್ನು ಅರ್ಪಿಸಿದ್ದಾರೆ. ಈ ಭೇಟಿ ಬಳಿಕ ಅವರ ವೈಯಕ್ತಿಕ ಜೀವನದ ಬಗ್ಗೆ ಹೊಸ ಚರ್ಚೆಗಳು ಆರಂಭವಾಗಿವೆ
ವಿಜಯ್ ಅವರ ತಾಯಿ ಶೋಭಾ ಚಂದ್ರಶೇಖರ್ ಮಧ್ಯವರ್ತಿಯಾಗಿದ್ದು, ಅವರು ದಂಪತಿ ನಡುವಿನ ಭಿನ್ನಾಭಿಪ್ರಾಯಗಳನ್ನು ಖಾಸಗಿಯಾಗಿಯೇ ಪರಿಹರಿಸಿಕೊಳ್ಳಲು ಸಹಾಯ ಮಾಡುತ್ತಿದ್ದಾರೆ ಮತ್ತು ಇಬ್ಬರ ನಡುವೆ ಮಾತುಕತೆಗೆ ಪ್ರೋತ್ಸಾಹಿಸುತ್ತಿದ್ದಾರೆ ಎಂದು ವರದಿಯಾಗಿದ್ದು, ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ.
ಇತ್ತೀಚಿನ ವರದಿಗಳ ಪ್ರಕಾರ, ಲಂಡನ್ನಲ್ಲಿ ತಮ್ಮ ಮಕ್ಕಳಾದ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಅವರೊಂದಿಗೆ ವಾಸಿಸುತ್ತಿದ್ದ ಸಂಗೀತಾ ಇದೀಗ ಚೆನ್ನೈಗೆ ಮರಳಿದ್ದಾರೆ. ಕೆಲವು ಮೂಲಗಳಿಂದ ಪಡೆದ ಮಾಹಿತಿ ಪ್ರಕಾರ, ದಂಪತಿ ಮುಚ್ಚಿದ ಬಾಗಿಲುಗಳ ಹಿಂದೆ ಮಾತುಕತೆಯಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.
ದಂಪತಿ ವಿಚ್ಛೇದನಕ್ಕೆ ಸಂಬಂಧಿಸಿದ ಪ್ರಕರಣವು ಜೂನ್ 15 ರಂದು ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ಹಾಲಿ ಮುಖ್ಯಮಂತ್ರಿಯ ಸುರಕ್ಷತೆಯ ಕಾರಣದಿಂದಾಗಿ ಇಬ್ಬರೂ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಕರಣದ ವಿಚಾರಣೆಯಲ್ಲಿ ಭಾಗವಹಿಸಲಿದ್ದಾರೆ.
ಹಲವಾರು ಮಾಧ್ಯಮ ವರದಿಗಳ ಪ್ರಕಾರ, ದಂಪತಿ ಈ ಸಮಸ್ಯೆಯನ್ನು ನ್ಯಾಯಾಲಯದ ಹೊರಗೆ ಇತ್ಯರ್ಥ ಮಾಡಿಕೊಳ್ಳಲು ಮುಂದಾಗಿದ್ದಾರೆ. ಆದಾಗ್ಯೂ, ಈ ವಿಚಾರವಾಗಿ ಇಬ್ಬರೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಮೇ ತಿಂಗಳಲ್ಲಿ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಚೆನ್ನೈನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಆ ಸಮಯದಲ್ಲಿ ಅವರ ಪತ್ನಿ ಮತ್ತು ಮಕ್ಕಳು ಇರಲಿಲ್ಲ. ಇದು ಅವರ ನಡುವಿನ ಹಳಸಿದ ದಾಂಪತ್ಯದ ವದಂತಿಗಳಿಗೆ ಮತ್ತಷ್ಟು ಬಲ ತುಂಬಿತು.
Advertisement