

ನವದೆಹಲಿ: ಫುಟ್ ಪಾತ್ ನಲ್ಲಿ ತನ್ನ ಪೋಷಕರೊಂದಿಗೆ ಮಲಗಿದ್ದ ಪುಟ್ಟ ಮಗುವನ್ನು ಅಪಹರಿಸಿದ್ದ ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಂದು ಹಾಕಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಹೌದು.. ಸೋಮವಾರ ರಾತ್ರಿ ದಕ್ಷಿಣ ದೆಹಲಿಯ ಪಾದಚಾರಿ ಮಾರ್ಗದಲ್ಲಿ ಈ ಘಟನೆ ನಡೆದಿದ್ದು, 10 ವರ್ಷದ ಬಾಲಕಿ ತನ್ನ ತಂದೆ-ತಾಯಿ ಹಾಗೂ ಮೂವರು ಸಹೋದರ-ಸಹೋದರಿಯರೊಂದಿಗೆ ಮಲಗಿದ್ದಳು. ಈ ಸಂದರ್ಭದಲ್ಲಿ ಅದೇ ಮಾರ್ಗದಲ್ಲಿ ಪ್ರಯಾಣಿಕರಿಗಾಗಿ ಕಾಯುತ್ತಿದ್ದ ಆ್ಯಪ್ ಆಧಾರಿತ ಟ್ಯಾಕ್ಸಿ ಚಾಲಕ ಕುಡಿದ ಮತ್ತಿನಲ್ಲಿ ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾನೆ.
ದುಷ್ಕರ್ಮಿ ಮಗುವನ್ನು ಕಾರಿನೊಳಗೆ ಎಳೆದೊಯ್ಯುತ್ತಲೇ ಮಗು "ಅಪ್ಪಾ, ನನ್ನನ್ನು ಕಾಪಾಡಿ..." ಎಂದು ಕೂಗಿಕೊಂಡಿದೆ. ಈ ವೇಳೆ ಮಗುವಿನ ತಂದೆ ಕಾರಿನ ಹಿಂದೆ ಓಡಿದರೂ ಆದ ವೇಗವಾಗಿ ಕಾರುಚಲಾಯಿಸಿಕೊಂಡು ಪರಾರಿಯಾಗಿದ್ದಾನೆ.
ಕೂಡಲೇ ತಂದೆ ಪೊಲೀಸರನ್ನು ಸಂಪರ್ಕಿಸಿ ನಡೆದ ವಿಚಾರವನ್ನು ತಿಳಿಸಿದ್ದಾರೆ. ಆದರೆ ಬಳಿಕ ಪೊಲೀಸರು ಸುಮಾರು 4 ಗಂಟೆ ಕಾರ್ಯಾಚರಣೆ ಸಮೀಪದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಬಳಿಕ ಸುಮಾರು ನಾಲ್ಕು ಗಂಟೆಗಳ ಕಾಲ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಹಾಗೂ ವಾಹನದ ಚಲನವಲನ ಪತ್ತೆ ಹಚ್ಚುವ ಕಾರ್ಯಾಚರಣೆ ಆರಂಭವಾಯಿತು.
ಆರೋಪಿ ಬಂಧನವೇ ರೋಚಕ
ಸಿಸಿಟಿವಿ ದೃಶ್ಯಗಳಲ್ಲಿ ವಾಹನ ಕಾಣಿಸಿಕೊಂಡಿದ್ದರೂ, ಅದರ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಗೋಚರಿಸಿರಲಿಲ್ಲ. ನಂತರ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಬಿಳಿ ಬಣ್ಣದ ಹ್ಯಾಚ್ಬ್ಯಾಕ್ ಕಾರು ಸುಮಾರು ಒಂದು ಗಂಟೆ ಕಾಲ ಅದೇ ಸ್ಥಳದಲ್ಲಿ ನಿಂತಿದ್ದದ್ದು ಪತ್ತೆಯಾಯಿತು.
ಕಾರು ಬೆಳಿಗ್ಗೆ ಸುಮಾರು 4 ಗಂಟೆಗೆ ಅಲ್ಲಿಗೆ ಬಂದಿದ್ದು, ಸುಮಾರು 5 ಗಂಟೆಗೆ ಬಾಲಕಿಯನ್ನು ಅಪಹರಿಸಲಾಗಿತ್ತು. ಪೊಲೀಸರು ಆ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೈಡ್-ಹೇಲಿಂಗ್ ಆ್ಯಪ್ಗಳಿಂದ ಸಂಬಂಧಿತ ಪ್ರಯಾಣದ ವಿವರಗಳನ್ನು ಕೋರಿದರು. ಜೊತೆಗೆ ಮಾರ್ಗದುದ್ದಕ್ಕೂ ಇರುವ ಇತರ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ವಾಹನವನ್ನು ಗುರುತಿಸಿದರು.
ಜಿಪಿಎಸ್ ಮಾಹಿತಿ ಮತ್ತು ಆರೋಪಿಯ ಮೊಬೈಲ್ ಫೋನ್ ಸ್ಥಳ ಮಾಹಿತಿ ಆಧರಿಸಿ ಪಶ್ಚಿಮ ದೆಹಲಿಯ ವಿಕಾಸ್ಪುರಿ ಪ್ರದೇಶದಲ್ಲಿ ವಾಹನವನ್ನು ಪತ್ತೆ ಹಚ್ಚಲಾಯಿತು.
ಕಾಡಿನೊಳಗೆ ಅತ್ಯಾಚಾರ, ಕತ್ತು ಬಿಗಿದು ಹತ್ಯೆ
ಶಂಕಿತ ಕಾರು ಚಾಲಕನ ಬಬ್ಲು ಎಂಬಾತನ್ನು ವಶಕ್ಕೆ ಪಡೆದು ಪೊಲೀಸ್ ಭಾಷೆಯಲ್ಲಿ ವಿಚಾರಿಸಿದಾಗ ಆತ ನಡೆದದ್ದೆಲ್ಲವನ್ನೂ ಒಪ್ಪಿಕೊಂಡಿದ್ದಾರೆ. ವಿಚಾರಣೆ ವೇಳೆ ಆರೋಪಿ ಬಬ್ಲು ಬಾಲಕಿಯ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಹರಣದ ಬಳಿಕ ಬಾಲಕಿಯನ್ನು ಸುಮಾರು 20 ಕಿಲೋಮೀಟರ್ ದೂರದ ಗುರುಗ್ರಾಮ-ಫರೀದಾಬಾದ್ ರಸ್ತೆಯ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಕಾರನ್ನು ನಿಲ್ಲಿಸಿ ಬಾಲಕಿಯನ್ನು ಕಾಡಿನೊಳಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ, ಬಳಿಕ ಸ್ಕಾರ್ಫ್ ಬಳಸಿ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ನಂತರ ಮೃತದೇಹವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.
ಕೊಲೆ ಬಳಿಕವೂ ಸಾಮಾನ್ಯ ಜೀವನ
ಮೂಲತಃ ಬಿಹಾರ ಮೂಲದ ಬಬ್ಲು, ಈ ಭೀಕರ ಕೃತ್ಯದ ಬಳಿಕವೂ ಎಂದಿನಂತೆ ತನ್ನ ಕೆಲಸ ಮುಂದುವರಿಸಿದ್ದಾನೆ. ಬಾಲಕಿಯ ಹತ್ಯೆಯ ನಂತರವೂ ಗುರುಗ್ರಾಮದಿಂದ ಪಶ್ಚಿಮ ದೆಹಲಿಯ ವಿಕಾಸ್ಪುರಿಗೆ ಒಬ್ಬ ಪ್ರಯಾಣಿಕನನ್ನು ಕರೆದೊಯ್ದಿದ್ದಾನೆ.
"ಅಪರಾಧ ಎಸಗಿದ ಬಳಿಕವೂ ಆತ ಸಾಮಾನ್ಯವಾಗಿ ವರ್ತಿಸುತ್ತಿದ್ದ. ತಾನು ಇಂತಹ ಭೀಕರ ಕೃತ್ಯ ಎಸಗಿದ್ದೇನೆ ಎನ್ನುವ ಯಾವುದೇ ಆತಂಕ ಅಥವಾ ಪಶ್ಚಾತ್ತಾಪ ಆತನಲ್ಲಿ ಕಂಡುಬಂದಿಲ್ಲ," ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸರ ಪ್ರಕಾರ, ಬಿಹಾರದಲ್ಲಿ ಈಗಾಗಲೇ ಹಲ್ಲೆ ಮತ್ತು ಗಲಾಟೆಗೆ ಸಂಬಂಧಿಸಿದ ಐದು ಪ್ರಕರಣಗಳನ್ನು ಎದುರಿಸುತ್ತಿರುವ ಬಬ್ಲುವನ್ನು ಕೇವಲ ನಾಲ್ಕು ಗಂಟೆಗಳಲ್ಲೇ ಬಂಧಿಸಲಾಗಿದೆ. ಆತನಿಗೆ ಬಿಹಾರದಲ್ಲಿ ಪತ್ನಿ ಮತ್ತು ಮಕ್ಕಳಿದ್ದಾರೆ ಎಂದು ತಿಳಿಸಿದ್ದಾರೆ.
ತಪ್ಪಿಸಿಕೊಳ್ಳಲು ಯತ್ನ, ಎನ್ಕೌಂಟರ್ನಲ್ಲಿ ಆರೋಪಿಗೆ ಗಾಯ
ಮಂಗಳವಾರ ಆರೋಪಿಯನ್ನು ಘಟನೆ ನಡೆದ ಸ್ಥಳಕ್ಕೆ ಕರೆದೊಯ್ಯುವಾಗ, ಆತ ಪೊಲೀಸ್ ವಶದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ನಡೆದ ಎನ್ಕೌಂಟರ್ನಲ್ಲಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದು, ಆತ ಗಾಯಗೊಂಡಿದ್ದಾನೆ. ಅಪರಾಧ ಹಿನ್ನೆಲೆ ಹೊಂದಿದ್ದ ವ್ಯಕ್ತಿಯನ್ನು ಹೇಗೆ ಉದ್ಯೋಗಕ್ಕೆ ನೇಮಿಸಲಾಯಿತು ಎಂಬ ಕುರಿತು ಆ್ಯಪ್ ಆಧಾರಿತ ಟ್ಯಾಕ್ಸಿ ಸೇವಾ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
Advertisement