X ಖಾತೆ ನಿರ್ಬಂಧ ವಿವಾದ: ನಮ್ಮನ್ನು ಭಯೋತ್ಪಾದಕರು ಎನ್ನುತ್ತೀರಾ? ನಾಚಿಕೆಯಾಗುವುದಿಲ್ಲವೇ ನಿಮಗೆ?; ಕೇಂದ್ರದ ವಿರುದ್ಧ Cockroach Janta Party ಕಿಡಿ..!

ಸಂಘಟನೆಯ X ಖಾತೆಯನ್ನು ಏಕೆ ನಿರ್ಬಂಧಿಸಲಾಗಿದೆ ಎಂಬ ಬಗ್ಗೆ ಅಧಿಕಾರಿಗಳು ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ಆರೋಪಿಸಿದರು. ಖಾತೆ ನಿರ್ಬಂಧದ ಆದೇಶವನ್ನು ಕೇಳಿದಾಗ, ಅದು “ಗೌಪ್ಯ” ಎಂದು ಮಾತ್ರ ಹೇಳಿದರು.
Cockroach Janta Party (CJP) founder Abhijeet Dipke
ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ
Updated on

ನವದೆಹಲಿ: ಸಾಮಾಜಿಕ ಜಾಲತಾಣ X ಖಾತೆ ನಿರ್ಬಂಧ ಮತ್ತು ‘ಭಯೋತ್ಪಾದಕರ ಬಿ-ಟೀಮ್’ ಎಂಬ ಕೇಂದ್ರ ಸರ್ಕಾರದ ಆರೋಪದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಕ್ರೋಚ್ ಜನತಾ ಪಾರ್ಟಿ, ನಾವು ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ, ಮತಗಳಿಗಾಗಿ ಅಲ್ಲ. ತೆರಿಗೆ ಪಾವತಿಸುವ ನಾಗರಿಕರನ್ನು ಭಯೋತ್ಪಾದಕರು ಎಂದು ಕರೆಯಲು ನಿಮಗೆ ನಾಚಿಕೆಯಾಗುವುದಿಲ್ಲವೇ?” ಎಂದು ಕಿಡಿಕಾರಿದೆ.

ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ನಡೆಸುತ್ತಿರುವ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದ್ದು, ಇದೇ ವೇಳೆ ಸಾಮಾಜಿಕ ಜಾಲತಾಣ X ಖಾತೆ ನಿರ್ಬಂಧಕ್ಕೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಸಮಿತಿಯ ಮುಂದೆ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ವಿಚಾರಣೆಗೆ ಹಾಜರಾಗಿದ್ದರು.

ಬಳಿಕ ಮಾತನಾಡಿದ ಅವರು, ತಮ್ಮ ಸಂಘಟನೆಯ X ಖಾತೆಯನ್ನು ಏಕೆ ನಿರ್ಬಂಧಿಸಲಾಗಿದೆ ಎಂಬ ಬಗ್ಗೆ ಅಧಿಕಾರಿಗಳು ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ಆರೋಪಿಸಿದರು. ಖಾತೆ ನಿರ್ಬಂಧದ ಆದೇಶವನ್ನು ಕೇಳಿದಾಗ, ಅದು “ಗೌಪ್ಯ” ಎಂದು ಮಾತ್ರ ಹೇಳಿದರು ಎಂದು ದೂರಿದರು.

“ಎಲ್ಲವೂ ಗೌಪ್ಯ ಎನ್ನುತ್ತೀರಲ್ಲ, ಹಾಗಿದ್ದರೆ NEET ಪ್ರಶ್ನೆಪತ್ರಿಕೆಯನ್ನು ಕೂಡ ಗೌಪ್ಯವಾಗಿಟ್ಟಿರಬೇಕಿತ್ತು. ಅದು ಹೇಗೆ ಸೋರಿಕೆಯಾಯಿತು? ಹಾಗಾಗಿದ್ದರೆ ವಿದ್ಯಾರ್ಥಿಗಳ ಆತ್ಮಹತ್ಯೆಗಳು ನಡೆಯುತ್ತಿರಲಿಲ್ಲ,” ಎಂದು ಕಿಡಿಕಾರಿದರು.

ಇದೇ ವೇಳೆ ಸರ್ಕಾರ ತಮ್ಮ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, “ನಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನು ಪಾಕಿಸ್ತಾನದಲ್ಲಿರುವ ಕೆಲವರು ಅನುಸರಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದರು. ಅದನ್ನೇ ಕಾರಣವನ್ನಾಗಿ ಮಾಡಿ ನಮ್ಮನ್ನು ಗುರಿಯಾಗಿಸಲಾಗುತ್ತಿದೆ” ಎಂದು ಹೇಳಿದರು.

ಇದಕ್ಕೂ ಒಂದು ದಿನ ಮೊದಲು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಸಿಜೆಪಿಯನ್ನು “ಭಯೋತ್ಪಾದಕರ ಬಿ-ಟೀಮ್” ಎಂದು ಕರೆದಿದ್ದರು. ಈ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ನೀಡಿರುವ ದೀಪ್ಕೆ, “ನಾವು ಮತ ಕೇಳುತ್ತಿದ್ದೇವೆಯೇ? ನಾವು ನ್ಯಾಯ ಕೇಳುತ್ತಿದ್ದೇವೆ. ನಾವು ತೆರಿಗೆದಾರರು, ನಮ್ಮ ಪೋಷಕರೂ ತೆರಿಗೆದಾರರು. ಹಾಗಿದ್ದರೂ ನಮ್ಮನ್ನು ಭಯೋತ್ಪಾದಕರು ಎಂದು ಕರೆಯುತ್ತೀರಾ? ನಿಮಗೆ ನಾಚಿಕೆಯಾಗುವುದಿಲ್ಲವೇ?” ಎಂದು ಕಿಡಿಕಾರಿದರು.

Cockroach Janta Party (CJP) founder Abhijeet Dipke
ಹೇಡಿತನದ ಕೃತ್ಯ: ಜೈಪುರದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ Abhijeet Dipkeಗೆ ಕಪಾಳ ಮೋಕ್ಷ, ಹಲ್ಲೆ! Video

ಮುಂದುವರಿದು, “ರೈತರನ್ನು ಭಯೋತ್ಪಾದಕರು ಎಂದಿರಿ, ವೈದ್ಯರನ್ನೂ ಭಯೋತ್ಪಾದಕರು ಎಂದಿರಿ. ಈಗ ಉಳಿದವರು ಯಾರು?” ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇದೇ ವೇಳೆ ಪ್ರಧಾನಮಂತ್ರಿ ನರಂದ್ರ ಮೋದಿ ಅವರನ್ನು ಟೀಕಿಸಿದ ದೀಪ್ಕೆ, “ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಿದ್ದೇನೆ ಎಂದು ಹೇಳಿಕೊಳ್ಳುವ ಪ್ರಧಾನಿಗೆ ಪ್ರಶ್ನೆಪತ್ರಿಕೆ ಸೋರಿಕೆಗಳನ್ನು ತಡೆಯಲು ಸಾಧ್ಯವಾಗುವುದಿಲ್ಲವೇ?” ಎಂದು ಪ್ರಶ್ನಿಸಿದರು.

ನೀಟ್ ಹಾಗೂ ಇತರ ಪರೀಕ್ಷೆಗಳಲ್ಲಿನ ಅಕ್ರಮಗಳಿಂದ ಉಂಟಾದ ಪರಿಣಾಮಗಳಿಗೆ ಶಿಕ್ಷಣ ಸಚಿವರೇ ಹೊಣೆ ಎಂದು ಆರೋಪಿಸಿದ ಅವರು, “ವಿದ್ಯಾರ್ಥಿಗಳ ಆತ್ಮಹತ್ಯೆಗಳಿಗೆ ಯಾರು ಹೊಣೆ? ಧರ್ಮೇಂದ್ರ ಪ್ರಧಾನ್ ಅವರೇ ಹೊಣೆ” ಎಂದು ಹೇಳಿದರು.

ಇದೇ ವೇಳೆ, ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ದೀಪ್ಕೆ, “ರಾಜಕೀಯ ಪಕ್ಷಗಳು ಅವರಿಗೆ ಬೇಕಾದುದನ್ನು ಮಾಡಲಿ. ನಾವು ಇಲ್ಲಿ ಮತಗಳಿಗಾಗಿ ಬಂದಿಲ್ಲ, ರಾಜಕೀಯ ರ್ಯಾಲಿ ನಡೆಸುತ್ತಿಲ್ಲ. ನಾವು ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ” ಎಂದು ಸ್ಪಷ್ಟಪಡಿಸಿದರು.

ಸರ್ಕಾರದೊಂದಿಗೆ ಮಾತುಕತೆಗೆ ಸಿದ್ಧವಿದ್ದೇವೆ, ಆದರೆ, ಅದಕ್ಕೂ ಮುನ್ನ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬ ಬೇಡಿಕೆಯನ್ನು ಪುನರುಚ್ಚರಿಸಿದ ದೀಪ್ಕೆ, “ಇಲ್ಲಿಯವರೆಗೆ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ. ಬದಲಿಗೆ ನಮ್ಮನ್ನು ಭಯೋತ್ಪಾದಕರು ಎಂದು ಕರೆಯುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.

ಮೇ 16ರಂದು ಆರಂಭವಾದ ಸಿಜೆಪಿ, ನಿರುದ್ಯೋಗಿ ಯುವಕರ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಹೇಳಿಕೆ ವಿವಾದಕ್ಕೆ ಕಾರಣವಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಗಮನ ಸೆಳೆದಿತ್ತು.

ಮೇ 21ರಂದು ಸಿಜೆಪಿಯ ಮೂಲ X ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿತ್ತು. ನಂತರ ‘Cockroach is Back’ ಹೆಸರಿನ ಹೊಸ ಖಾತೆಯ ಮೂಲಕ ಸಂಘಟನೆ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com