

ನವದೆಹಲಿ: 20 ಮಕ್ಕಳ ಜೀವ ಹೋದರೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸಂದರ್ಶನಗಳನ್ನು ನೀಡುತ್ತಾ ತಮ್ಮ ಕುರ್ಚಿಗೆ ಅಂಟಿಕೊಂಡು ಕೂತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಹರಿಹಾಯ್ದಿದ್ದಾರೆ.
ನೀಟ್ ಸಂಬಂಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ‘ಉಗ್ರರು’ ಎಂದ ಸಚಿವ ಪ್ರಧಾನ್ ವಿರುದ್ಧ ಖರ್ಗೆ ಹರಿಹಾಯ್ದಿದ್ದಾರೆ. ‘90 ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ.
ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ. 20 ಮಕ್ಕಳು ಜೀವ ಕಳೆದುಕೊಂಡಿದ್ದಾರೆ. ಇತ್ತ ಮೋದಿ ಸರ್ಕಾರದ ಶಿಕ್ಷಣ ಸಚಿವ ಪ್ರಧಾನ್, ತಮ್ಮ ಕುರ್ಚಿಗೆ ಅಂಟಿಕೊಂಡು ಸಂದರ್ಶನ ನೀಡುತ್ತಿದ್ದಾರೆ. ವಿದ್ಯಾರ್ಥಿಗಳ ಕೂಗನ್ನು ಉಗ್ರರಿಗೆ ಹೋಲಿಸುತ್ತಿದ್ದಾರೆ ಎಂದಿದ್ದಾರೆ.
ಸರಕಾರದ ಟೀಕಾಕಾರರು ಹಾಗೂ ಪ್ರತಿಭಟನಾಕಾರರನ್ನು ಬಿಜೆಪಿ ಸರಕಾರ ನಿಯಮಿತವಾಗಿ ದೇಶದ್ರೋಹಿಗಳು ಎಂದು ಕರೆಯುತ್ತದೆ ಎಂದು ಆರೋಪಿಸಿರುವ ಮಲ್ಲಿಕಾರ್ಜುನ ಖರ್ಗೆ, ಈ ಹಿಂದೆ ರೈತರು ಪ್ರತಿಭಟನೆ ಮಾಡಿದಾಗ, ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಭಟನಾ ನಿರತ ರೈತರನ್ನು ಆಂದೋಲನ ಜೀವಿಗಳು ಹಾಗೂ ಪರಾವಲಂಬಿಗಳು ಎಂದು ಛೇಡಿಸಿದ್ದರು ಎಂದು ಉಲ್ಲೇಖಿಸಿದ್ದಾರೆ.