ThinkEdu 2026: ಚೆನ್ನೈನಲ್ಲಿಂದು ಸಮಾವೇಶ ಆರಂಭ, 'ಆತ್ಮನಿರ್ಭರ ಭಾರತದ ಕನಸಿಗೆ ಶಿಕ್ಷಣವೇ ದಿಕ್ಕು' ಕುರಿತು ಗಂಭೀರ ಚರ್ಚೆ

ತಮಿಳುನಾಡು ರಾಜ್ಯಪಾಲರಾದ ಶ್ರೀ ಆರ್. ಎನ್. ರವಿ ಅವರು ದೀಪ ಬೆಳಗಿಸುವ ಮೂಲಕ ಈ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ.
File photo
ಸಂಗ್ರಹ ಚಿತ್ರ
Updated on

ಚೆನ್ನೈ: ದೇಶದ ಶೈಕ್ಷಣಿಕ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ವೇದಿಕೆ 'ಥಿಂಕ್ ಎಜುಕೇಶನ್' (ThinkEdu) 2026ರ ಆವೃತ್ತಿಗೆ ಸೋಮವಾರ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಅದ್ಧೂರಿ ಚಾಲನೆ ದೊರೆಯಲಿದೆ.

'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ಸಮೂಹವು ನಗರದ ಐಟಿಸಿ ಗ್ರ್ಯಾಂಡ್ ಚೋಲಾ ಹೋಟೆಲ್‌ನಲ್ಲಿ ಎರಡು ದಿನಗಳ ಬೃಹತ್ ಸಮಾವೇಶವನ್ನು ಆಯೋಜಿಸಿದೆ.

ತಮಿಳುನಾಡು ರಾಜ್ಯಪಾಲರಾದ ಶ್ರೀ ಆರ್. ಎನ್. ರವಿ ಅವರು ದೀಪ ಬೆಳಗಿಸುವ ಮೂಲಕ ಈ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ.

ಈ ಬಾರಿಯ ಸಮಾವೇಶವು "ಆತ್ಮನಿರ್ಭರ್ ಭಾರತ್ 2047 ಗಾಗಿ ಶಿಕ್ಷಣ" ಎಂಬ ಆಶಯದೊಂದಿಗೆ ನಡೆಯುತ್ತಿದ್ದು, ಮುಂದಿನ ಎರಡು ದಶಕಗಳಲ್ಲಿ ಭಾರತದ ಶಿಕ್ಷಣ ವ್ಯವಸ್ಥೆ ಹೇಗಿರಬೇಕೆಂಬ ಬಗ್ಗೆ ಚರ್ಚೆ ನಡೆಯಲಿದೆ.

ಆತ್ಮನಿರ್ಭರತೆ ಎಂದರೆ ಕೇವಲ ಆರ್ಥಿಕ ಸ್ವಾವಲಂಬನೆ ಅಲ್ಲ; ಅದು ಜ್ಞಾನ, ತಂತ್ರಜ್ಞಾನ, ಮೌಲ್ಯ ಮತ್ತು ಸಂಸ್ಕೃತಿಯ ಸಮನ್ವಯ. ತರಗತಿಗಳಲ್ಲಿ ಮೂಡುವ ಕುತೂಹಲವೇ ನಾಳೆಯ ನವೀನ ಆವಿಷ್ಕಾರಗಳಿಗೆ ಬೀಜವಾಗಲಿದೆ. ಈ ಹಿನ್ನೆಲೆಯಲ್ಲಿ ಥಿಂಕ್‌ಎಡು 2026 ಕೇವಲ ಚರ್ಚಾ ವೇದಿಕೆ ಮಾತ್ರವಲ್ಲ; ಅದು ಭವಿಷ್ಯದ ಭಾರತ ರೂಪುಗೊಳ್ಳುವ ಬೌದ್ಧಿಕ ಕಾರ್ಯಾಗಾರವಾಗಿದೆ.

ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ಉದ್ಘಾಟಿಸಲಿರುವ ಈ ಸಮಾವೇಶದಲ್ಲಿ ವಿವಿಧ ರಾಜ್ಯಗಳ ರಾಜ್ಯಪಾಲರು, ಸಂಸದರು ಹಾಗೂ ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ.

File photo
ThinkEdu Conclave 2025: ಇಂದಿನ ಕಾಲದಲ್ಲಿ 3 ಭಾಷೆ ಕಲಿಕೆ ಅನಿವಾರ್ಯ: RSS ಜಂಟಿ ಮಹಾ ಕಾರ್ಯದರ್ಶಿ

ಶಶಿ ತರೂರ್, ಸ್ಮೃತಿ ಜುಬಿನ್ ಇರಾನಿ, ಸಚಿನ್ ಪೈಲಟ್ ಮುಂತಾದವರು ಯುವ ರಾಜಕೀಯ, ಕ್ಯಾಂಪಸ್ ಚರ್ಚೆಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.

ಕೃತಕ ಬುದ್ಧಿಮತ್ತೆ (AI), ಸೆಮಿಕಂಡಕ್ಟರ್, ಡಿಜಿಟಲ್ ಆರ್ಥಿಕತೆ – ಇವೆಲ್ಲವೂ ಶಿಕ್ಷಣದ ಪಠ್ಯಕ್ರಮವನ್ನೇ ಮರುರಚಿಸುತ್ತಿವೆ. ವಿ.ಕಾಮಕೋಟಿ ಹಾಗೂ ಆರ್.ವೈದ್ಯನಾಥನ್ ಸೇರಿ ಇತರೆ ಮುಖಂಡರು ಭಾರತದ ತಂತ್ರಜ್ಞಾನ ಪರಿಸರ ವ್ಯವಸ್ಥೆಯ ಬಗ್ಗೆ ಚರ್ಚಿಸಲಿದ್ದಾರೆ. AI ಯುಗದಲ್ಲಿ ವಿದ್ಯಾರ್ಥಿಯ ಪಾತ್ರವೇನು? ವಿಶ್ವವಿದ್ಯಾಲಯಗಳ ಜವಾಬ್ದಾರಿ ಎಷ್ಟು? ಎಂಬ ಪ್ರಶ್ನೆಗಳ ಕುರಿತು ಚರ್ಚೆಗಳು ನಡೆಯಲಿವೆ.

ಶಿಕ್ಷಣ ಕೇವಲ ಉದ್ಯೋಗ ಕೌಶಲ್ಯಕ್ಕೆ ಸೀಮಿತವಾಗಬಾರದು. ಅದು ವ್ಯಕ್ತಿತ್ವ ವಿಕಾಸ, ಮೌಲ್ಯಬೋಧನೆ ಮತ್ತು ಸಂಸ್ಕೃತಿಯ ಅರಿವು ಮೂಡಿಸಬೇಕು. ಸಂಗೀತ, ಕಲೆ, ಸಂಸ್ಕೃತಿ ಮತ್ತು ಆಧ್ಯಾತ್ಮದ ಕುರಿತ ಚರ್ಚೆಗಳು ಶಿಕ್ಷಣದ ಸಮಗ್ರತೆಯನ್ನು ಈ ಸಮಾವೇಶ ಸ್ಮರಿಸುತ್ತದೆ.

Tata Consultancy Services ಮತ್ತು Tata Group ಬೆಂಬಲದೊಂದಿಗೆ ನಡೆಯುತ್ತಿರುವ ಈ ಮಹಾಸಮಾವೇಶವು ನೀತಿ ನಿರ್ಧಾರಕರು, ಶಿಕ್ಷಣತಜ್ಞರು, ತಂತ್ರಜ್ಞರು ಮತ್ತು ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸುತ್ತಿದೆ.

14 ವರ್ಷಗಳ ಈ ಪಯಣದಲ್ಲಿ 500ಕ್ಕೂ ಹೆಚ್ಚು ವಕ್ತಾರರು, ನೂರಾರು ಅಧಿವೇಶನಗಳ ಮೂಲಕ ಥಿಂಕ್‌ಎಡು ಆತ್ಮನಿರ್ಭರ ಭಾರತದ ಚಿಂತನೆಗೆ ವೇದಿಕೆ ಒದಗಿಸಿದೆ.

2026ರ ಆವೃತ್ತಿ ಶಿಕ್ಷಣವನ್ನು ರಾಷ್ಟ್ರದ ಅಭಿವೃದ್ಧಿಯ ಮೂಲಸ್ತಂಭವೆಂದು ಮರುಸಾಬೀತುಪಡಿಸಲು ಸಜ್ಜಾಗಿದೆ. ಉದ್ಯೋಗಾಧಾರಿತ ಶಿಕ್ಷಣ, ಕೃತಕ ಬುದ್ಧಿಮತ್ತೆ (AI) ಪ್ರಭಾವ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮಕಾರಿ ಜಾರಿ ಕುರಿತು ಪ್ರತ್ಯೇಕ ಗೋಷ್ಠಿಗಳು ಇಂದು ಮತ್ತು ನಾಳೆ ನಡೆಯಲಿವೆ.

ಭಾರತವನ್ನು ಜಾಗತಿಕ ಶಿಕ್ಷಣದ ಹಬ್ ಆಗಿ ರೂಪಿಸುವ ನಿಟ್ಟಿನಲ್ಲಿ ಈ ಸಮಾವೇಶವು ಒಂದು ಪ್ರಮುಖ ಮೈಲಿಗಲ್ಲಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com