

ರಾಂಚಿ: ಕಾರು ಮತ್ತು ಬೈಕ್ ಗಳ ಬಗ್ಗೆ ವಿಪರೀತ ಕ್ರೇಝ್ ಹೊಂದಿರುವ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಸಂಚಾರ ನಿಯಮ ಉಲ್ಲಂಘನೆಗಾಗಿ ದಂಡ ವಿಧಸಲಾಗಿದೆ.
ವಸತಿ ನಿವೇಶನವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇರೆಗೆ ಜಾರ್ಖಂಡ್ ರಾಜ್ಯ ವಸತಿ ಮಂಡಳಿಯು ರಾಂಚಿಯ ಹರ್ಮು ಪ್ರದೇಶದಲ್ಲಿರುವ ಧೋನಿ ಅವರ ಮನೆಗೆ ನೋಟಿಸ್ ನೀಡಿದ ಕೇವಲ ಒಂದು ವಾರದಲ್ಲೇ ಈ ಘಟನೆ ನಡೆದಿದೆ.
ರಾಂಚಿ ಸಂಚಾರ ಪೊಲೀಸರು ಧೋನಿಗೆ ಇ-ಚಲನ್ ನೀಡಿದ್ದು, ಅದರಲ್ಲಿ ಮಾರ್ಚ್ 1 ರಂದು ಧೋನಿಯ ಕಾರು ಗಂಟೆಗೆ 91 ಕಿ.ಮೀ ವೇಗದಲ್ಲಿ ಚಲಿಸಿದ್ದು, ಇದು ಅನುಮತಿಸಲಾದ 60 ಕಿ.ಮೀ. ವೇಗದ ಮಿತಿಯನ್ನು ಮೀರಿದೆ. ಅತಿ ವೇಗದ ಚಾಲನೆಗಾಗಿ 1,000 ರೂ. ದಂಡ ವಿಧಿಸಲಾಗಿದೆ ಎಂದು ತಿಳಿಸಲಾಗಿದೆ.
ಸ್ವಯಂಚಾಲಿತ ಸಂಚಾರ ಮೇಲ್ವಿಚಾರಣಾ ವ್ಯವಸ್ಥೆಯು ಕಾಂಕೆ ರಿಂಗ್ ರಸ್ತೆಯ ಬಿರ್ಸಾ ಕೃಷಿ ವಿಶ್ವವಿದ್ಯಾಲಯದ ಬಳಿ ಧೋನಿ ಅವರ ಐಷಾರಾಮಿ ಕಾರು ವೇಗದ ಮಿತಿಯನ್ನು ಮೀರಿರುವುದು ಕಂಡುಬಂದಿದೆ.
ಕಾನೂನು ಎಲ್ಲರಿಗೂ ಸಮಾನವಾಗಿದೆ, ಅದು ಸಾಮಾನ್ಯ ನಾಗರಿಕನಾಗಿರಲಿ ಅಥವಾ ಉನ್ನತ ವ್ಯಕ್ತಿಯಾಗಿರಲಿ ಎಂದು ಪೊಲೀಸರು ತಿಳಿಸಿದ್ದಾರೆ.
ಈಗ, ಈ ವಿಚಾರವಾಗಿ ಧೋನಿ ಅವರು ಸಾರ್ವಜನಿಕವಾಗಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇದು ನಗರದಲ್ಲಿ ತೀವ್ರ ಚರ್ಚೆಯ ವಿಷಯವಾಗಿದೆ.
ಕಳೆದ ವಾರ, ಧೋನಿ ಅವರ ಹೆಸರಿನಲ್ಲಿ ಹಂಚಿಕೆ ಮಾಡಲಾದ ವಸತಿ ನಿವೇಶನವನ್ನು ವಾಣಿಜ್ಯಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಜಾರ್ಖಂಡ್ ರಾಜ್ಯ ವಸತಿ ಮಂಡಳಿಯು ಅವರಿಗೆ ನೋಟಿಸ್ ನೀಡಿತ್ತು.
ರಾಂಚಿಯ ಹರ್ಮು ಪ್ರದೇಶದಲ್ಲಿರುವ ವಸತಿ ನಿವೇಶನದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿ ನೀಡುವ ಮೂಲಕ ಧೋನಿ ನಿವೇಶನ ಹಂಚಿಕೆ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಮಂಡಳಿ ಆರೋಪಿಸಿದೆ.
Advertisement