

ಮುಂಬೈ: ಪಶ್ಚಿಮ ಏಷ್ಯಾದಲ್ಲಿನ ಯುದ್ಧ, ಅದಕ್ಕೆ ಸಂಬಂಧಿಸಿದ ಬೆಳವಣಿಗೆಗಳನ್ನು ಗಮನಿಸಿದರೆ, ಭಾರತವು ಎಲ್ಲೋ ಕಳೆದು ಹೋಗಿದೆ. ಅಮೆರಿಕ ಮತ್ತು ಇಸ್ರೇಲ್ ದೇಶಗಳು ದಾದಾಗಿರಿ ನಡೆಸುತ್ತಿದ್ದರೆ, ಭಾರತದಂಥ ದೊಡ್ಡ ದೇಶವೊಂದು ಇವರ ಏಜೆಂಟ್ ರೀತಿ ವರ್ತಿಸುತ್ತಿದೆ ಎಂದು ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಿವಸೇನೆ (ಯಬಿಟಿ) ಮುಖವಾಣಿ ಸಾಮ್ನಾದ ತಮ್ಮ ಅಂಕಣ ‘ರೋಕ್ಟೋಕ್’ನಲ್ಲಿ ರಾವುತ್ ಅವರು ಯುದ್ಧ, ಅದಕ್ಕೆ ಭಾರತದ ಪ್ರತಿಕ್ರಿಯೆ ಸೇರಿ ಹಲವು ವಿಚಾರಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಿನ್ನೆಯವರೆಗೂ ತಮ್ಮ ಶೌರ್ಯದ ಬಗ್ಗೆ ಹೆಮ್ಮೆಪಡುತ್ತಿದ್ದ ಭಾರತದಂತಹ ದೊಡ್ಡ ದೇಶಗಳು ಈ ಗೂಂಡಾಗಳ ಏಜೆಂಟರಂತೆ ವರ್ತಿಸುತ್ತಿವೆ ಎಂದು ಹೇಳಿದರು.
ಯುದ್ಧ ನಿಲ್ಲಿಸಲು ಭಾರತವು ನೇತೃತ್ವ ವಹಿಸಿಕೊಳ್ಳಬೇಕಿತ್ತು. ಇದಾಗದೆ ಇದ್ದಿದ್ದರಿಂದ ಭಾರತದ ನಾಯಕತ್ವವು ಎಷ್ಟು ಟೊಳ್ಳಾಗಿದೆ ಎಂಬುದು ಜಗತ್ತಿನೆದುರು ಬಹಿರಂಗವಾದಂತಾಗಿದೆ. ಯುದ್ಧದಂಥ ಈ ಬಿಕ್ಕಟ್ಟಿನ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಮಾತನ್ನೂ ಆಡಲಿಲ್ಲ ಎಂದಿದ್ದಾರೆ.
ಇರಾನ್ ಅನ್ನು "ಜಿರಳೆ"ಯಂತೆ ಪುಡಿಪುಡಿ ಮಾಡಬಹುದು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಅಭಿಪ್ರಾಯಪಟ್ಟಿದೆ ಎಂದು ರಾವತ್ ಕಿಡಿ ಕಾರಿದರು. ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಅವರನ್ನು ಕೊಂದ ನಂತರ, ಯುದ್ಧವು ಮುಗಿಯುತ್ತದೆ ಎಂದು ಅವರು ಭಾವಿಸಿದ್ದರು , ಆದರೆ ಅದು ಆಗಲಿಲ್ಲ. ಅನೇಕ ಇರಾನಿನ ನಾಯಕರು, ಮಿಲಿಟರಿ ಸಿಬ್ಬಂದಿ ಕೊಲ್ಲಲ್ಪಟ್ಟರು. ಆದರೂ, ಇರಾನ್ ಇಸ್ರೇಲ್ ವಿರುದ್ಧ ಹೋರಾಡುತ್ತಿದೆ ಮತ್ತು ದಾಳಿ ಮಾಡುತ್ತಿದೆ ಎಂದು ರಾವತ್ ಹೇಳಿದರು.
Advertisement