

ನವದೆಹಲಿ: 'ಆಪರೇಷನ್ ಸಿಂಧೂರ್' ಕುರಿತ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದಕ್ಕೆ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ಕೈಬಿಡಲಾಗಿದೆ ಎಂದು ಹರಿಯಾಣ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಪ್ರೊಫೆಸರ್ ಮಹ್ಮದಾಬಾದ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹರಿಯಾಣ ಸರ್ಕಾರದ ಪರವಾಗಿ ಸುಪ್ರೀಂ ಕೋರ್ಟ್ ಗೆ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು, ಪ್ರೊಫೆಸರ್ ಮಹ್ಮದಾಬಾದ್ ವಿರುದ್ಧ ವಿಚಾರಣೆಗೆ ಅನುಮತಿ ನೀಡಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠಕ್ಕೆ ತಿಳಿಸಿದರು.
"ಒಂದು ಬಾರಿಯ ಉದಾರತೆಯನ್ನು ತೋರಿಸುತ್ತಾ, ನಾವು ಪ್ರಕರಣವನ್ನು ಮುಕ್ತಾಯಗೊಳಿಸಿದ್ದೇವೆ ಮತ್ತು ಅನುಮತಿ ನೀಡಲು ನಿರಾಕರಿಸಿದ್ದೇವೆ" ಎಂದು ರಾಜು ಅವರು ಸುಪ್ರೀಂ ಪೀಠಕ್ಕೆ ತಿಳಿಸಿದರು ಎಂದು ಪಿಟಿಐ ವರದಿ ಮಾಡಿದೆ.
ಸುಪ್ರೀಂ ಕೋರ್ಟ್, ರಾಜು ಅವರ ಹೇಳಿಕೆಯನ್ನು ದಾಖಲಿಸಿಕೊಂಡಿತು ಮತ್ತು ಸಂಬಂಧಿತ ವಿಚಾರಣಾ ನ್ಯಾಯಾಲಯದ ಮುಂದೆ ಬಾಕಿ ಇರುವ ವಿಚಾರಣೆಗಳು ಮುಕ್ತಾಯಗೊಳ್ಳುತ್ತವೆ ಎಂದು ತಿಳಿಸಿತು.
ಸುಪ್ರೀಂ ಕೋರ್ಟ್ ಈ ಹಿಂದೆ ರಾಜ್ಯ ಸರ್ಕಾರಕ್ಕೆ ಈ ವಿಷಯವನ್ನು ಮರುಪರಿಶೀಲಿಸುವಂತೆ ಮತ್ತು ಪ್ರೊಫೆಸರ್ ಮಹ್ಮದಾಬಾದ್ ವಿರುದ್ಧದ ವಿಚಾರಣೆಗೆ ಅನುಮತಿ ನಿರಾಕರಿಸುವ ಮೂಲಕ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಸೂಚಿಸಿತ್ತು. ಕಳೆದ ವರ್ಷ ಮೇ ತಿಂಗಳಲ್ಲಿ, ನ್ಯಾಯಾಲಯವು ಪ್ರಾಧ್ಯಾಪಕರಿಗೆ ಮಧ್ಯಂತರ ರಿಲೀಫ್ ನೀಡಿತ್ತು ಮತ್ತು ಮಹ್ಮದಾಬಾದ್ ಅವರು ಯಾವುದೇ ಅಪರಾಧ ಎಸಗಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ವಿಶೇಷ ತನಿಖಾ ತಂಡ (SIT) ರಚಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
'ಆಪರೇಷನ್ ಸಿಂಧೂರ್' ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಕರ್ನಲ್ ಸೋಫಿಯಾ ಖುರೇಷಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಲಿ ಖಾನ್ ಅವರು, ಭಾರತದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಬಗ್ಗೆ, ಗುಂಪು ಹತ್ಯೆ, ಬುಲ್ಡೋಜಿಂಗ್, ದ್ವೇಷ ಪ್ರಚಾರಕ್ಕೆ ಬಲಿಯಾದ ನಾಗರಿಕರನ್ನು ರಕ್ಷಿಸಲು ಇದೇ ಧ್ವನಿಯಿಂದ ಒತ್ತಾಯಿಸಬೇಕು ಎಂದು ಬರೆದುಕೊಂಡಿದ್ದರು. ಈ ಸಂಬಂಧ ಪ್ರೊಫೆಸರ್ ಮಹ್ಮದಾಬಾದ್ ವಿರುದ್ಧ ಎರಡು ಎಫ್ಐಆರ್ಗಳು ದಾಖಲಾಗಿದ್ದವು ಮತ್ತು ಕಳೆದ ವರ್ಷ ಮೇ ತಿಂಗಳಲ್ಲಿ ಹರಿಯಾಣ ಪೊಲೀಸರು ಅವರನ್ನು ಬಂಧಿಸಿದ್ದರು.
ಒಂದು ಹರಿಯಾಣ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೇಣು ಭಾಟಿಯಾ ಅವರ ದೂರಿನ ಆಧಾರದ ಮೇಲೆ ಮತ್ತು ಇನ್ನೊಂದು ಗ್ರಾಮದ ಸರಪಂಚ್ ಅವರ ದೂರಿನ ಆಧಾರದ ಮೇಲೆ ಎರಡು ಎಫ್ಐಆರ್ಗಳನ್ನು ಸೋನಿಪತ್ ಜಿಲ್ಲೆಯ ರಾಯ್ ಪೊಲೀಸರು ದಾಖಲಿಸಿದ್ದರು.
Advertisement