

ಕೊಲ್ಕೋತ್ತಾ: ಪಶ್ಚಿಮ ಬಂಗಾಳದ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸುತ್ತಿರುವ ಭಾರತೀಯ ಚುನಾವಣಾ ಆಯೋಗ (ECI), ಭಾನುವಾರ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ, ಉನ್ನತ ಆಡಳಿತ ಹುದ್ದೆಗಳಲ್ಲಿ ಪ್ರಮುಖ ಪುನರ್ರಚನೆಗೆ ಆದೇಶಿಸಿದೆ.
ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಸ್ವಲ್ಪ ಸಮಯದ ನಂತರ, ECI ರಾಜ್ಯದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳನ್ನು ಬದಲಾಯಿಸಲು ಆದೇಶಿಸಿದೆ.
ಪಶ್ಚಿಮ ಬಂಗಾಳದಲ್ಲಿ ಮುಂದಿನ ತಿಂಗಳೇ ಎರಡು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನವೇ ಚುನಾವಣಾ ಆಯೋಗವು ಹೊಸ ಮುಖ್ಯ ಕಾರ್ಯದರ್ಶಿಯಾಗಿ ದುಷ್ಯಂತ್ ನರಿಯಾಲ ಅವರನ್ನು ನೇಮಿಸುವಂತೆ ಆದೇಶಿಸಿದೆ. ಈವರೆಗೆ ರಾಜ್ಯ ಮುಖ್ಯ ಕಾರ್ಯದರ್ಶಿ ನಂದಿನಿ ಚಕ್ರವರ್ತಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಸಂದರ್ಭಗಳಲ್ಲಿ ಆಯೋಗದ ನಿರ್ದೇಶನಗಳನ್ನು ಪಾಲಿಸಿಲ್ಲ. ವಿಶೇಷವಾಗಿ ನಾಲ್ವರು ಚುನಾವಣಾ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸುವಲ್ಲಿ ವಿಳಂಬ ಮತ್ತು ಇತರ ಆಡಳಿತಾತ್ಮಕ ವಿಳಂಬಗಳನ್ನು ಮಾಡಿದ್ದಾರೆ ಎಂದು ಕಾರಣ ನೀಡಿ ಚುನಾವಣಾ ಆಯೋಗವು ಈ ಕ್ರಮವನ್ನು ಕೈಗೊಂಡಿದೆ.
ECI ಸಿಎಸ್ ನಂದಿನಿ ಚಕ್ರವರ್ತಿ ಅವರ ಬದಲಿಗೆ 1993 ರ ಬ್ಯಾಚ್ ಐಎಎಸ್ ಅಧಿಕಾರಿ ದುಷ್ಯಂತ್ ನರಿಯಾಲಾ ಅವರನ್ನು ನೇಮಿಸಿದೆ. ಜಗದೀಶ್ ಪ್ರಸಾದ್ ಮೀನಾ ಅವರ ಬದಲಿಗೆ ಸಂಘಮಿತ್ರ ಘೋಷ್ ಅವರನ್ನು ಹೊಸ ಎಚ್ಎಸ್ ಆಗಿ ನೇಮಿಸಲಾಗಿದೆ. ಘೋಷ್ 1997 ರ ಬ್ಯಾಚ್ ಐಎಎಸ್ ಅಧಿಕಾರಿ ಮತ್ತು ಬಂಗಾಳದ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ. ECI ಕಾರ್ಯದರ್ಶಿ ಸುರ್ಜೀತ್ ಕುಮಾರ್ ಮಿಶ್ರಾ ಭಾನುವಾರ ತಡರಾತ್ರಿ ಚಕ್ರವರ್ತಿ ಅವರಿಗೆ ಬರೆದ ಪತ್ರದಲ್ಲಿ ಬದಲಾವಣೆಗಳನ್ನು ನಿರ್ದೇಶಿಸಿದ್ದಾರೆ.
ಈ ಸಂಬಂಧ ಭಾನುವಾರ ರಾತ್ರಿಯೇ ರಾಜ್ಯ ಸರ್ಕಾರಕ್ಕೆ ಪತ್ರ ಕಳುಹಿಸಲಾಗಿದ್ದು, ಸಂಘಮಿತ್ರ ಘೋಷ್ ಅವರನ್ನು ಗೃಹ ಮತ್ತು ಗಿರಿ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸುವಂತೆ ಚುನಾವಣಾ ಪ್ರಾಧಿಕಾರ ನಿರ್ದೇಶಿಸಿದೆ. ಹಾಗೆಯೇ, ವರ್ಗಾವಣೆಗೊಂಡ ಅಧಿಕಾರಿಗಳನ್ನು ಚುನಾವಣೆಗಳು ಪೂರ್ಣಗೊಳ್ಳುವವರೆಗೆ ಯಾವುದೇ ಚುನಾವಣೆಗೆ ಸಂಬಂಧಿಸಿದ ಹುದ್ದೆಗಳಲ್ಲಿ ನಿಯೋಜಿಸಬಾರದು ಎಂದೂ ಒತ್ತಿ ಹೇಳಿದೆ.
ರಾಜ್ಯದಲ್ಲಿ ಏಪ್ರಿಲ್ 23 ಮತ್ತು 29ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ 4 ರಂದು ಮತ ಎಣಿಕೆ ನಡೆಯಲಿದೆ. ಈಗಾಗಲೇ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಮತ್ತು ಬೂತ್ ಮಟ್ಟದ ಅಧಿಕಾರಿಗಳಿಗೆ ಸಂಭಾವನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ತೃಣಮೂಲ ಕಾಂಗ್ರೆಸ್ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಇವೆಲ್ಲವುದರ ನಡುವೆ ಇದೀಗ ಮುಖ್ಯ ಕಾರ್ಯದರ್ಶಿ ಬದಲಾಯಿಸಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿದೆ.
ಚುನಾವಣಾ ಆಯೋಗವು “ಬಿಜೆಪಿಯ ಕೈಗೊಂಬೆಯಂತೆ” ವರ್ತಿಸುತ್ತಿದೆ ಎಂದು ಟೀಕಿಸಿದೆ. ಪಶ್ಚಿಮ ಬಂಗಾಳದ ಮೊದಲ ಮಹಿಳಾ ಮುಖ್ಯ ಕಾರ್ಯದರ್ಶಿ ನಂದಿನಿ ಚಕ್ರವರ್ತಿ. ಈ ವರ್ಷದ ಆರಂಭದಲ್ಲಷ್ಟೇ ನೇಮಕಗೊಂಡಿದ್ದಾರೆ. ಇದೀಗ ಅಲ್ಪಾವಧಿಯಲ್ಲಿಯೇ ಸ್ಥಾನದಿಂದ ತೆಗೆದುಹಾಕಿರುವುದು ಮಹಿಳಾ ಸಬಲೀಕರಣಕ್ಕೆ ವಿರುದ್ಧವಾದ ನಡೆ ಎಂದು ಟಿಎಂಸಿ ನಾಯಕರು ವಾದಿಸುತ್ತಿದ್ದಾರೆ. ಚುನಾವಣಾ ಸಮಯದಲ್ಲಿ ಮಹಿಳಾ ಅಧಿಕಾರಿಯನ್ನು ಗುರಿಯಾಗಿಸಿಕೊಂಡಿರುವುದು ಸರಿಯಲ್ಲ ಎಂದಿದ್ದಾರೆ.
1993ರ ಬ್ಯಾಚ್ನ ಪಶ್ಚಿಮ ಬಂಗಾಳ ಕೇಡರ್ನ ಐಎಎಸ್ ಅಧಿಕಾರಿ ದುಷ್ಯಂತ್ ನರಿಯಾಲ ದೀರ್ಘಕಾಲದಿಂದ ಪಶ್ಚಿಮ ಬಂಗಾಳ ಸರ್ಕಾರದ ವಿವಿಧ ಪ್ರಮುಖ ಇಲಾಖೆಗಳಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಆಡಳಿತಾತ್ಮಕವಾಗಿ ಅತ್ಯಂತ ಅನುಭವ ಹೊಂದಿರುವ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ.
ಈ ಹಿಂದೆ ಉತ್ತರ ಬಂಗಾಳ ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದರು. ಗೂರ್ಖಾಲ್ಯಾಂಡ್ ಪ್ರಾದೇಶಿಕ ಆಡಳಿತದ (GTA) ಪ್ರಧಾನ ಕಾರ್ಯದರ್ಶಿಯಾಗಿ ಹೆಚ್ಚುವರಿ ಜವಾಬ್ದಾರಿಯನ್ನು ಹೊತ್ತಿದ್ದರು.
ಹಾಗೆಯೇ ವಿಪತ್ತು ನಿರ್ವಹಣೆ, ನಾಗರಿಕ ರಕ್ಷಣೆ ಮತ್ತು ಶಾಲಾ ಶಿಕ್ಷಣ ಇಲಾಖೆಗಳಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಕೇಂದ್ರ ನಿಯೋಜನೆಯಲ್ಲೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಇದೀಗ ಚುನಾವಣೆಗೂ ಮುನ್ನ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.
Advertisement