

ಚೆನ್ನೈ: ಮುಂದಿನ ತಿಂಗಳು ವಿಧಾನಸಭಾ ಚುನಾವಣೆ ನಡೆಯಲಿರುವ ತಮಿಳುನಾಡಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಮಧ್ಯೆ ಎಐಎಡಿಎಂಕೆ ನಾಯಕರೊಬ್ಬರು ಎಂಕೆ ಸ್ಟಾಲಿನ್ ನೇತೃತ್ವದ ಸರ್ಕಾರದ ಪ್ರಚಾರವನ್ನು ಟೀಕಿಸುವ ಭರದಲ್ಲಿ ವಿವಾದವೊಂದನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.
ಡಿಎಂಕೆಯ ಮನೆ ಮನೆಯ ಭೇಟಿಯ ನಿಮ್ಮ ಕನಸನ್ನು ನಮಗೆ ತಿಳಿಸಿ (initiative) ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಬಗ್ಗೆ ವ್ಯಂಗ್ಯವಾಡಿರುವ ರಾಜ್ಯಸಭಾ ಸದಸ್ಯ ಷಣ್ಮುಗಂ, "ನನಗೆ ನಯನತಾರಾ ಬೇಕು, ನೀವು ಈಡೇರಿಸುವಿರಾ? ನಯನಾತಾರಾ ಮದುವೆಯಾಗಬೇಕು ಎಂಬ ಯಾರೊಬ್ಬರ ಕನಸನ್ನು ಎಂಕೆ ಸ್ಟಾಲಿನ್ ಈಡೇರಿಸುತ್ತಾರಾ? ಎಂದು ಕೇಳಿದ್ದಾರೆ.
ಡಿಎಂಕೆ ಆಡಳಿತದಡಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ವಿಲ್ಲುಪುರಂ ಜಿಲ್ಲೆಯಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡ ವೇಳೆ ಸಿವಿ ಷಣ್ಮುಗಂ ಈ ರೀತಿಯ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ.
ಷಣ್ಮುಗಂ ಅವರ ಈ ಮಾತು ಆಡಳಿತಾರೂಢ ಡಿಎಂಕೆಯಿಂದ ತೀವ್ರ ಟೀಕೆಗೆ ಗುರಿಯಾಗಿದೆ. ನಮ್ಮ ನೀತಿಗಳನ್ನು ಟೀಕಿಸಿ, ಆದರೆ ಮಹಿಳೆಯರನ್ನು ಅಗೌರವಿಸಬೇಡಿ. ನಯನತಾರಾ ಅವರನ್ನು ಅವಮಾನಿಸುವ ಮೂಲಕ ಅವರು ಎಲ್ಲಾ ಮಹಿಳೆಯರನ್ನು ಅವಮಾನಿಸಿದ್ದಾರೆ. ಇದು ಸುಸಂಸ್ಕೃತ ಸಮಾಜದಲ್ಲಿ ಸ್ವೀಕಾರಾರ್ಹವಲ್ಲ. ಇವರ ವಿರುದ್ಧ ಎಐಎಡಿಎಂಕೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಕ್ಷದ ವಕ್ತಾರ ಡಾ.ಸೈಯದ್ ಹಫೀಜುಲ್ಲಾ ಒತ್ತಾಯಿಸಿದ್ದಾರೆ.
ಎಐಎಡಿಎಂಕೆ ಇದುವರೆಗೆ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ ಇಂತಹ ಹೇಳಿಕೆಗಳನ್ನು ಸಮರ್ಥಿಸುವುದು ವಕ್ತಾರರ ಕೆಲಸವಲ್ಲ ಎಂದು AIADMK ವಕ್ತಾರರು ಹೇಳಿದ್ದಾರೆ. ಮಹಿಳೆಯರ ವಿಚಾರದಲ್ಲಿ ಷಣ್ಮುಗಂ ವಿವಾದಕ್ಕೆ ಒಳಗಾಗಿರುವುದು ಇದೇ ಮೊದಲಲ್ಲ. ಈ ಹಿಂದೆ ಚುನಾವಣಾ ಭರವಸೆಗಳ ಭಾಗವಾಗಿ 'ಉಚಿತ ಹೆಂಡತಿ' ಯನ್ನು ಮುಖ್ಯಮಂತ್ರಿ ಘೋಷಿಸಬಹುದು ಎಂದು ಹೇಳುವ ಮೂಲಕ ತೀವ್ರ ಆಕ್ರೋಶಕ್ಕೆ ಒಳಗಾಗಿದ್ದರು.
Advertisement