

ನವದೆಹಲಿ: ದೇಶೀಯ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ. ವಿಮಾನಗಳಲ್ಲಿ ಸೀಟು ಆಯ್ಕೆಗಾಗಿ ಹೆಚ್ಚುವರಿ ಶುಲ್ಕದ ಭಾರವನ್ನು ಕಡಿಮೆ ಮಾಡುವ ಉದ್ದೇಶದಿಂದ, ಕೇಂದ್ರ ಸರ್ಕಾರ ಮಹತ್ವದ ಆದೇಶವನ್ನು ಹೊರಡಿಸಿದೆ.
ಈ ಕುರಿತು ನಾಗರಿಕ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಮಹತ್ವದ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ ನಿರ್ದೇಶನ ನೀಡಿದೆ.
ಹೊಸ ನಿಯಮಗಳ ಪ್ರಕಾರ, ಒಂದೇ ಪ್ರಯಾಣ ವಿವರ ಸಂಖ್ಯೆಯ ಅಡಿಯಲ್ಲಿ ಟಿಕೆಟ್ ಕಾಯ್ದಿರಿಸಿರುವವರನ್ನು ಒಂದೇ ಸ್ಥಳದಲ್ಲಿ, ಸಾಧ್ಯವಾದರೆ ಪಕ್ಕಪಕ್ಕದಲ್ಲಿ ಕುಳ್ಳಿರಿಸುವುದು ಕಡ್ಡಾಯವಾಗಿದೆ. ಇದರಿಂದ ಕುಟುಂಬದವರು ಹಾಗೂ ಒಟ್ಟಿಗೆ ಪ್ರಯಾಣಿಸುವವರಿಗೆ ಹೆಚ್ಚಿನ ಅನುಕೂಲ ದೊರೆಯಲಿದೆ.
ಈಗಾಗಲೇ ಕೇವಲ ಶೇ.20ರಷ್ಟು ಆಸನಗಳು ಮಾತ್ರ ಉಚಿತವಾಗಿ ಲಭ್ಯವಾಗುತ್ತಿದ್ದರೆ, ಉಳಿದ ಆಸನಗಳಿಗೆ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿತ್ತು. ಆದರೆ, ಈಗ ಶೇ.60ರಷ್ಟು ಆಸನಗಳನ್ನು ಉಚಿತವಾಗಿ ನೀಡುವ ಮೂಲಕ ಪ್ರಯಾಣಿಕರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಇದರ ಜೊತೆಗೆ, ಕ್ರೀಡಾ ಉಪಕರಣಗಳು ಮತ್ತು ಸಂಗೀತ ವಾದ್ಯಗಳನ್ನು ಸಾಗಿಸುವಲ್ಲಿ ಉಂಟಾಗುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಅವುಗಳನ್ನು ಸುರಕ್ಷಿತ ಹಾಗೂ ಪಾರದರ್ಶಕ ರೀತಿಯಲ್ಲಿ ಸಾಗಿಸಲು ಹೊಸ ನಿಯಮಗಳನ್ನು ಜಾರಿಗೆ ತರಲು ಸೂಚಿಸಲಾಗಿದೆ.
ಪ್ರಯಾಣಿಕರ ಹಕ್ಕುಗಳಿಗೆ ಹೆಚ್ಚಿನ ಮಹತ್ವ ನೀಡಿರುವ ಕೇಂದ್ರ ಸರ್ಕಾರ, ವಿಮಾನ ವಿಳಂಬ, ರದ್ದುಪಡಿಸುವಿಕೆ ಹಾಗೂ ಪ್ರವೇಶ ನಿರಾಕರಣೆ ಸಂದರ್ಭಗಳಲ್ಲಿ ಇರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದೆ.
ಈ ಹಕ್ಕುಗಳ ಬಗ್ಗೆ ಸ್ಪಷ್ಟ ಮಾಹಿತಿಯನ್ನು ವೆಬ್ಸೈಟ್, ಮೊಬೈಲ್ ಆ್ಯಪ್ ಮತ್ತು ಏರ್ಪೋರ್ಟ್ ಕೌಂಟರ್ಗಳಲ್ಲಿ ಪ್ರದರ್ಶಿಸುವುದನ್ನೂ ಕಡ್ಡಾಯಗೊಳಿಸಲಾಗಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ವಿಮಾನಯಾನ ಸಂಸ್ಥೆಗಳು ತಮ್ಮ ನಿಯಮಗಳನ್ನು ಮತ್ತು ಪ್ರಯಾಣಿಕರ ಹಕ್ಕುಗಳನ್ನು ಕೇವಲ ಇಂಗ್ಲಿಷ್ ಮಾತ್ರವಲ್ಲದೆ ಪ್ರಾದೇಶಿಕ ಭಾಷೆಗಳಲ್ಲಿಯೂ ಸಂವಹನ ಮಾಡಬೇಕು. ಈ ಎಲ್ಲ ನೀತಿಗಳು ಪ್ರಯಾಣಿಕರ ಸುರಕ್ಷತೆ ಮತ್ತು ವಿಮಾನ ಕಾರ್ಯಾಚರಣೆಯ ಅವಶ್ಯಕತೆಗಳಿಗೆ ಹೊಂದಿಕೆಯಾಗಬೇಕು ಮತ್ತು ಪ್ರಯಾಣಿಕ ಸ್ನೇಹಿ ರೀತಿಯಲ್ಲಿ ಸಂವಹನ ಮಾಡಬೇಕು ಎಂದೂ ಸೂಚನೆ ನೀಡಿದೆ.
ವಿಮಾನಯಾನ ಸಂಸ್ಥೆಗಳು 'ವೆಬ್ ಚೆಕ್-ಇನ್' ಹೆಸರಿನಲ್ಲಿ ಪ್ರತಿಯೊಂದು ಸೀಟಿಗೂ ಹಣ ವಸೂಲಿ ಮಾಡುತ್ತಿದ್ದವು. ಕಿಟಕಿ ಪಕ್ಕದ ಸೀಟು ಇರಲಿ ಅಥವಾ ಮಧ್ಯದ ಸೀಟು ಇರಲಿ, ಗ್ರಾಹಕರು ಹಣ ನೀಡಲೇಬೇಕಾದ ಅನಿವಾರ್ಯತೆ ಇತ್ತು. ಸರ್ಕಾರದ ಈ ಹೊಸ ನಿಯಮವು ಸಾಮಾನ್ಯ ಪ್ರಯಾಣಿಕರಿಗೆ ಆಗುತ್ತಿದ್ದ ಆರ್ಥಿಕ ಹೊರೆಯನ್ನು ತಪ್ಪಿಸಲಿದೆ.
ಈ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು ಅವರು ಪ್ರತಿಕ್ರಿಯಿಸಿದ್ದು, “ಪ್ರಯಾಣಿಕರ ಅನುಕೂಲಕ್ಕಾಗಿ ಶೇ.60ರಷ್ಟು ಆಸನಗಳನ್ನು ಉಚಿತವಾಗಿ ನೀಡುವಂತೆ ಸೂಚಿಸಲಾಗಿದೆ. ಕುಟುಂಬದವರು ಒಟ್ಟಿಗೆ ಕುಳಿತುಕೊಳ್ಳುವಂತೆ ವ್ಯವಸ್ಥೆ ಮಾಡುವುದು ಮತ್ತು ಸೇವೆಗಳನ್ನು ಪಾರದರ್ಶಕಗೊಳಿಸುವುದು ನಮ್ಮ ಉದ್ದೇಶ ಎಂದು ತಿಳಿಸಿದ್ದಾರೆ.
Advertisement