ಭಾರತದಲ್ಲಿ ಲಾಕ್‌ಡೌನ್ ವದಂತಿಗಳು ಸಂಪೂರ್ಣ ಸುಳ್ಳು, ಅಂತಹ ಯಾವುದೇ ಪ್ರಸ್ತಾಪವಿಲ್ಲ: ಹರ್ದೀಪ್ ಸಿಂಗ್ ಪುರಿ

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಜಾಗತಿಕ ತೈಲ ಮತ್ತು ಅನಿಲ ಕೊರತೆಯು ಭಾರತದಲ್ಲಿ ಲಾಕ್‌ಡೌನ್ ಸಾಧ್ಯತೆಯ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿರುವ ಸಮಯದಲ್ಲಿ ಪುರಿ ಅವರ ಹೇಳಿಕೆಗಳು ಬಂದಿವೆ.
Hardeep Singh Puri
ಹರ್ದೀಪ್ ಸಿಂಗ್ ಪುರಿ
Updated on

ನವದೆಹಲಿ: ದೇಶದಾದ್ಯಂತ ಲಾಕ್‌ಡೌನ್‌ ಜಾರಿಯಾಗುವ ಬಗ್ಗೆ ಹಬ್ಬಿರುವ ವದಂತಿಗಳು ಸಂಪೂರ್ಣ ಸುಳ್ಳು. ಅಂತಹ ಯಾವುದೇ ಪ್ರಸ್ತಾಪವು ಪ್ರಸ್ತುತ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ 'X' ನಲ್ಲಿ ಪುರಿ, 'ಜಾಗತಿಕ ಪರಿಸ್ಥಿತಿ ಅಸ್ಥಿರವಾಗಿದ್ದು, ಇಂಧನ, ಪೂರೈಕೆ ಸರಪಳಿಗಳು ಮತ್ತು ಅಗತ್ಯ ವಸ್ತುಗಳ ಕುರಿತಾದ ಬೆಳವಣಿಗೆಗಳನ್ನು ನಾವು ನೈಜ ಸಮಯದಲ್ಲಿ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ನಮ್ಮ ನಾಗರಿಕರಿಗೆ ಇಂಧನ, ಶಕ್ತಿ ಮತ್ತು ಇತರ ನಿರ್ಣಾಯಕ ಸರಬರಾಜುಗಳ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹೊಸ ಸವಾಲುಗಳನ್ನು ನಿಭಾಯಿಸಲು ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ' ಎಂದು ಹೇಳಿದರು.

'ಜಾಗತಿಕ ಅನಿಶ್ಚಿತತೆಗಳ ನಡುವೆಯೂ ಭಾರತ ನಿರಂತರವಾಗಿ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸಿದೆ ಮತ್ತು ನಾವು ಸಕಾಲಿಕ, ಪೂರ್ವಭಾವಿ ಮತ್ತು ಸಂಘಟಿತ ರೀತಿಯಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತೇವೆ' ಎಂದು ಹೇಳಿದರು.

'ಭಾರತದಲ್ಲಿ ಲಾಕ್‌ಡೌನ್ ಬಗ್ಗೆ ಇರುವ ವದಂತಿಗಳು ಸಂಪೂರ್ಣವಾಗಿ ಸುಳ್ಳು. ನಾನು ಸ್ಪಷ್ಟವಾಗಿ ಹೇಳುತ್ತೇನೆ, ಅಂತಹ ಯಾವುದೇ ಪ್ರಸ್ತಾಪವು ಭಾರತ ಸರ್ಕಾರದ ಮುಂದಿಲ್ಲ. ಇಂತಹ ಸಮಯದಲ್ಲಿ, ನಾವು ಶಾಂತವಾಗಿರುವುದು, ಜವಾಬ್ದಾರಿಯುತವಾಗಿರುವುದು ಮತ್ತು ಒಗ್ಗಟ್ಟಾಗಿರುವುದು ಮುಖ್ಯ. ವದಂತಿಗಳನ್ನು ಹರಡುವ ಮತ್ತು ಭೀತಿಯನ್ನು ಸೃಷ್ಟಿಸುವ ಪ್ರಯತ್ನಗಳು ಬೇಜವಾಬ್ದಾರಿ ಮತ್ತು ಹಾನಿಕಾರಕ' ಎಂದು ಅವರು ಹೇಳಿದರು.

ಜಾಗತಿಕ ತೈಲ ಮತ್ತು ಅನಿಲ ಕೊರತೆಯು ಭಾರತದಲ್ಲಿ ಲಾಕ್‌ಡೌನ್ ಸಾಧ್ಯತೆಯ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿರುವ ಸಮಯದಲ್ಲಿ ಪುರಿ ಅವರ ಹೇಳಿಕೆಗಳು ಬಂದಿವೆ. ಜೊತೆಗೆ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಪೂರೈಕೆ ಪರಿಸ್ಥಿತಿ ಬಗ್ಗೆಯೂ ಕಳವಳಗಳು ವ್ಯಕ್ತವಾಗುತ್ತಿವೆ.

ಈ ವಾರದ ಆರಂಭದಲ್ಲಿ, ಭಾರತ ಸರ್ಕಾರವು ರಾಷ್ಟ್ರವ್ಯಾಪಿ ಲಾಕ್‌ಡೌನ್ ಬಗ್ಗೆ ಊಹಾಪೋಹಗಳನ್ನು ದೃಢವಾಗಿ ತಿರಸ್ಕರಿಸಿತು. ಸಾರ್ವಜನಿಕ ಸಂಚಾರ ಅಥವಾ ಆರ್ಥಿಕ ಚಟುವಟಿಕೆ ಮೇಲೆ ನಿರ್ಬಂಧಗಳನ್ನು ವಿಧಿಸುವ ಯಾವುದೇ ಯೋಜನೆಗಳಿಲ್ಲ ಎಂದು ಹೇಳಿದೆ. ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ಹೇಳಿಕೆಗಳನ್ನು ತಪ್ಪಾಗಿ ಭಾವಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

Hardeep Singh Puri
ಇಂಧನ ಅಬಕಾರಿ ಸುಂಕ ಇಳಿಕೆ ಬೆಲೆ ಏರಿಕೆಯಿಂದ ಗ್ರಾಹಕರಿಗೆ ರಕ್ಷಣೆ ಒದಗಿಸುತ್ತದೆ: ನಿರ್ಮಲಾ ಸೀತಾರಾಮನ್; Video

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com