ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಚೊಚ್ಚಲ ಪ್ರವೇಶದಲ್ಲೇ 100ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅದ್ಭುತ ಸಾಧನೆ ಮಾಡಿದ ನಂತರ, ಟಿವಿಕೆ ಮುಖ್ಯಸ್ಥ ಮತ್ತು ನಟ-ರಾಜಕಾರಣಿ ವಿಜಯ್ ಮಂಗಳವಾರ ಹೊಸದಾಗಿ ಆಯ್ಕೆಯಾದ ಶಾಸಕರ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವಿಜಯ್ ಅವರ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) 108 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇತ್ತ ಡಿಎಂಕೆ ಮತ್ತು ಎಐಎಡಿಎಂಕೆ ಕ್ರಮವಾಗಿ 59 ಮತ್ತು 47 ಸ್ಥಾನಗಳನ್ನು ಪಡೆದಿವೆ.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ರಚಿಸಲು ಟಿವಿಕೆಗೆ 118 ಶಾಸಕರು ಬೇಕಾಗಿದ್ದಾರೆ.
ವಿಜಯ್ ಅವರಿಗೆ ಪಕ್ಷದ ಸದಸ್ಯರು ಮತ್ತು ವಿಧಾನಸಭೆಗೆ ಚೊಚ್ಚಲ ಪ್ರವೇಶ ಮಾಡುತ್ತಿರುವ ಹಲವಾರು ನೂತನ ಶಾಸಕರು ಟಿವಿಕೆ ಪ್ರಧಾನ ಕಚೇರಿಯಲ್ಲಿ ಅಭೂತಪೂರ್ವ ಸ್ವಾಗತ ನೀಡಿದರು.
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮತ್ತು ವಿಧಾನಸಭೆಯಲ್ಲಿ ಅವರ ನಡವಳಿಕೆಯನ್ನು ಚರ್ಚಿಸಲು ಅವರು ಪಕ್ಷದ ಶಾಸಕರ ಸಭೆಯನ್ನು ಕರೆಯಲಾಗಿತ್ತು ಎಂದು ಶಾಸಕರೊಬ್ಬರು ಹೇಳಿದ್ದಾರೆ.
ಇದಕ್ಕೂ ಮೊದಲು, ಪ್ರಧಾನ ಕಚೇರಿಯಲ್ಲಿ ಟಿವಿಕೆ ಮುಖ್ಯಸ್ಥರು ಪಕ್ಷವು ತನ್ನ ಸೈದ್ಧಾಂತಿಕ ನಾಯಕರೆಂದು ಪರಿಗಣಿಸುವ ಪೆರಿಯಾರ್ ಇವಿ ರಾಮಸ್ವಾಮಿ, ಡಾ. ಬಿಆರ್ ಅಂಬೇಡ್ಕರ್, ಕೆ ಕಾಮರಾಜ್, ವೇಲು ನಾಚಿಯಾರ್ ಮತ್ತು ಅಂಜಲೈ ಅಮ್ಮಳ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು.
ಸಭೆಯಲ್ಲಿ, ಶಾಸಕರು ತಮ್ಮ ಗೆಲುವಿನ ಪ್ರಮಾಣಪತ್ರಗಳನ್ನು ಪಕ್ಷದ ನಾಯಕರಿಗೆ ನೀಡಲಿದ್ದಾರೆ ಮತ್ತು ಸರ್ಕಾರ ರಚಿಸಲು ತಂತ್ರಗಳ ಕುರಿತು ಚರ್ಚಿಸಲಿದ್ದಾರೆ ಎಂದು ಟಿವಿಕೆ ನಾಯಕ ನಂಜಿಲ್ ಸಂಪತ್ ಹೇಳಿದರು.
ಟಿವಿಕೆ ಸರಳ ಬಹುಮತವನ್ನು ಹೇಗೆ ಪಡೆಯುತ್ತದೆ ಎಂದು ಕೇಳಿದಾಗ, ಸರ್ಕಾರ ರಚನೆಗೆ 10 ಶಾಸಕರ ಕೊರತೆಯಿದ್ದು, ಅದನ್ನು ಪಕ್ಷದ ನಾಯಕರು ನೋಡಿಕೊಳ್ಳುತ್ತಾರೆ. ನನಗೆ ಸಕಾರಾತ್ಮಕ ಫಲಿತಾಂಶದ ವಿಶ್ವಾಸವಿದೆ ಮತ್ತು ಶೀಘ್ರದಲ್ಲೇ ಒಳ್ಳೆಯ ಸುದ್ದಿಯನ್ನು ನಿರೀಕ್ಷಿಸಬಹುದು ಎಂದು ಸಂಪತ್ ಸುದ್ದಿಗಾರರಿಗೆ ತಿಳಿಸಿದರು.
ಇಂದು ಬೆಳಿಗ್ಗೆ, ವಿಜಯ್ ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಿ ಲೋಕಭವನಕ್ಕೆ ಪತ್ರ ಬರೆದಿದ್ದಾರೆ.
ಟಿವಿಕೆ ಮೂಲದ ಪ್ರಕಾರ, ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಪಕ್ಷವು ಎರಡು ವಾರಗಳ ಕಾಲಾವಕಾಶ ಕೋರಿದೆ.
ಈಮಧ್ಯೆ, ಪೆರಂಬೂರು ಮತ್ತು ತಿರುಚಿರಾಪಳ್ಳಿ ಪೂರ್ವ ವಿಧಾನಸಭಾ ಕ್ಷೇತ್ರಗಳಿಂದ ಗೆದ್ದಿದ್ದ ವಿಜಯ್ ಅವರ ಪಣೈಯೂರ್ ನಿವಾಸದ ಹೊರಗೆ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
Advertisement