

ಚೆನ್ನೈ: ತಮಿಳುನಾಡಿನಲ್ಲಿ ಅತಂತ್ರ ಫಲಿತಾಂಶದಿಂದಾಗಿ ರಾಜಕೀಯ ಬಿಕ್ಕಟ್ಟು ಎದುರಾಗಿದೆ. ಸರ್ಕಾರ ರಚನೆಗೆ ಬೆಂಬಲಿಸಬೇಕು ಎಂಬ ಮನವಿಯನ್ನು ಎಡಪಕ್ಷ ಹಾಗೂ VKC ಪರಿಗಣಿಸಿದ್ದು, ನೂತನ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಟಿವಿಕೆ ಅಧ್ಯಕ್ಷ ವಿಜಯ್ ಮೂರನೇ ಬಾರಿಗೆ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ.
ಎಡಪಕ್ಷ ಮತ್ತು ವಿಕೆಸಿ ಬೆಂಬಲ ನೀಡಿದರೆ ಹಲವು ರಾಜ್ಯಗಳಲ್ಲಿನ ಹಿಂದಿನ ನಿದರ್ಶನಗಳನ್ನು ಉಲ್ಲೇಖಿಸಿ ವಿಜಯ್ ರಾಜ್ಯಪಾಲರಿಗೆ ಮತ್ತೊಂದು ಮನವಿಯನ್ನು ಸಲ್ಲಿಸುವ ಸಾಧ್ಯತೆಯಿದೆ ಮತ್ತು ನಿರ್ದಿಷ್ಟ ದಿನಾಂಕದಂದು ಸರ್ಕಾರ ರಚಿಸಲು ಮತ್ತು ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಲು ಅವಕಾಶ ನೀಡಬೇಕು ಎಂದು ರಾಜ್ಯಪಾಲರ ಬಳಿ ಮನವಿ ಮಾಡಬಹುದು.
ಇಂದು ಬೆಳಿಗ್ಗೆ ಡಿಎಂಕೆಯ ಮಿತ್ರಪಕ್ಷವಾದ CPI (ಎಂ), ಟಿವಿಕೆ ಸರ್ಕಾರ ಬೆಂಬಲಿಸುವ ಬಗ್ಗೆ ಶುಕ್ರವಾರ ಆಂತರಿಕ ಚರ್ಚೆಯನ್ನು ಪ್ರಾರಂಭಿಸಿದೆ ಎಂದು ಪಕ್ಷದ ಮೂಲವೊಂದು ತಿಳಿಸಿದೆ.
ಈ ಮಧ್ಯೆ ರಾಜ್ಯದ ಜನರು ಸರ್ಕಾರ ರಚನೆಯಲ್ಲಿ ಪಕ್ಷಕ್ಕೆ ಅವಕಾಶ ನೀಡಿಲ್ಲ. ಹೀಗಾಗಿ ಬಿಜೆಪಿ ಮುಂದಿನ ಸರ್ಕಾರ ರಚಿಸಲು ಯಾವುದೇ ಪ್ರಯತ್ನ ಮಾಡಲ್ಲ. ಅಲ್ಲದೇ ಮುಂದಿನ ಸರ್ಕಾರ ರಚಿಸಲು ಪ್ರಯತ್ನಿಸುತ್ತಿರುವ ಯಾವುದೇ ಪಕ್ಷದ ಪರ ಬೆಂಬಲ ನೀಡಲ್ಲ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನೈನಾರ್ ನಾಗೇಂದ್ರನ್ ಹೇಳಿದ್ದಾರೆ.
ಪ್ರಸ್ತುತದ ರಾಜಕೀಯ ಬೆಳವಣಿಗೆಗಳಿಂದ ಬಿಜೆಪಿ ದೂರವಿದ್ದು, ಒಂದು ವೇಳೆ ಡಿಎಂಕೆಯೊಂದಿಗೆ ಎಐಎಡಿಎಂಕೆ ಸರ್ಕಾರ ರಚಿಸುವುದಾದರೆ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಆದಾಗ್ಯೂ, ಎಐಎಡಿಎಂಕೆಗೆ ಬಾಹ್ಯ ಬೆಂಬಲ ನೀಡುವ ಬಗ್ಗೆ ಡಿಎಂಕೆ ಮರುಚಿಂತನೆ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ಶತಾಯುಷಿ ರಾಜಕಾರಣಿ ಮತ್ತು ಬಿಜೆಪಿ ನಾಯಕ ಎಚ್.ವಿ. ಹಂಡೆ, ರಾಜ್ಯಪಾಲರು ಯಾವುದೇ ವಿಳಂಬವಿಲ್ಲದೆ ಮುಂದಿನ ಸರ್ಕಾರ ರಚಿಸಲು ಟಿವಿಕೆ ಅಧ್ಯಕ್ಷ ವಿಜಯ್ ಅವರನ್ನು ಆಹ್ವಾನಿಸಬೇಕು ಎಂದು ಹೇಳಿದ್ದಾರೆ.
ಸರ್ಕಾರ ರಚಿಸುವಂತೆ ವಿಜಯ್ ಅವರಿಗೆ ಸೂಚಿಸುವಲ್ಲಿ ರಾಜ್ಯಪಾಲರು ವಿಳಂಬ ಮಾಡುವುದು ಕ್ಷಮಿಸಲಾಗದ ತಪ್ಪು. ವಿಳಂಬ ಮಾಡದೆ ಟಿವಿಕೆ ನಾಯಕನಿಗೆ ತಮಿಳುನಾಡು ವಿಧಾನಸಭೆಯಲ್ಲಿ ತಮ್ಮ ಬಹುಮತವನ್ನು ಸಾಬೀತುಪಡಿಸಲು ಅವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Advertisement