

ಚೆನ್ನೈ: ತಮಿಳು ನಟ ಹಾಗೂ ಟಿವಿಕೆ (ತಮಿಳಗ ವೆಟ್ರಿ ಕಳಗಂ) ಪಕ್ಷದ ನಾಯಕ ವಿಜಯ್ ಇತ್ತೀಚೆಗೆ ತಮಿಳುನಾಡು ರಾಜ್ಯಪಾಲರನ್ನು ಭೇಟಿ ಮಾಡಿದ ವೇಳೆ ಅವರ ಜೊತೆ ಕಾಣಿಸಿಕೊಂಡ ಕೆಲ ವ್ಯಕ್ತಿಗಳ ಹಿನ್ನೆಲೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ವಿಶೇಷವಾಗಿ ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ (KVN Productions) ನ ಮಾಲೀಕ ವೆಂಕಟ್ ಕೆ. ನಾರಾಯಣ ಹಾಗೂ ಆಂಧ್ರಪ್ರದೇಶ ಮೂಲದ ಉದ್ಯಮಿ ವಿಷ್ಣು ರೆಡ್ಡಿ ವಿಜಯ್ ಜೊತೆ ಕಾಣಿಸಿಕೊಂಡಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.
ವಿಜಯ್ ಅವರು ತಮಿಳುನಾಡಿನಲ್ಲಿ ತನ್ನದೇ ರಾಜಕೀಯ ಶಕ್ತಿಯನ್ನು ನಿರ್ಮಿಸಲು ಮುಂದಾಗಿದ್ದಾರೆ. ಡಿಎಂಕೆ ಹಾಗೂ ಎಐಎಡಿಎಂಕೆ ರಾಜಕೀಯಕ್ಕೆ ಪರ್ಯಾಯವಾಗಿ ಟಿವಿಕೆ ಪಕ್ಷವನ್ನು ಬಲಪಡಿಸಲು ಪ್ರಯತ್ನಿಸುತ್ತಿರುವ ಈ ಸಂದರ್ಭದಲ್ಲಿ, ರಾಜ್ಯಪಾಲರ ಭೇಟಿಯ ಫೋಟೋಗಳು ವೈರಲ್ ಆಗಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ವಿಜಯ್ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಾರೆ. “ತಮಿಳುನಾಡು ಸರ್ಕಾರ ರಚನೆ ಬಗ್ಗೆ ಮಾತನಾಡಲು ವಿಜಯ್ ಜೊತೆ ಕರ್ನಾಟಕದ ಸಿನಿಮಾ ನಿರ್ಮಾಪಕ ಮತ್ತು ಆಂಧ್ರದ ಉದ್ಯಮಿ ಏಕೆ ಹೋಗಿದ್ದರು? ಅವರಿಗೆ ತಮಿಳುನಾಡಿನ ರಾಜಕೀಯದಲ್ಲಿ ಏನು ಪಾತ್ರ?” ಎಂದು ಪ್ರಶ್ನಿಸಿ ಹಲವರು ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಪೋಸ್ಟ್ ಮಾಡಿ, ಯ್ ಸರ್ಕಾರ ರಚನೆ ಕುರಿತು ರಾಜ್ಯಪಾಲರನ್ನು ಭೇಟಿ ಮಾಡಲು ಕರ್ನಾಟಕದ ನಿರ್ಮಾಪಕ ಕೆವಿಎನ್ ವೆಂಕಟ್ ಹಾಗೂ ಆಂಧ್ರ ಮೂಲದ ಗ್ರಾನೈಟ್ ಮತ್ತು ಗಣಿಗಾರಿಕೆ ಉದ್ಯಮಿ ವಿಷ್ಣು ರೆಡ್ಡಿಯನ್ನು ಕರೆದುಕೊಂಡು ಹೋಗಿದ್ದಾರೆ.
ತಮಿಳುನಾಡಿನಲ್ಲಿ ಇವರ ಪಾತ್ರವೇನು? ರಾಜ್ಯ ಆಡಳಿತವನ್ನು ಇವರು ನಡೆಸಲಿದೆಯೇ?” ಎಂದು ಪ್ರಶ್ನಿಸಿದ್ದಾರೆ, ಈ ಪೋಸ್ಟ್ ಭಾರೀ ವೈರಲ್ ಆಗಿದೆ.
ಈ ಬೆಳವಣಿಗೆ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದ್ದು, ಕೆಲವರು ಇದನ್ನು ಪ್ರಾದೇಶಿಕ ಅಸಮಾಧಾನಕ್ಕೆ ತಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿರುವ ಟೀಕೆಗಳ ನಡುವೆ ವಿಜಯ್ ಈ ವಿಚಾರಕ್ಕೆ ಸ್ಪಷ್ಟನೆ ನೀಡುವ ಪರಿಸ್ಥಿತಿ ಎದುರಾಗಿದೆ.
Advertisement