

ನವದೆಹಲಿ: ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಬಲವಂತಪಡಿಸಲು ರಾಜ್ಯ ಸರ್ಕಾರಕ್ಕೆಕ್ಕೆ ಅಧಿಕಾರವಿಲ್ಲ ಎಂದು ದೆಹಲಿ ಹೈಕೋರ್ಟ್ ಶುಕ್ರವಾರ ಹೇಳಿದೆ.
11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ವ್ಯಕ್ತಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸುವ ವೇಳೆ ನ್ಯಾಯಮೂರ್ತಿ ಗಿರೀಶ್ ಕಠ್ಪಾಲಿಯಾ ಈ ಮಹತ್ವದ ಆದೇಶ ನೀಡಿದ್ದಾರೆ.
ಆರೋಪಿ ಬಾಂಗ್ಲಾದೇಶ ಮೂಲದ ವ್ಯಕ್ತಿಯಾಗಿದ್ದು, ಉತ್ತರ ಪ್ರದೇಶದಲ್ಲಿ ಜನಿಸಿದ್ದ ತನ್ನ 11 ವರ್ಷದ ಮಲಮಗಳ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಎದುರಿಸುತ್ತಿದ್ದಾನೆ.
ಪ್ರಕರಣದ ಬಗ್ಗೆ ಯಾರಿಗೂ ಹೇಳಬಾರದು ಎಂದು ಬಾಲಕಿಗೆ ಬೆದರಿಕೆ ಹಾಕಿದ್ದಾನೆ ಎಂಬ ಆರೋಪವೂ ಕೇಳಿ ಬಂದಿದೆ.
ಈ ಪ್ರಕರಣದಲ್ಲಿ ಆರೋಪಿ ತಾನು ಸುಳ್ಳು ಪ್ರಕರಣದಲ್ಲಿ ಸಿಲುಕಿದ್ದೇನೆ ಎಂದು ಹೇಳಿ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದ. ಜೊತೆಗೆ, ಘಟನೆ ನಡೆದ ಸಂದರ್ಭದಲ್ಲಿ ಬಾಲಕಿ 11 ವರ್ಷಕ್ಕಿಂತ ಹೆಚ್ಚು ವಯಸ್ಸಿನವಳಾಗಿದ್ದಳು ಎಂದು ವಾದ ಮಂಡಿಸಿದ್ದ.
ಆರೋಪಿಯ ಪರ ವಕೀಲರು, ಬಾಲಕಿಯ ತಾಯಿ ವೈದ್ಯಕೀಯ ಪರೀಕ್ಷೆಗೆ ಒಪ್ಪಿಗೆ ನೀಡಿದ್ದರೂ, ಬಾಲಕಿ ಸ್ವತಃ ಪರೀಕ್ಷೆಗೆ ನಿರಾಕರಿಸಿದ್ದಾಳೆ. ಹೀಗಾಗಿ ಅದನ್ನು ಜಾಮೀನು ನೀಡಲು ಕಾರಣವಾಗಿ ಪರಿಗಣಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಆದರೆ, ಈ ವಾದವನ್ನು ಸಂಪೂರ್ಣ ತಿರಸ್ಕರಿಸಿದ ನ್ಯಾಯಾಲಯ, ಬಾಲಕಿಯ ದೈಹಿಕ ಸ್ವಾಯತ್ತತೆ ಮತ್ತು ಗೌಪ್ಯತೆಯನ್ನು ಗೌರವಿಸಬೇಕು ಎಂದು ಹೇಳಿದೆ.
ಬಾಲಕಿಯ ದೈಹಿಕ ಸಮಗ್ರತೆಯನ್ನು ಗೌರವಿಸಬೇಕು. ಆಂತರಿಕ ಪರೀಕ್ಷೆಗೆ ಆಕೆ ಇಚ್ಛಿಸದಿದ್ದರೆ, ಬಲವಂತವಾಗಿ ಪರೀಕ್ಷೆಗೆ ಒಳಪಡಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಬಾಲಕಿಯ ಗಾಯದ ಮೇಲೆ ಮತ್ತಷ್ಟು ನೋವು ಸೇರಿಸುವ ಹಕ್ಕು ರಾಜ್ಯಕ್ಕಿಲ್ಲ ಎಂದು ಹೇಳಿದೆ.
ಇದೇ ವೇಳೆ ಬಾಲಕಿಯ ವಯಸ್ಸು ಕುರಿತ ಆರೋಪಿಯ ವಾದವನ್ನೂ ನ್ಯಾಯಾಲಯ ತಳ್ಳಿ ಹಾಕಿದೆ. ಆರೋಪಿ ಸಲ್ಲಿಸಿರುವ ದಾಖಲೆಪ್ರಮಾಣಪತ್ರಗಳನ್ನು ಗಮನಿಸಿದ ನ್ಯಾಯಾಲಯ, ಘಟನೆ ನಡೆದ ವೇಳೆ ಬಾಲಕಿಗೆ 11 ವರ್ಷ ವಯಸ್ಸಾಗಿತ್ತು ಎಂದು ಹೇಳಿದೆ.
ಈ ವೇಳೆ ನ್ಯಾಯಾಲಯ, “ಬಾಲಕಿ ಯಾವ ವಯಸ್ಸಿನವಳು ಎಂದು ಆರೋಪಿ ನಂಬಿದ್ದಾನೆ?” ಎಂಬ ಪ್ರಶ್ನೆಗೆ ಆರೋಪಿಯ ಪರ ವಕೀಲರು ಉತ್ತರ ನೀಡಿಲ್ಲ. ಇದೇ ವೇಳೆ, ಬಾಲಕಿಯ ಒಪ್ಪಿಗೆ ಕುರಿತು ಆರೋಪಿಯ ಪರ ವಕೀಲರು ಯಾವುದೇ ವಾದ ಮಂಡಿಸಲಿಲ್ಲ. ಇದನ್ನು ಗಮನಿಸಿದ ನ್ಯಾಯಾಲಯ ಸಂತ್ರಸ್ತೆ ಅಪ್ರಾಪ್ತಳಾಗಿರಲಿ ಅಥವಾ ಪ್ರಾಪ್ತವಯಸ್ಕಳಾಗಿರಲಿ, ಈ ಪ್ರಕರಣದಲ್ಲಿ ಒಪ್ಪಿಗೆ ವಿಚಾರವೇ ಆರೋಪಿಯ ವಾದದಲ್ಲಿಲ್ಲ ಎಂದು ಅಭಿಪ್ರಾಯಪಟ್ಟಿತು
Advertisement