

ತಿರುಚಿರಾಪಳ್ಳಿ: ಇತ್ತೀಚಿನ ವಿಧಾನಸಭಾ ಚುನಾವಣೆಯ ನಂತರ ರಾಜಕೀಯ ಬೆಂಬಲ ಪಡೆಯಲು ಆಡಳಿತಾರೂಢ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) 'ಕುದುರೆ ವ್ಯಾಪಾರ'ದಲ್ಲಿ ತೊಡಗಿದೆ ಎಂದು ಎಎಂಎಂಕೆ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಆರೋಪಿಸಿದ್ದಾರೆ.
ತಿರುಚಿರಾಪಳ್ಳಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ದಿನಕರನ್, ಟಿವಿಕೆ ಸೇರಿದ ಎಎಂಎಂಕೆ ಶಾಸಕರಿಗೆ ಸಚಿವ ಸ್ಥಾನ ನೀಡಿದರೆ, ತಮ್ಮ ಪಕ್ಷವು ಈ ವಿಷಯದ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸುತ್ತದೆ. ಟಿವಿಕೆ ಪಕ್ಷದ ರಾಜಕೀಯ ತಂತ್ರವು ಸಂಪೂರ್ಣ 'ಕುದುರೆ ವ್ಯಾಪಾರ' ಎಂದು ಹೇಳಿದರು.
'ವಿಜಯ್ ಕುದುರೆ ವೇಗದಲ್ಲಿ ಕೆಲಸ ಮಾಡುವುದಾಗಿ ಹೇಳುತ್ತಾರೆ. ಆದರೆ, ಅವರು ಚೌಕಾಶಿ ಮಾಡುವ ಮೂಲಕ ಕುದುರೆಯನ್ನು ಖರೀದಿಸಿದ್ದಾರೆ' ಎಂದು ತಮಿಳುನಾಡು ಮುಖ್ಯಮಂತ್ರಿ ಮತ್ತು ಟಿವಿಕೆ ಪಕ್ಷದ ನಾಯಕನನ್ನು ಉಲ್ಲೇಖಿಸಿ ದಿನಕರನ್ ವ್ಯಂಗ್ಯವಾಡಿದರು.
ಮನ್ನಾರ್ಗುಡಿ ಶಾಸಕ ಕಾಮರಾಜ್ ಅವರನ್ನೂ ಗುರಿಯಾಗಿಸಿಕೊಂಡ ದಿನಕರನ್, ಅವರ ಹೇಳಿಕೆಗಳು ತಿರುಗುಬಾಣವಾಗುತ್ತವೆ ಮತ್ತು ಕಾಮರಾಜ್ ಕಾರಿನೊಳಗೆ ದಾಖಲೆಗಳಿಗೆ ಸಹಿ ಹಾಕುತ್ತಿರುವ ವಿಡಿಯೋವನ್ನು ಯಾರು ರೆಕಾರ್ಡ್ ಮಾಡಿದ್ದಾರೆಂದು ತನಗೆ ತಿಳಿದಿದೆ ಎಂದು ಹೇಳಿದರು.
ರಾಜ್ಯ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ವಿಜಯ್ ನೇತೃತ್ವದ ಆಡಳಿತಾರೂಢ ಟಿವಿಕೆ ಸರ್ಕಾರಕ್ಕೆ ಬೆಂಬಲ ಘೋಷಿಸಿದ ನಂತರ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಪಕ್ಷದ ಏಕೈಕ ಶಾಸಕ ಎಸ್ ಕಾಮರಾಜ್ ಅವರನ್ನು ಪಕ್ಷದಿಂದ ಹೊರಹಾಕಲಾಯಿತು.
ರಾಜಕೀಯ ಪಕ್ಷದ ನಾಯಕರಿಗೆ ಮಾತ್ರ ಸಚೇತಕರನ್ನು ನೇಮಿಸುವ ಅಧಿಕಾರವಿದೆ. ಹೊಸದಾಗಿ ನೇಮಕಗೊಂಡ ಟಿವಿಕೆ ಸಚಿವರ ವಿರುದ್ಧ ಈಗಾಗಲೇ ಹಲವಾರು ದೂರುಗಳು ಬಂದಿವೆ. ಆಡಳಿತವನ್ನು ರೀಲ್ಗಳ ಮೂಲಕ ನಡೆಸಲು ಸಾಧ್ಯವಿಲ್ಲ ಮತ್ತು ಜನರು ಶೀಘ್ರದಲ್ಲೇ ಮೂಲ ವಾಸ್ತವವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಅನುಯಾಯಿಗಳಲ್ಲಿ ಒಗ್ಗಟ್ಟಿಗೆ ಮನವಿ ಮಾಡಿದ ಅವರು, ಪಕ್ಷವನ್ನು ಕಟ್ಟಲು ಎಲ್ಲ ಎಐಎಡಿಎಂಕೆ ಕಾರ್ಯಕರ್ತರು ಒಟ್ಟಾಗಿ ನಿಲ್ಲಬೇಕು. ಇದಲ್ಲದೆ, ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ವಿರೋಧ ಪಕ್ಷಗಳಿಗೆ ಹೆಚ್ಚಿನ ಸ್ಥಾನಗಳನ್ನು ನೀಡುವ ಮೂಲಕ ತಮಿಳುನಾಡಿನ ಜನರು ಪ್ರಜಾಪ್ರಭುತ್ವವನ್ನು ರಕ್ಷಿಸಿದ್ದಾರೆ ಎಂದು ಅವರು ಹೇಳಿದರು.
ಟಿವಿಕೆ ಸರ್ಕಾರವನ್ನು ಮೂರು ತಿಂಗಳು ಅಧಿಕಾರ ನಡೆಸಿದ ನಂತರವೇ ನಿರ್ಣಯಿಸುವುದು ಸೂಕ್ತ ಎಂದು ಅವರು ಹೇಳಿದರು.
ಎಐಎಡಿಎಂಕೆ ಅನ್ನು ಸಮರ್ಥಿಸಿಕೊಂಡ ದಿನಕರನ್, ಪಕ್ಷವನ್ನು ನಾಶಮಾಡಲು ಯಾರಿಂದಲೂ ಸಾಧ್ಯವಿಲ್ಲ ಮತ್ತು ಎಂಜಿ ರಾಮಚಂದ್ರನ್ ಕಾಲದಿಂದಲೂ ಆಂತರಿಕ ಗಲಭೆಗಳು ಅಸ್ತಿತ್ವದಲ್ಲಿವೆ. ಸದ್ಯದ ಗೊಂದಲಗಳ ಹೊರತಾಗಿಯೂ, ಎಐಎಡಿಎಂಕೆ ಬಲವಾಗಿ ಹೊರಹೊಮ್ಮುತ್ತದೆ ಮತ್ತು ಮುಂದಿನ ಸಂಸತ್ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಎಎಂಎಂಕೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಲ್ಲಿ (ಎನ್ಡಿಎ) ಮುಂದುವರಿಯುತ್ತದೆ ಎಂದು ಅವರು ಪುನರುಚ್ಚರಿಸಿದರು.
Advertisement