ನವದೆಹಲಿ: ಭೋಪಾಲ್ನ ಏಮ್ಸ್ನಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಲೋಪಗಳು ಬೆಳಕಿಗೆ ಬಂದ ನಂತರ, ಮಾಡೆಲ್ ಮತ್ತು ನಟಿ ತ್ವಿಶಾ ಶರ್ಮಾ ಅವರ ಮರಣೋತ್ತರ ಪರೀಕ್ಷೆಯನ್ನು ಎರಡನೇ ಬಾರಿಗೆ ದೆಹಲಿಯ ಏಮ್ಸ್ನಲ್ಲಿ ಮಾಡುವಂತೆ ಮತ್ತು ಕೇಂದ್ರ ತನಿಖಾ ದಳ (ಸಿಬಿಐ) ತನಿಖೆಗೆ ಕುಟುಂಬ ಒತ್ತಾಯಿಸಿದೆ ಎಂದು ವರದಿಯಾಗಿದೆ.
ವರದಿ ಪ್ರಕಾರ, ಆಕೆಯ ಸಾವಿನ ಸ್ಥಳದಲ್ಲಿ ಪತ್ತೆಯಾಗಿದ್ದ ನೈಲಾನ್ ಬೆಲ್ಟ್, ಸಾವಿನ ನಿಖರವಾದ ಕಾರಣ ಮತ್ತು ವಿಧಾನವನ್ನು ಸ್ಥಾಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿರಬಹುದು. ಆದರೆ, ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ನೇಣು ಹಾಕಿಕೊಳ್ಳಲು ಬಳಸಲಾಗಿದೆ ಎನ್ನಲಾದ ಬೆಲ್ಟ್ ಅನ್ನು ವೈದ್ಯರ ಮುಂದೆ ಹಾಜರುಪಡಿಸಲು ತನಿಖಾಧಿಕಾರಿ ವಿಫಲರಾಗಿದ್ದಾರೆ.
ಬೆಲ್ಟ್ ಕಾಣೆಯಾದ ಬಗ್ಗೆ ಪ್ರಶ್ನೆಗಳು ಏಳುತ್ತವೆ. ಪ್ರಕರಣದಲ್ಲಿ ಪೊಲೀಸ್ ಎಫ್ಐಆರ್ನಲ್ಲಿಯೂ ಗಂಭೀರ ವ್ಯತ್ಯಾಸಗಳಿವೆ. ಎಫ್ಐಆರ್ನ ಒಂದು ವಿಭಾಗದಲ್ಲಿ ತ್ವಿಶಾ ಅವರ ವಯಸ್ಸು 31 ವರ್ಷ ಮತ್ತು ಇನ್ನೊಂದು ವಿಭಾಗದಲ್ಲಿ 33 ವರ್ಷ ಎಂದು ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.
ಭೋಪಾಲ್ ಪೊಲೀಸರು ತಲೆಮರೆಸಿಕೊಂಡಿರುವ ಅವರ ಪತಿ, ವಕೀಲ ಸಮರ್ಥ್ ಸಿಂಗ್ ಅವರ ಮಾಹಿತಿ ನೀಡುವವರಿಗೆ 10,000 ರೂ.ಗಳ ಬಹುಮಾನವನ್ನು ಸೋಮವಾರ ಘೋಷಿಸಿದ್ದಾರೆ.
ಮೇ 12 ರಂದು ತ್ವಿಶಾ ಸಾವಿನ ನಂತರ ಕಟಾರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದಾಗಿನಿಂದ, ಭೋಪಾಲ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಗಿರಿಬಾಲಾ ಸಿಂಗ್ ಅವರ ಪುತ್ರ ಸಮರ್ಥ್ ಪರಾರಿಯಾಗಿದ್ದಾನೆ.
ಪೋಲೀಸರು ಪಾಸ್ಪೋರ್ಟ್ ಕಚೇರಿಗೆ ಪತ್ರ ಬರೆದು, ಸಮರ್ಥ್ ದೇಶ ಬಿಟ್ಟು ಹೋಗದಂತೆ ಅಮಾನತು ಮಾಡುವಂತೆ ಕೋರಿದ್ದಾರೆ ಎಂದು ವರದಿಯಾಗಿದೆ.
ಎಂಬಿಎ ಪದವೀಧರೆ, ಮಾಜಿ ಮಿಸ್ ಪುಣೆ, ತೆಲುಗು ಚಿತ್ರ ನಟಿ ಮತ್ತು ರೂಪದರ್ಶಿಯಾಗಿದ್ದ ತ್ವಿಶಾ, 2024ರಲ್ಲಿ ಡೇಟಿಂಗ್ ಆ್ಯಪ್ ಮೂಲಕ ಸಮರ್ಥ್ ಅವರನ್ನು ಭೇಟಿಯಾದರು ಮತ್ತು ಎರಡೂ ಕುಟುಂಬಗಳ ಅನುಮೋದನೆಯ ನಂತರ 2025ರ ಡಿಸೆಂಬರ್ನಲ್ಲಿ ಅವರನ್ನು ವಿವಾಹವಾದರು.
ಭೋಪಾಲ್ನ ಕಟಾರಾ ಹಿಲ್ಸ್ ಪ್ರದೇಶದಲ್ಲಿರುವ ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ತ್ವಿಶಾ ಪತ್ತೆಯಾಗಿದ್ದು, ಸಮರ್ಥ್ ಮತ್ತು ನೆರೆಹೊರೆಯವರು ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆ ವೇಳೆಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಮಾವ ಗಿರಿಬಾಲಾ ಸಿಂಗ್ ಅವರು, ತ್ವಿಶಾ ಆತ್ಮಹತ್ಯೆಯಿಂದ ಸಾವಿಗೀಡಾಗಿದ್ದಾರೆ ಎಂದು ಹೇಳಿದರೆ, ನೋಯ್ಡಾದ ಅವರ ಕುಟುಂಬವು ವರದಕ್ಷಿಣೆ ಕಿರುಕುಳದಿಂದ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದೆ.
Advertisement