

ಭುವನೇಶ್ವರ: ಒಡಿಶಾದ ಬೆರ್ಹಾಂಪುರದಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಯುವ ದಂಪತಿಗಳ ಮೇಲೆ ಬಿದಿರಿನ ದೊಣ್ಣೆಗಳಿಂದ ಭೀಕರವಾಗಿ ಹಲ್ಲೆ ನಡೆಸಿದ್ದು, ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯದಲ್ಲಿ ವೈರಲ್ ಆದ ನಂತರ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಜನನಿಬಿಡ ಗಿರಿ ರಸ್ತೆ ಪ್ರದೇಶದಲ್ಲೇ ಈ ಆಘಾತಕಾರಿ ಘಟನೆ ನಡೆದಿದ್ದು, ಹತ್ತಿರದಲ್ಲಿ ನಿಂತಿದ್ದ ಹಲವಾರು ಜನ ಮಾನವೀಯತೆ ಮರೆತು ಮುಖ ಪ್ರೇಕ್ಷಕರಾಗಿ ನೋಡಿದ್ದಾರೆ ವಿನಃ ಯಾರೊಬ್ಬರೂ ಜೋಡಿಯ ರಕ್ಷಣೆಗೆ ಮುಂದಾಗಲಿಲ್ಲ.
ಸುತ್ತಲೂ ನೂರಾರು ಜನ ಸೇರಿದ್ದರೂ ದುಷ್ಕರ್ಮಿಗಳು ದಂಪತಿಯನ್ನು ಅಟ್ಟಾಡಿಸಿ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ. ಪೊಲೀಸರು ಆರೋಪಿಗಳನ್ನು ಗುರುತಿಸಿದ್ದು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಆಶಿಶ್ ಸಾಹು ಮತ್ತು ಮುಖೇಶ್ ಸಾಹು ಸೇರಿ ಆರು ಜನರನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವಿಡಿಯೋದಲ್ಲಿ ರಸ್ತೆಯ ಮಧ್ಯದಲ್ಲಿ ಇಬ್ಬರು, ಬಿದಿರಿನ ಕೋಲುಗಳಿಂದ ದಂಪತಿಯನ್ನು ಹೊಡೆಯುತ್ತಿರುವುದನ್ನು ನೋಡಬಹುದು.
ಸಂತ್ರಸ್ತ ಮತ್ತು ದಾಳಿಕೋರರ ನಡುವೆ ಹಿಂದಿನಿಂದ ದ್ವೇಷವಿತ್ತು ಎನ್ನಲಾಗಿದೆ. "ದಾಳಿಕೋರರು ಮತ್ತು ಆ ವ್ಯಕ್ತಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಹಿಂದಿನ ದ್ವೇಷದಿಂದಾಗಿ ದಾಳಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡ ದಂಪತಿಯನ್ನು ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಎರಡು ಗುಂಪಿನ ಮಧ್ಯೆ ಇದ್ದ ವೈಯಕ್ತಿಕ ದ್ವೇಷ ಹಾಗೂ ಹಳೆಯ ದ್ವೇಷವೇ ಈ ದಾಳಿಗೆ ಮುಖ್ಯ ಕಾರಣ ಎನ್ನಲಾಗಿದೆ.
Advertisement