

ನವದೆಹಲಿ: ಒಂದು ರಾಷ್ಟ್ರ, ಒಂದು ಚುನಾವಣೆ ಪ್ರಸ್ತಾವನೆಯ ಕುರಿತು ಚರ್ಚಿಸುತ್ತಿರುವ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಅಧ್ಯಕ್ಷ ಪಿಪಿ ಚೌಧರಿ ಅವರು, ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವುದರಿಂದ ದೇಶಕ್ಕೆ 7 ಲಕ್ಷ ಕೋಟಿ ಉಳಿತಾಯವಾಗುತ್ತದೆ. ಈ ಹಣವನ್ನು ಅಭಿವೃದ್ಧಿ ಯೋಜನೆಗಳಿಗೆ ಬಳಸಬಹುದು ಎಂದು ಹೇಳಿದರು. ಪ್ರಸ್ತಾವನೆಗೆ ಸಂಬಂಧಿಸಿದಂತೆ ಎಲ್ಲಾ ಇಲಾಖೆಗಳಿಂದ ಬಂದ ಸಲಹೆಗಳ ಕುರಿತು ವಿವರವಾದ ವರದಿಯನ್ನು ಸಲ್ಲಿಸುವಂತೆ ಚೌಧರಿ ಗುಜರಾತ್ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದರು.
ಮೊದಲ ದಿನ, ಸಮಿತಿಯು ಗಾಂಧಿನಗರದ ಗಿಫ್ಟ್ ನಗರದಲ್ಲಿ ಅಧಿಕಾರಿಗಳು, ಮುಖ್ಯ ಕಾರ್ಯದರ್ಶಿ ಎಂಕೆ ದಾಸ್, ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಸಭೆಗಳನ್ನು ನಡೆಸಿತು. ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜೆಪಿಸಿ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಚೌಧರಿ, ರಾಜ್ಯ ಸರ್ಕಾರಿ ಅಧಿಕಾರಿಗಳು ವಿವರವಾದ ಪ್ರಸ್ತುತಿಯನ್ನು ನೀಡಿದರು. ಈ ಹಿಂದೆ ಪರಿಗಣಿಸದ ಹಲವಾರು ಪ್ರಮುಖ ವಿಷಯಗಳನ್ನು ಎತ್ತಿ ತೋರಿಸಿದರು.
ನಾವು ಸಮಗ್ರ ವರದಿಯನ್ನು ಸಿದ್ಧಪಡಿಸಲು ಅವರಿಗೆ ನಿರ್ದೇಶಿಸಿದ್ದೇವೆ. ಇದನ್ನು ನಂತರ ದೇಶಾದ್ಯಂತ ಇತರ ರಾಜ್ಯ ಸರ್ಕಾರಗಳು ಮಾದರಿಯಾಗಿ ಅಳವಡಿಸಿಕೊಳ್ಳಬಹುದು. ಇದರಿಂದ ಅವರು ತಮ್ಮ ವರದಿಗಳನ್ನು ಅದೇ ಸ್ವರೂಪದಲ್ಲಿ ಸಲ್ಲಿಸಬಹುದು ಎಂದು ಅವರು ಹೇಳಿದರು. ವರದಿಯು ಕೈಗಾರಿಕೆಗಳು, ಉತ್ಪಾದನಾ ನಷ್ಟಗಳು, ಕಾರ್ಮಿಕ ವಲಸೆ, ಉದ್ಯೋಗ, ಜಿಎಸ್ಟಿ ಸಂಗ್ರಹ, ಆರ್ಥಿಕತೆ, ಪ್ರವಾಸೋದ್ಯಮ ಮತ್ತು ಶಿಕ್ಷಣದ ಮೇಲಿನ ಪರಿಣಾಮವನ್ನು ಸಮಗ್ರವಾಗಿ ನಿರ್ಣಯಿಸಬೇಕು ಎಂದು ಚೌಧರಿ ಹೇಳಿದರು.
ಮುಖ್ಯ ಕಾರ್ಯದರ್ಶಿ ಹೆಚ್ಚಿನ ಚರ್ಚೆ ಮತ್ತು ಕ್ರಮಕ್ಕಾಗಿ ಸಮಗ್ರ ವರದಿಯನ್ನು ಸಲ್ಲಿಸಬೇಕು. ಇಂದಿನ ಚರ್ಚೆ ತುಂಬಾ ಸಕಾರಾತ್ಮಕ ಮತ್ತು ರಚನಾತ್ಮಕವಾಗಿತ್ತು" ಎಂದು ಅವರು ಹೇಳಿದರು. ಚೌಧರಿ ಅಧ್ಯಕ್ಷತೆಯ 41 ಸದಸ್ಯರ ಸಂಸದೀಯ ಸಮಿತಿಯು ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಸಂಬಂಧಿಸಿದ ಎರಡು ಪ್ರಸ್ತಾವಿತ ಕಾನೂನುಗಳನ್ನು ಪರಿಗಣಿಸುತ್ತಿದೆ. ಸಂವಿಧಾನ (129 ನೇ ತಿದ್ದುಪಡಿ) ಮಸೂದೆ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆ. ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದರಿಂದ ದೇಶಕ್ಕೆ 7 ಲಕ್ಷ ಕೋಟಿ ಉಳಿತಾಯವಾಗುತ್ತದೆ ಮತ್ತು ಇದು ದೇಶದ (ಜಿಡಿಪಿ) ಶೇ.1.6 ರಷ್ಟಿದೆ ಎಂದು ಚೌಧರಿ ಹೇಳಿದ್ದಾರೆ.
Advertisement