

ಮುಂಬೈ: ಪ್ರಧಾನಿ ನರೇಂದ್ರ ಮೋದಿ ವಿದೇಶಗಳ ಪ್ರವಾಸಕ್ಕೆ ವಿಪಕ್ಷಗಳ ಟೀಕೆ ನಡುವೆಯೇ ಆ ಬಣದಲ್ಲಿ ಗುರುತಿಸಿಕೊಂಡಿರುವ ಪ್ರಮುಖ ರಾಜಕೀಯ ನೇತಾರ ಶರದ್ ಪವಾರ್, ಮೋದಿ ನಡೆಯನ್ನು ಬೆಂಬಲಿಸಿದ್ದಾರೆ.
ವಿದೇಶಗಳ ಪ್ರವಾಸ ರದ್ದುಗೊಳಿಸುವುದು, ಚಿನ್ನ ಖರೀದಿಸದೇ ಇರುವುದು ಸೇರಿ ದೇಶದ ಜನತೆಗೆ ಮಿತವ್ಯಯಕ್ಕೆ ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ವಿದೇಶ ಪ್ರವಾಸ ಕೈಗೊಂಡಿರುವುದು ವಿಪಕ್ಷಗಳಿಂದ ಭಾರೀ ಟೀಕೆಗೆ ಒಳಗಾಗಿತ್ತು. ಆದರೆ ಈಗ ಶರದ್ ಪವಾರ್ ನೀಡಿರುವ ಹೇಳಿಕೆ ವಿಪಕ್ಷಗಳ ಮೈತ್ರಿಕೂಟದಲ್ಲಿ ಭಿನ್ನಾಭಿಪ್ರಾಯ ಮೂಡಿಸುವಂತಿದೆ.
ಮೋದಿ ವಿದೇಶದ ಪ್ರವಾಸದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎನ್ ಸಿಪಿ ನಾಯಕ ಶರದ್ ಪವಾರ್, ಪ್ರಧಾನಿ ಮೋದಿ ಜಾಗತಿಕ ಮಟ್ಟದಲ್ಲಿ ದೇಶದ ಪ್ರತಿಷ್ಠೆಯನ್ನು ಹೆಚ್ಚು ಮಾಡುವತ್ತ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಜೊತೆ ತಮಗೆ ಭಿನ್ನಾಭಿಪ್ರಾಯ ಇದೆಯಾದರೂ ಅವರು ವಿದೇಶಗಳಲ್ಲಿ ದೇಶದ ಮರ್ಯಾದೆಯನ್ನು ಎತ್ತಿ ಹಿಡಿಯುವ ಜವಾಬ್ದಾರಿ ಹೊಂದಿದ್ದಾರೆ ಎನ್ನುವುದನ್ನು ಗುರುತಿಸುವುದು ಬಹಳ ಮುಖ್ಯ ಎಂದು ಪವಾರ್ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಗೌರವವನ್ನು ಕಾಪಾಡುವ ವಿಷಯದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳು ಅಡ್ಡಿಯಾಗಬಾರದು, ದೇಶದ ಮಾನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಉಳಿಸಲು ಪ್ರಧಾನಮಂತ್ರಿ ಮೋದಿ ಶ್ರಮಿಸುತ್ತಿದ್ದಾರೆ ಎಂದು ಪವಾರ್ ಹೇಳಿದರು.
ದೇಶದ ಗೌರವವು ರಾಜಕೀಯ ಪೈಪೋಟಿಗಳಿಗಿಂತ ಮೇಲಿರಬೇಕು ಮತ್ತು ಯಾವತ್ತೂ ಪಕ್ಷಪಾತಿ ರಾಜಕೀಯದ ವಿಷಯವಾಗಬಾರದು ಎಂದು ಮಾಜಿ ಕೇಂದ್ರ ಸಚಿವರು ಹೇಳಿದ್ದಾರೆ.
"ಪ್ರಧಾನಮಂತ್ರಿ ಮೋದಿ ಅವರು ವಿದೇಶಗಳಲ್ಲಿ ಭಾರತದ ಪ್ರತಿಷ್ಠೆಯನ್ನು ಕಾಪಾಡಲು ಕೆಲಸ ಮಾಡುತ್ತಿದ್ದಾರೆ. ನಮ್ಮ ರಾಜಕೀಯ ಅಭಿಪ್ರಾಯಗಳು ವಿಭಿನ್ನವಾಗಿರಬಹುದು, ಆದರೆ ದೇಶದ ಮಾನ–ಗೌರವದ ವಿಷಯ ಬಂದಾಗ ರಾಜಕೀಯ ಭೇದಾಭಿಪ್ರಾಯಗಳನ್ನು ಒಳಗೆಳೆಯಬಾರದು," ಎಂದು ಅವರು ಹೇಳಿದರು.
Advertisement