

ನವದೆಹಲಿ: ರಾಜಕೀಯ ಪಕ್ಷ ಬದಲಾವಣೆಯನ್ನು ಟೀಕಿಸುವುದು ‘ಮಾನಹಾನಿಕರವಲ್ಲ’ ಎಂದು ಎಎಪಿ ತೊರೆದು ಬಿಜೆಪಿ ಸೇರಿರುವ ರಾಜ್ಯಸಭೆ ಸದಸ್ಯ.ರಾಘವ್ ಚಡ್ಡಾ(Raghav Chadha)ಗೆ ದೆಹಲಿ ಹೈಕೋರ್ಟ್ ಹೇಳಿದೆ.
ಗುರುವಾರ ರಾಘವ್ ಚಡ್ಡಾ ಅವರ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ರಾಜಕೀಯ ಟೀಕೆ ಮತ್ತು ಮಾನಹಾನಿ ನಡುವಿನ ಗಡಿ ತುಂಬಾ ಸೂಕ್ಷ್ಮವಾಗಿದೆ ಎಂದು ಅಭಿಪ್ರಾಯಪಟ್ಟಿತು.
ಅಂತೆಯೇ ಇತ್ತೀಚೆಗೆ AAP ತೊರೆದು BJP ಸೇರಿರುವ ರಾಘವ್ ಚಡ್ಡಾ, ತಮ್ಮ ರಾಜಕೀಯ ನಿರ್ಧಾರವನ್ನು ಟೀಕಿಸುವ ಸಾಮಾಜಿಕ ಜಾಲತಾಣದ ಪೋಸ್ಟ್ಗಳ ಬಗ್ಗೆ “ಅತಿಸೂಕ್ಷ್ಮ”ವಾಗಿರಬೇಕೇ ಎಂದು ನ್ಯಾಯಾಲಯ ಪ್ರಶ್ನಿಸಿತು.
ರಾಘವ್ ಚಡ್ಡಾ ಅವರು ತಮ್ಮ ವಿರುದ್ಧ ದುರುದ್ದೇಶಪೂರ್ವಕ ಮತ್ತು ಕೃತಕವಾಗಿ ಸೃಷ್ಟಿಸಲಾದ ಸಾಮಾಜಿಕ ಜಾಲತಾಣ ಪೋಸ್ಟ್ಗಳು ತಮ್ಮ ಖ್ಯಾತಿ ಹಾಗೂ ವ್ಯಕ್ತಿತ್ವ ಹಕ್ಕುಗಳಿಗೆ ಗಂಭೀರ ಹಾನಿ ಮಾಡುತ್ತಿವೆ ಎಂದು ಆರೋಪಿಸಿ ಹೈಕೋರ್ಟ್ನಲ್ಲಿ ಮೊಕದ್ದಮೆ ದಾಖಲಿಸಿದ್ದರು. ಚಡ್ಡಾ ಪರ ವಕೀಲರಾಗಿದ್ದ ಹಿರಿಯ ವಕೀಲ ರಾಜೀವ್ ನಾಯರ್, ಕೆಲವು ಪೋಸ್ಟ್ಗಳಲ್ಲಿ ಅಸಭ್ಯ ವಿಷಯವಿದ್ದು, ರಾಜಕಾರಣಿ “ಹಣಕ್ಕಾಗಿ ತಮ್ಮನ್ನು ಮಾರಿಕೊಂಡಿದ್ದಾರೆ” ಎಂಬ ರೀತಿಯಲ್ಲಿ ತೋರಿಸಲಾಗಿದೆ ಎಂದು ವಾದಿಸಿದರು
ಇಂತಹ ಆಕ್ಷೇಪಾರ್ಹ ವಿಷಯಗಳನ್ನು ತೆಗೆದುಹಾಕುವ ಮಧ್ಯಂತರ ಪರಿಹಾರದ ಕುರಿತು ತೀರ್ಪು ಕಾಯ್ದಿರಿಸಿದ ನ್ಯಾಯಮೂರ್ತಿ ಸುಬ್ರಮಣಿಯನ್ ಪ್ರಸಾದ್ ಅವರು, 'ವ್ಯಕ್ತಿಗೆ ಗೌರವಯುತವಾಗಿ ಬದುಕುವ ಹಕ್ಕು ಇದ್ದರೂ, ಸಂವಿಧಾನದ ಅಡಿಯಲ್ಲಿ ಇರುವ ಮಾತಿನ ಸ್ವಾತಂತ್ರ್ಯದ ಹಕ್ಕನ್ನು ಕಿತ್ತುಕೊಳ್ಳಲಾಗುವುದಿಲ್ಲ' ಎಂದು ಹೇಳಿದರು.
“ಇದು ಒಬ್ಬ ವ್ಯಕ್ತಿ ರಾಜಕೀಯ ನಿರ್ಧಾರವನ್ನು ಟೀಕಿಸಿರುವ ಕಾಮೆಂಟ್ ಮಾತ್ರ... ರಾಜಕೀಯ ನಾಯಕನಾಗಿ ನೀವು ಇಷ್ಟು ಸಂವೇದನಾಶೀಲರಾಗಬಹುದೇ?” ಎಂದು ನ್ಯಾಯಮೂರ್ತಿ ಪ್ರಸಾದ್ ವಿಚಾರಣೆ ವೇಳೆ ಪ್ರಶ್ನಿಸಿದರು.
“ಸ್ವಾತಂತ್ರ್ಯ ಪಡೆದ ದಿನದಿಂದಲೇ ನಾವು ಆರ್ ಕೆ ಲಕ್ಷ್ಮಣ್ ಅವರ ಕಾರ್ಟೂನ್ಗಳನ್ನು ನೋಡುತ್ತಾ ಬೆಳೆದಿದ್ದೇವೆ. ರಾಜಕೀಯ ಹಾಗೂ ಆರ್ಥಿಕ ನಿರ್ಧಾರಗಳ ಬಗ್ಗೆ ಅನೇಕ ರೀತಿಯಲ್ಲಿ ಟೀಕೆ ಮಾಡಲಾಗಿದೆ. ಈಗ ಸಾಮಾಜಿಕ ಜಾಲತಾಣಗಳು ಅದನ್ನು ಇನ್ನಷ್ಟು ವಿಸ್ತರಿಸಿವೆ. ಆದರೂ ಕೊನೆಯಲ್ಲಿ ಅದು ಒಬ್ಬ ವ್ಯಕ್ತಿಯ ಅಭಿಪ್ರಾಯದ ವ್ಯಾಪ್ತಿಯಲ್ಲೇ ಇರುತ್ತದೆ ಎಂದು ನ್ಯಾಯಮೂರ್ತಿಗಳು ಹೇಳಿದರು.
ಈ ವೇಳೆ ಚಡ್ಡಾ ಪರ ಹಿರಿಯ ವಕೀಲರು, “ಹಣಕ್ಕಾಗಿ ವ್ಯವಹರಿಸಿದ್ದಾರೆ” ಎಂಬ ಅರ್ಥ ಬರುವ ಪೋಸ್ಟ್ಗಳನ್ನು “ನ್ಯಾಯಸಮ್ಮತ ಟೀಕೆ” ಎಂದು ಕರೆಯಲು ಸಾಧ್ಯವಿಲ್ಲ ಎಂದು ವಾದಿಸಿದರು. ಆ ಪೋಸ್ಟ್ಗಳು “ಒಂದು ದಿನವೂ ಇರಬಾರದು” ಎಂದು ವಾದಿಸಿದಾಗ, ನ್ಯಾಯಮೂರ್ತಿ ಪ್ರಸಾದ್ ಅವರು ಪ್ರಥಮ ದೃಷ್ಟಿಗೆ ಅವು ಟೀಕೆಯಷ್ಟೇ ಕಾಣುತ್ತಿವೆ ಎಂದು ಪ್ರತಿಕ್ರಿಯಿಸಿದರು.
“ನನ್ನ ಪ್ರಕಾರ, ಪ್ರಾಥಮಿಕವಾಗಿ ನೋಡಿದರೆ ಇವೆಲ್ಲವೂ ರಾಜಕೀಯ ನಿರ್ಧಾರದ ವಿರುದ್ಧದ ಟೀಕೆಗಳಷ್ಟೇ. ಮಾನಹಾನಿ ಮತ್ತು ಟೀಕೆ ನಡುವಿನ ಗಡಿ ತುಂಬಾ ಸೂಕ್ಷ್ಮ, ಅಲ್ಲವೇ? ಆ ಗಡಿ ದಾಟುವುದು ತುಂಬಾ ಸುಲಭ. ಅದು ವ್ಯಕ್ತಿಯ ಗೌರವಯುತ ಬದುಕಿನ ಹಕ್ಕಿಗೆ ಧಕ್ಕೆಯುಂಟುಮಾಡಬಹುದು. ಅದೇ ಸಮಯದಲ್ಲಿ ನಿಮ್ಮ ಸಂವಿಧಾನದ Article 19(1)(a) ಅಡಿಯಲ್ಲಿ ಇರುವ ಮಾತಿನ ಸ್ವಾತಂತ್ರ್ಯದ ಹಕ್ಕನ್ನೂ ಕಸಿದುಕೊಳ್ಳಲಾಗುವುದಿಲ್ಲ ಎಂದು ನ್ಯಾಯಾಲಯ ತಿಳಿಸಿತು.
ಆಕ್ಷೇಪಾರ್ಹ ಪೋಸ್ಟ್ಗಳನ್ನು ಅಪರಿಚಿತ ವ್ಯಕ್ತಿಗಳು ಮಾಡಿರುವುದರಿಂದ, ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡಲು ಅಮಿಕಸ್ ಕ್ಯುರಿಯನ್ನು ನೇಮಿಸುವುದನ್ನು ನ್ಯಾಯಮೂರ್ತಿ ಸೂಚಿಸಿದರು. ಮಾನನಷ್ಟ ವಾಣಿಜ್ಯೀಕರಣ ಮತ್ತು ರಾಜಕೀಯ ಟೀಕೆ ನಡುವಿನ ವ್ಯತ್ಯಾಸವಿದೆ ಎಂದು ನ್ಯಾಯಮೂರ್ತಿ ಹೇಳಿದರು.
ಈ ಹಂತದಲ್ಲಿ ತಾವು ವ್ಯಕ್ತಿತ್ವ ಹಕ್ಕುಗಳ ಉಲ್ಲಂಘನೆಗಿಂತ ಮಾನಹಾನಿಯ ಆಧಾರದ ಮೇಲೆ ತಮ್ಮ ವಾದವನ್ನು ಮುಂದಿರಿಸುತ್ತಿದ್ದೇವೆ ಎಂದು ಚಡ್ಡಾ ಪರ ಹಿರಿಯ ವಕೀಲರು ಹೇಳಿದರು. ವಕೀಲರಾದ ಸತತ್ಯ ಆನಂದ್ ಮತ್ತು ನಿಖಿಲ್ ಅರಾಧೆ ಅವರ ಮೂಲಕ ಪ್ರತಿನಿಧಿಸಲ್ಪಟ್ಟ ಚಡ್ಡಾ, ತಮ್ಮ ಅರ್ಜಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು, AI ಆಧಾರಿತ ಮತ್ತು ಡೀಪ್ಫೇಕ್ ವಿಷಯಗಳನ್ನು ತಕ್ಷಣ ತೆಗೆದುಹಾಕುವಂತೆ ಮನವಿ ಮಾಡಿದ್ದಾರೆ.
ಕೃತಕ ಬುದ್ಧಿಮತ್ತೆ ಹಾಗೂ ಡೀಪ್ಫೇಕ್ ತಂತ್ರಜ್ಞಾನವನ್ನು ಅನುಮತಿಯಿಲ್ಲದೆ ಬಳಸಿ ತಿರುಚಿದ ವಿಷಯಗಳನ್ನು ಸೃಷ್ಟಿಸಿ ಹರಡುವುದು, ಚಡ್ಡಾ ಅವರ ಕಾನೂನುಬದ್ಧ ಹಾಗೂ ಸಂವಿಧಾನಾತ್ಮಕ ಹಕ್ಕುಗಳ ಗಂಭೀರ ಉಲ್ಲಂಘನೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಹಿಂದೆ ನಟಿಯರಾದ ಐಶ್ವರ್ಯಾ ರೈ ಬಚ್ಚನ್, ಅಭಿಷೇಕ್ ಬಚ್ಚನ್ ಮತ್ತು ಸಲ್ಮಾನ್ ಖಾನ್, ಶ್ರೀಶ್ರೀ ರವಿಶಂಕರ್ ಗುರೂಜಿ, ಪತ್ರಕರ್ತ ಸುಧೀರ್ ಚೌದರಿ, ಪಾಡ್ಕಾಸ್ಟರ್ ರಾಜ್ ಶಮಾನಿ ಮತ್ತು ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಸೇರಿದಂತೆ ಹಲವಾರು ಸಾರ್ವಜನಿಕ ವ್ಯಕ್ತಿಗಳು ತಮ್ಮ ವ್ಯಕ್ತಿತ್ವ ಮತ್ತು ಪ್ರಚಾರ ಹಕ್ಕುಗಳ ರಕ್ಷಣೆಗೆ ಹೈಕೋರ್ಟ್ ಮೊರೆ ಹೋಗಿದ್ದರು. ಅವರಿಗೆ ಹೈಕೋರ್ಟ್ ಮಧ್ಯಂತರ ಪರಿಹಾರ ನೀಡಿತ್ತು. ಇತ್ತೀಚೆಗೆ ಕ್ರಿಕೆಟಿಗ ಗೌತಮ್ ಗಂಭೀರ್ ಮತ್ತು ನಟಿಯರಾದ ಸೋನಾಕ್ಷಿ ಸಿನ್ಹಾ, ನಟ ವಿವೇಕ್ ಒಬೆರಾಯ್, ನಟ ಅಲ್ಲು ಅರ್ಜುನ್, ಹಾಗೂ ಕಾಂಗ್ರೆಸ್ ಸಂಸದ ಶಶಿತರೂರ್ ಅವರ ವ್ಯಕ್ತಿತ್ವ ಹಕ್ಕುಗಳಿಗೂ ಹೈಕೋರ್ಟ್ ಮಧ್ಯಂತರ ರಕ್ಷಣೆ ನೀಡಿದೆ.
Advertisement