

ಲಖನೌ: ಉತ್ತರ ಪ್ರದೇಶದ ಹಮೀರ್ಪುರ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಒಂದು ಭಾಗ ಕುಸಿದು ಬಿದ್ದಿದ್ದು, ಪರಿಣಾಮ ಆರು ಕಾರ್ಮಿಕರು ಮೃತಪಟ್ಟು ಮೂವರು ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ಬೆಟ್ವಾ ನದಿಯ ಮೇಲಿನ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ಪರ್ಸಾನಿ ಮತ್ತು ಕಂಡೌರ್ ಗ್ರಾಮಗಳ ಮಧ್ಯೆ ಈ ಅವಘಡ ಸಂಭವಿಸಿದೆ.
ಮೃತರನ್ನು ಲೋಕೇಂದ್ರ (22), ಕುಲದೀಪ್ ನಿಶಾದ್ (19), ಸಾವಂತ್ ಯಾದವ್ (28), ಸಭಾಜೀತ್ (30), ಪುಷ್ಪೇಂದ್ರ ಚೌಹಾಣ್ (34) ಮತ್ತು ರಾಜೇಶ್ ಪಾಲ್ (42) ಎಂದು ಗುರುತಿಸಲಾಗಿದೆ.
ಸೇತುವೆಯ ಕಂಬದಡಿ ಸಿಲುಕಿದ್ದ ಮೂವರು ಕಾರ್ಮಿಕರನ್ನು ರಕ್ಷಿಸಿ ಹಮೀರ್ಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.
ಮೌರಾಕಂದರ್ನಿಂದ ಕುರಾರಾ ಸಂಪರ್ಕಿಸುವ ಸೇತುವೆಯ ಸ್ಲ್ಯಾಬ್ ಭಾಗವು ಭಾರೀ ಗಾಳಿ-ಮಳೆಯ ನಡುವೆ ಏಕಾಏಕಿ ಕುಸಿದು ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಮಗಾರಿ ನಡೆಸುತ್ತಿದ್ದ ಹಲವು ಕಾರ್ಮಿಕರು ಸೇತುವೆಯ ಮೇಲ್ಭಾಗದಲ್ಲೇ ಮಲಗಿದ್ದ ವೇಳೆ ಈ ದುರಂತ ಸಂಭವಿಸಿದೆ. ಕುಸಿದ ಅವಶೇಷಗಳಡಿ ಸಿಲುಕಿದ ಕಾರ್ಮಿಕರನ್ನು ರಕ್ಷಿಸಲು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು ಎಂದು ಹೇಳಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅವಶೇಷಗಳಡಿ ಇನ್ನೂ ಯಾರಾದರೂ ಸಿಲುಕಿಕೊಂಡಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ತೆರವು ಕಾರ್ಯಾಚರಣೆ ಮುಂದುವರೆಸಲಾಗಿದೆ ಎಂದು ಲಾಲ್ಪುರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ರಾಜೇಶ್ ಕುಮಾರ್ ಸರೋಜ್ ಅವರು ತಿಳಿಸಿದ್ದಾರೆ.
Advertisement