

ನವದೆಹಲಿ: ಝಡ್ (Z) ಶ್ರೇಣಿಯ ಭದ್ರತೆ ಹೊಂದಿರುವ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಭಯೋತ್ಪಾದಕರಿಂದ ಹತ್ಯೆ ಮಾಡಲಾಗುವುದು ಎಂಬ ಬೆದರಿಕೆ ಸಂದೇಶಗಳು ಮಂಗಳವಾರ ಬಂದಿವೆ.
ಈ ಹಿನ್ನೆಲೆಯಲ್ಲಿ ಅವರ ಕಚೇರಿಯು ಹೆಚ್ಚಿನ ಭದ್ರತೆಗಾಗಿ ಹಾಗೂ ಈ ವಿಷಯದ ಕುರಿತು ಸಮಗ್ರ ತನಿಖೆ ನಡೆಸುವಂತೆ ಗೃಹ ಸಚಿವಾಲಯವನ್ನು ಒತ್ತಾಯಿಸಿದೆ. ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಮುಖ್ಯಸ್ಥರಾಗಿರುವ ಪಾಸ್ವಾನ್ ಅವರು ಪ್ರಸ್ತುತ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವರಾಗಿದ್ದಾರೆ.
"ಇಂದು ಸಚಿವಾಲಯಕ್ಕೆ ಸಹಿ ಇಲ್ಲದ ಸಂದೇಶವೊಂದು ಬಂದಿದ್ದು, ಅದರಲ್ಲಿ ಎರಡು ಮೊಬೈಲ್ ಸಂಖ್ಯೆಗಳಿದ್ದವು. ಅದನ್ನು ತೆರೆದು ನೋಡಿದಾಗ, ಅದರಲ್ಲಿ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವರ ಜೀವಕ್ಕೆ ನೇರ ಬೆದರಿಕೆ ಇರುವುದು ಕಂಡುಬಂದಿದೆ.
ಅದರಲ್ಲಿ ಮೊಬೈಲ್ ಸಂಖ್ಯೆ ಹೊರತುಪಡಿಸಿ, ಕಠೋರ ಭಯೋತ್ಪಾದಕರಿಂದ ನಿಮ್ಮನ್ನು ಶೀಘ್ರದಲ್ಲೇ ಕೊಲ್ಲಲಾಗುವುದು ಎಂದು ಸಂದೇಶದಲ್ಲಿ ಬರೆಯಲಾಗಿತ್ತು ಎಂದು ಪಾಸ್ವಾನ್ ಅವರ ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಅಲೋಕ್ ಕುಮಾರ್ ಸಿಂಗ್, ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಬೆದರಿಕೆಯ ನೇರ ಸ್ವರೂಪ ಮತ್ತು 'ಕಠೋರ ಭಯೋತ್ಪಾದಕರು' ಎಂಬ ಉಲ್ಲೇಖವು ತೀವ್ರ ಕಳವಳಕಾರಿ ವಿಷಯವಾಗಿದ್ದು, ಸಚಿವರ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಗಂಭೀರ ಆತಂಕವನ್ನು ಉಂಟುಮಾಡಿದೆ ಎಂದು ಅವರು ಅಲೋಕ್ ಕುಮಾರ್ ಸಿಂಗ್ ಉಲ್ಲೇಖಿಸಿದ್ದಾರೆ.