

ಕಠ್ಮಂಡು: ಕೃಷ್ಣ ಜನ್ಮಾಷ್ಟಮಿ ದಿನವಾದ ನೇಪಾಳದಲ್ಲಿ ಇಂದು ದೊಡ್ಡ ಪವಾಡವೊಂದು ನಡೆದಿದೆ. ಭೀಕರ ಪ್ರವಾಹ ಸಂಭವಿಸಿದ 9 ದಿನಗಳ ನಂತರ ಅನ್ನ, ನೀರು ಇಲ್ಲದೆ ಸುರಂಗ ಮಾರ್ಗವೊಂದರಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರೊಬ್ಬರು 'ಹರೇ ಕೃಷ್ಣ' ಎಂದುಕೊಂಡೆ ಬದುಕುಳಿದಿದ್ದಾರೆ.
ನಿರಂತರವಾಗಿ 'ಹರೇ ಕೃಷ್ಣ' ಮಂತ್ರ ಪಠಣ: ಕೃಷ್ಣ ಜನ್ಮಾಷ್ಟಮಿ ದಿನದಂದೇ ಅವರನ್ನು ರಕ್ಷಿಸಲಾಗಿದೆ. ಹೌದು, ಜಗತ್ತು ಕಂಡು ಕೇಳರಿಯದ ರೀತಿಯಲ್ಲಿ ಪ್ರಕೃತಿ ವಿಕೋಪಕ್ಕೆ ನಲುಗಿದ ನೇಪಾಳದಲ್ಲಿ ಕಳೆದ 9 ದಿನಗಳಿಂದ ಸುರಂಗವೊಂದರಲ್ಲಿ ಸಿಕ್ಕಿಬಿದ್ದಿದ್ದ ಜಲವಿದ್ಯುತ್ ಯೋಜನೆಯ ಇಬ್ಬರನ್ನು ಇಂದು ರಕ್ಷಿಸಲಾಗಿದೆ. ಅವರಲ್ಲಿ ಒಬ್ಬರು ಸಂಕಷ್ಟಕ್ಕೆ ಸಿಲುಕಿದಾಗಿನಿಂದ ನಿರಂತರವಾಗಿ 'ಹರೇ ಕೃಷ್ಣ' ಮಂತ್ರವನ್ನು ಪಠಿಸುತ್ತಿದ್ದಾಗಿ ತಿಳಿಸಿದ್ದಾರೆ.
ತ್ರಿಶೂಲಿ 3A ಜಲವಿದ್ಯುತ್ ಯೋಜನೆಯ ಸುರಂಗದಿಂದ ರಕ್ಷಿಸಲ್ಪಟ್ಟ ಇಬ್ಬರು ಕಾರ್ಮಿಕರಲ್ಲಿ ಒಬ್ಬರಾಗಿರುವ ಮಧೇಶ್ ಪ್ರಾಂತ್ಯದ ಸಪ್ತಾರಿ ಜಿಲ್ಲೆಯ ನಿವಾಸಿ ಹಾಗೂ ನೇಪಾಳ ವಿದ್ಯುತ್ ಪ್ರಾಧಿಕಾರದ ಉದ್ಯೋಗಿಯಾಗಿರುವ 30 ವರ್ಷದ ಸಂಜಯ್ ಸಾಹ್ ಭದ್ರತಾ ಸಿಬ್ಬಂದಿಗೆ ಈ ರೀತಿ ತಿಳಿಸಿದರು.
ಸುರಕ್ಷಿತ ಸ್ಥಳಕ್ಕೆ ಕರೆತರಲ್ಪಟ್ಟ ತಕ್ಷಣ ಮಾತನಾಡಿದ ಅವರು, "ನಾನು ಕಳೆದ ಒಂಬತ್ತು ದಿನಗಳಿಂದ ಹರೇ ಕೃಷ್ಣ ಮಹಾಮಂತ್ರವನ್ನು ಪಠಿಸುತ್ತಿದ್ದೆ ಎಂದು ಹೇಳಿದರು. ಶ್ರೀಕೃಷ್ಣನ ಜನ್ಮದಿನವನ್ನು ಆಚರಿಸುವ ಹಿಂದೂ ಹಬ್ಬವಾದ 'ಕೃಷ್ಣ ಜನ್ಮಾಷ್ಟಮಿ'ಯಂದೇ ಅವರ ರಕ್ಷಣಾ ಕಾರ್ಯ ನಡೆದದ್ದು ವಿಶೇಷವಾಗಿದೆ.
ಸೇನಾ ಆಸ್ಪತ್ರೆಗೆ ಏರ್ ಲಿಫ್ಟ್ : ಭದ್ರತಾ ಅಧಿಕಾರಿಗಳ ಪ್ರಕಾರ, ಸಾಹ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ತಕ್ಷಣದ ಯಾವುದೇ ಆರೋಗ್ಯ ಸಮಸ್ಯೆಗಳಿರಲಿಲ್ಲ. ವೈದ್ಯಕೀಯ ತಪಾಸಣೆಗಾಗಿ ಅವರನ್ನು ತ್ರಿಶೂಲಿಯ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ರಕ್ಷಿಸಲ್ಪಟ್ಟ ಇನ್ನೊಬ್ಬ ಕಾರ್ಮಿಕ, 45 ವರ್ಷದ ಕಬೀರ್ ಮಹರ್ಜನ್ ಅವರಿಗೆ ಆರೋಗ್ಯದ ಸಮಸ್ಯೆಗಳಿದ್ದ ಕಾರಣ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕಠ್ಮಂಡುವಿನ ಛೌನಿಯಲ್ಲಿರುವ ನೇಪಾಳ ಸೇನಾ ಆಸ್ಪತ್ರೆಗೆ ವಿಮಾನದ ಮೂಲಕ (ಏರ್ಲಿಫ್ಟ್) ಸ್ಥಳಾಂತರಿಸಲಾಯಿತು.
ಯೋಜನೆಯಲ್ಲಿ ಫೋರ್ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಾಹ್, ಪ್ರವಾಹ ಕಾಣಿಸಿಕೊಂಡ ಇತರರು ಸ್ಥಳದಿಂದ ಪಲಾಯನ ಮಾಡಿದಾಗ ನಾನು ಅಲ್ಲಿಯೇ ಉಳಿದುಕೊಂಡಿದ್ದೆ. ಏಕೆಂದರೆ ಸುರಕ್ಷತೆ ಜವಾಬ್ದಾರಿ ತನ್ನ ಮೇಲಿತ್ತು. ಕಂಟ್ರೋಲ್ ರೂಮ್ನಲ್ಲಿ ಕೆಲಸ ಮಾಡುತ್ತಿದ್ದೆ. ಎಲ್ಲರ ಪ್ರಾಣವನ್ನು ಉಳಿಸುವುದು ನನ್ನ ಜವಾಬ್ದಾರಿಯಾಗಿತ್ತ. ಇತರರಿಗೆ ಅಲ್ಲಿಂದ ಓಡಿಹೋಗುವಂತೆ ತಾನೇ ಸೂಚಿಸಿದ್ದಾಗಿ ಸಾಹ್ ಹೇಳಿದರು. ಆದರೆ ಅವರು ಅಲ್ಲಿಂದ ಹೊರಬರುವಷ್ಟರಲ್ಲಿ ತಮಗೆ ತಪ್ಪಿಸಿಕೊಳ್ಳಲು ತಡವಾಗಿತ್ತು ಎಂದು ತಿಳಿಸಿದರು.
ಸುರಂಗದೊಳಗೆ ಇನ್ನೂ ಕಾರ್ಮಿಕರು ಸಿಲುಕಿದ್ದಾರೆಯೇ: ಸುರಂಗದೊಳಗೆ ಇನ್ನೂ ಇತರ ಕಾರ್ಮಿಕರು ಸಿಕ್ಕಿಹಾಕಿಕೊಂಡಿರುವ ಸಾಧ್ಯತೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಮ್ಮ ಹತ್ತಿರದಲ್ಲಿದ್ದ ಮೂವರು ಅಥವಾ ನಾಲ್ವರು ವ್ಯಕ್ತಿಗಳೊಂದಿಗೆ ಮಾತನಾಡಲು ಅಥವಾ ಶಬ್ದ ಮಾಡುವ ಮೂಲಕ ಸಂಪರ್ಕ ಸಾಧಿಸಲು ಸಾಧ್ಯವಾಯಿತು ಎಂದು ಸಾಹ್ ಹೇಳಿದರು. ಆದಾಗ್ಯೂ, ವಿದ್ಯುತ್ ಸ್ಥಾವರ (ಪವರ್ಹೌಸ್) ಸಮೀಪ ಸೇರಿದಂತೆ ಸುರಂಗದ ಇನ್ನೂ ಆಳದ ಭಾಗದಲ್ಲಿ ಹೆಚ್ಚಿನ ಜನರು ಸಿಕ್ಕಿಹಾಕಿಕೊಂಡಿರಬಹುದು ಎಂದು ಸಾಹ್ ಹೇಳಿದರು.
"ಎಲ್ಲರಿಗೂ ಅಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿರಲಿಕ್ಕಿಲ್ಲ. ಸುರಂಗವು ಬಹಳ ಉದ್ದವಾಗಿದೆ," ಎಂದು ಹೇಳಿದ ಅವರು, ಪ್ರವಾಹದ ನೀರಿನ ರಭಸವು ಕೆಲವು ಕಾರ್ಮಿಕರನ್ನು ಸುರಂಗದ ಇನ್ನೂ ಆಳದ ಭಾಗಕ್ಕೆ ಕೊಚ್ಚಿಕೊಂಡು ಹೋಗಿರಬಹುದು ಎಂದು ಅಭಿಪ್ರಾಯಪಟ್ಟರು. ಉಳಿದ ಕಾರ್ಮಿಕರನ್ನು ಪತ್ತೆಹಚ್ಚುವ ಪ್ರಯತ್ನಗಳು ಮುಂದುವರಿದಿರುವಂತೆಯೇ, ನೇಪಾಳ ಸೇನೆಯ ನೇತೃತ್ವದ ಭದ್ರತಾ ಪಡೆಯು ವಿಶೇಷ ಉಪಕರಣಗಳನ್ನು ಬಳಸಿಕೊಂಡು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ.