

ನವದೆಹಲಿ: ಕೇಂದ್ರ ಸಚಿವ ಹಾಗೂ ಬಿಹಾರದ ಬೇಗುಸರಾಯ್ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಗಿರಿರಾಜ್ ಸಿಂಗ್ ಅವರಿಗೆ ಅನಾಮಧೇಯ ಪತ್ರದ ಮೂಲಕ ಕೊಲೆ ಬೆದರಿಕೆ ಬಂದಿದೆ. ಈ ಘಟನೆ ದೇಶದ ರಾಜಕೀಯ ಮತ್ತು ಭದ್ರತಾ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ.
ಗುರುವಾರ ನವದೆಹಲಿಯಲ್ಲಿರುವ ಗಿರಿರಾಜ್ ಸಿಂಗ್ ಅವರ ಕಚೇರಿ ವಿಳಾಸಕ್ಕೆ ಅನಾಮಧೇಯ ಪತ್ರ ಬಂದಿತ್ತು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
“ನಿಮ್ಮನ್ನು ಶೀಘ್ರದಲ್ಲೇ ಕಟ್ಟರ್ ಉಗ್ರರು ಹತ್ಯೆ ಮಾಡಲಿದ್ದಾರೆ” ಎಂಬ ಬೆದರಿಕೆ ಸಂದೇಶದ ಜೊತೆಗೆ ಎರಡು ಮೊಬೈಲ್ ಸಂಖ್ಯೆಗಳನ್ನೂ ಪತ್ರದಲ್ಲಿ ಬರೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇಂಗ್ಲಿಷ್ನಲ್ಲಿ ಟೈಪ್ ಮಾಡಲಾದ ಈ ಪತ್ರದಲ್ಲಿ "You will be killed shortly by hardcore terrorists" (ಕಟ್ಟಾ ಉಗ್ರರು ನಿಮ್ಮನ್ನು ಶೀಘ್ರದಲ್ಲೇ ಕೊಲ್ಲಲಿದ್ದಾರೆ) ಎಂಬ ನೇರ ಎಚ್ಚರಿಕೆ ನೀಡಲಾಗಿದೆ. ಇದರೊಂದಿಗೆ ಪತ್ರದ ಕೆಳಗೆ ಎರಡು ಮೊಬೈಲ್ ಸಂಖ್ಯೆಗಳನ್ನು (9666010152 ಮತ್ತು 8074731849) ಕೂಡ ನಮೂದಿಸಲಾಗಿದೆ.
ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಸತೀಶ್ ಕುಮಾರ್ ಹಿಮಾಂಶು ಕೂಡ ಘಟನೆಯನ್ನು ದೃಢಪಡಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಸದ್ಯ ಪೊಲೀಸರು ಪತ್ರ ಎಲ್ಲಿಂದ ಬಂದಿದೆ ಎಂಬುದನ್ನು ಪತ್ತೆಹಚ್ಚಲು ಹಾಗೂ ಬೆದರಿಕೆ ನೀಡಿರುವ ಉದ್ದೇಶವೇನು ಎಂಬುದನ್ನು ತಿಳಿಯಲು ತನಿಖೆ ನಡೆಸುತ್ತಿದ್ದಾರೆ.
ಚಿರಾಗ್ ಪಾಸ್ವಾನ್ಗೂ ಇದೇ ರೀತಿಯ ಬೆದರಿಕೆ
ಇದೇ ರೀತಿಯ ಬೆದರಿಕೆ ಕೆಲ ದಿನಗಳ ಹಿಂದೆ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರಿಗೂ ಬಂದಿತ್ತು. ಅಂಚೆ ಮೂಲಕ ಬಂದ ಪತ್ರದಲ್ಲಿ ‘ಕಟ್ಟರ್ ಉಗ್ರರಿಂದ ಹತ್ಯೆ ಮಾಡಲಾಗುವುದು’ ಎಂದು ಬೆದರಿಕೆ ಹಾಕಲಾಗಿತ್ತು.
ಈ ಪ್ರಕರಣದಲ್ಲೂ ಪೊಲೀಸರು ಎಫ್ಐಆರ್ ದಾಖಲಿಸಿ, ಪತ್ರ ಕಳುಹಿಸಿದ ವ್ಯಕ್ತಿಯನ್ನು ಪತ್ತೆಹಚ್ಚಲು ಹಾಗೂ ಬೆದರಿಕೆಯ ಹಿಂದಿನ ಉದ್ದೇಶವನ್ನು ತಿಳಿಯಲು ತನಿಖೆ ಆರಂಭಿಸಿದ್ದರು.