ಬೆಂಗಳೂರು: ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ದಿನೇಶ್ ಗುಂಡುರಾವ್ ಅವರ ಸಚಿವ ಸ್ಥಾನದ ಮೇಲೆ ಕರಿನೆರಳು ಬಿದ್ದಂತಿದೆ
ಸರ್ಕಾರಿ ಭೂ ಒತ್ತುವರಿ ಮಾಡಿರುವ ಆರೋಪದ ಮೇಲೆ ಸಚಿವ ದಿನೇಶ್ ಗುಂಡುರಾವ್ ಅವರನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಭ್ರಷ್ಟ ಅಧಿಕಾರಿಗಳನ್ನು ಸಂಪುಟದಿಂದ ಕೈಬಿಡುವಂತೆ ವಿರೋಧ ಪಕ್ಷಗಳಿಂದ ಹಾಗೂ ಸಾಮಾಜಿಕ ಕಾರ್ಯಕರ್ತ ಎಸ್.ಆರ್ ಹಿರೇಮಠ್ ಅವರಿಂದ ಒತ್ತಡ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಅವರು, ಭ್ರಷ್ಟಾಚಾರ ಆರೋಪ ಹೊತ್ತಿರುವ ದಿನೇಶ್ ಗುಂಡುರಾವ್ ಅವರನ್ನು ಸಂಪುಟದಿಂದ ಕೈಬಿಡುವ ಚಿಂತನೆ ನಡೆಸಿದ್ದಾರೆ.
ಬೆಳಗಾವಿಯಲ್ಲಿ ನಡೆಯುವ ವಿಧಾನಸಭಾ ಅಧಿವೇಶನಗೂ ಮುನ್ನ ದಿನೇಶ್ ಗುಂಡುರಾವ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈ ಸಂಬಂಧ ಹಿರಿಯ ಮುಖಂಡರಿಂದ ಸಭೆ ನಡೆಸಲಿದ್ದು, ಗುಂಡರಾವ್ ಅವರನ್ನು ಸಂಪುಟ ಸಭೆಯಲ್ಲಿ ಮುಂದುವರೆಸಬೇಕೋ ಅಥವಾ ಕೈಬಿಡಬೇಕೋ ಎಂಬುದರ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಚಿವ ದಿನೇಶ್ ಗುಂಡೂರಾವ್ ಕುಟುಂಬವು ಸರ್ಕಾರಿ ಜಮೀನು ಒತ್ತುವರಿ ಮಾಡಿರುವುದನ್ನು ಬೆಂಗಳೂರು ಉತ್ತರ(ಹೆಚ್ಚುವರಿ) ತಾಲೂಕಿನ ತಹಸೀಲ್ದಾರ್ ವರದಿ ಸಲ್ಲಿಸಿದ್ದರು.
ಸಚಿವ ದಿನೇಶ್ ಗುಂಡೂರಾವ್ ಕುಟಂಬವು ನವರತ್ನ ಅಗ್ರಹಾರದಲ್ಲಿ 40.29 ಎಕರೆ ಜಮೀನು ಹೊಂದಿದೆ. ಇದರಲ್ಲಿ 32.11 ಎಕರೆ ಕ್ರಯಕ್ಕೆ ಪಡೆದಿದ್ದಾರೆ. 8.11 ಎಕರೆ ಒತ್ತುವರಿಯಾಗಿದ್ದು ಮೇಲ್ನೋಟಕ್ಕೆ ಕಂಡುಬರುತ್ತದೆ. ವಾಸ್ತವವಾಗಿ ಮೋಜಣಿದಾರರು ಅಳತೆ ಮಾಡಲಾಗಿ ಸರ್ವೆ ನಂಬರ್ 13ರಲ್ಲಿ 5.09 ಎಕರೆ, ಸರ್ವೇ ನಂ.30ರಲ್ಲ 5 ಎಕರೆ ಒತ್ತುವರಿ ಮಾಡಲಾಗಿದೆ ಎಂದು ವರದಿ ಹೇಳುತ್ತಿದೆ.
ನಗರ ಜಿಲ್ಲಾಧಿಕಾರಿ ನೀಡಿರುವ ವರದಿ ದಿನೇಶ್ ಅವರ ಸಚಿವ ಕುರ್ಚಿಯನ್ನು ಅಲ್ಲಾಡಿಸುತ್ತಿದೆ ಎಂದು ಇದರಿಂದ ದೃಢಪಟ್ಟಿದೆ.
Advertisement