ಬೆಂಗಳೂರು: ಗುರುವಾರ ನಡೆದಿದ್ದ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯ ಕೊನೆಯಲ್ಲಿ ರಾಜಕೀಯ ಮೀರಿ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ನರೇಂದ್ರ ಮೋದಿ ಕರೆ ನೀಡಿದ್ದರು.
ಇದರ ಬೆನ್ನಲ್ಲೇ ಶುಕ್ರವಾರ ಕಾರ್ಯಕರ್ತರು ಏನು ಮಾಡಬೇಕು ಎಂದು ಕಾರ್ಯಬೇಕೆಂದು ಕಾರ್ಯಯೋಜನೆ ಸಿದ್ಧವಾಗಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪಕ್ಷದ ಕಾರ್ಯಕರ್ತರಿಗೆ ಸಾಮಾಜಿಕ ಚಟುವಟಿಕೆ ಹೊಣೆಗಾರಿಕೆ ನಿಗದಿಪಡಿಸಿದ್ದಾರೆ. ರಾಷ್ಟ್ರೀಯ ಕಾರ್ಯ ಕಾರಿಣಿಯ ದಿಕ್ಸೂಚಿ ಭಾಷಣ ಮಾಡಿದ ಅಮಿತ್ ಶಾ, ಕಾರ್ಯಕರ್ತರ ಜವಾಬ್ದಾರಿ ಯನ್ನು ಪ್ರಸ್ತಾಪಿಸಿದರು. ಕಾರ್ಯಕರ್ತರು ರಾಜಕೀಯ ಚಟುವಟಿಕೆಗೆ ಸೀಮಿತವಾಗದೆ, ಸಾಮಾಜಿಕ ಆಂದೋಲನದಲ್ಲಿ ತೊಡಗಬೇಕು ಎನ್ನುವುದು ತಮ್ಮ ಉದ್ದೇಶ ಎಂದರು.
1. ಮಲಹೊರುವ ಪದ್ಧತಿ
ನಿರ್ಮೂಲನೆ ಮಲಹೊರುವ ಪದ್ಧತಿಯನ್ನು ದೇಶದಿಂದ ನಿರ್ಮೂಲನೆ ಮಾಡುವ ಉದ್ದೇಶದಿಂದ ಬಿಜೆಪಿ ವಿಶೇಷ ಅಭಿಯಾನ ಕೈಗೆತ್ತಿಕೊಂಡಿದೆ. ಈ ಕುರಿತು ವಿವರಣೆ ನೀಡಿರುವ ಅಮಿತ್ ಶಾ, ಸ್ವಾತಂತ್ರ್ಯ ಬಂದು 68 ವರ್ಷವಾದರೂ 23 ಲಕ್ಷಕ್ಕೂ ಹೆಚ್ಚು ಮಂದಿ ಸಕ್ರಿಯ ಕರ್ಮಚಾರಿಗಳು ಇಂದಿಗೂ ಇರುವುದು ದುರಂತವಾಗಿದೆ. ಮಲಹೊರುವ ಪದ್ಧತಿ ಮಾನವತೆಗೆ ಕಳಂಕ ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಈ ವ್ಯವಸ್ಥೆ ಸರಿಯಲ್ಲ ಎಂದಿದ್ದರು. ಆದರೆ, ಗಾಂಧಿ ಹೆಸರಿನ ವಾರಸುದಾರಿಕೆಯಂತೆ ಅಧಿಕಾರ ನಡೆಸಿದ ಕಾಂಗ್ರೆಸ್ಗೆ ಈ ಸಮಸ್ಯೆಯನ್ನು ಹೋಗಲಾಡಿಲು ಸಾಧ್ಯವಾಗಿಲ್ಲ, ನಾವು ಅದನ್ನು ಹೋಗಲಾಡಿಸಬೇಕಿದೆ. ಇದೊಂದು ದೊಡ್ಡ ಆಂದೋಲವನವಾಗಬೇಕಿದೆ ಎಂದರು.
2. ಬೇಟಿ ಬಚಾವೋ,ಬೇಟಿ ಪಡಾವೋ
ಭ್ರೂಣಹತ್ಯೆ ತಡೆಯುವುದು, ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸುವುದು ಮತ್ತು ಶಿಕ್ಷಣ ಕೊಡಿಸಿ ಅವರನ್ನು ಸ್ವಾವಲಂಬಿಯನ್ನಾಗಿ ಬದುಕು ರೂಪಿಸಿಕೊಳ್ಳುವಂತೆ ಮಾಡುವುದು ನಮ್ಮ ಕಳಕಳಿ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ.
3. ಸ್ವಚ್ಛ ಭಾರತ ನಿರಂತರ
ಸ್ವಚ್ಛ ಭಾರತ ಅಭಿಯಾನವನ್ನು ನಿರಂತರಗೊಳಿಸಲು ಬಿಜೆಪಿ ತೀರ್ಮಾನಿಸಿದೆ. ಸ್ವಚ್ಛ ಭಾರತ ಶಾಶ್ವತ ಯೋಜನೆ. ಜನರ ಮನಸ್ಥಿತಿಯನ್ನು ಬದಲಿಸುವ ಮೂಲಕ ಅವರೂ ಸ್ವಚ್ಛವಾಗಿ ದೇಶವನ್ನೂ ಸ್ವಚ್ಛವಾಗಿರುವಂತೆ ಮಾಡುವ ಆಂದೋಲನವಿದು. ಇದರಲ್ಲಿ ಬಿಜೆಪಿ ಕಾರ್ಯಕರ್ತರು ಹೆಚ್ಚುಹೆಚ್ಚು ತೊಡಗಬೇಕು. ಬೇರೆಯವರನ್ನೂ ತೊಡಗಿಸಲು ಪ್ರೇರೇಪಿಸಬೇಕು.
4. ನಮಾಮಿ ಗಂಗೆ
ನಮಾಮಿ ಗಂಗೆ ಅಭಿಯಾನ ಕೇವಲ ಗಂಗಾನದಿಯ ಸ್ವಚ್ಛತೆಯಲ್ಲ. ಪ್ರತಿ ಊರು, ಗ್ರಾಮದ ನದಿ, ಹಳ್ಳವನ್ನು ಶುದ್ಧವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪುಗೊಳ್ಳಬೇಕು. ಇದೊಂದು ಸಾಮಾಜಿಕ ಕಳಕಳಿಯ ವಿಷಯವಾಗಬೇಕು.
ಅಲ್ಲದೇ ಆಂದೋಲನ ರೂಪದಲ್ಲಿ ಆಗಬೇಕು. ಬದುಕಿನ ಜತೆಗೆ ಜಲವಿರಲೇಬೇಕು, ಜೀವ ಜಲ ಮತ್ತು ಜಲ ಜೀವ ಉಳಿಸಲಿದೆ, ಪ್ರತಿ ಹನಿಯೂ ಗಂಗೆಯ ಆಂದೋಲನದ ರೂಪದಲ್ಲಿ ಆಗಬೇಕು ಎಂದು ಕರೆ ನೀಡಿದರು.
Advertisement